ಬೆಂಗಳೂರು: ನಟ ಅಂಬರೀಶ್ ಪಾರ್ಥಿವ ಶರೀರವನ್ನು ಎಚ್ಎಎಲ್ ನಲ್ಲಿ ವೀಕ್ಷಿಸಲು ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಆರೋಪಿಯಾಗಿರುವ ನಲಪಾಡ್ಗೆ ಅವಕಾಶ ಕೊಟ್ಟು ಬೆಂಗಳೂರು ಪೊಲೀಸರು ಈಗ ಮುಜುಗರಕ್ಕೆ ಒಳಗಾಗಿದ್ದಾರೆ.
ಸೋಮವಾರ ಬೆಳಗ್ಗೆ ಮಂಡ್ಯದ ವಿಶ್ವೇಶ್ವರಯ್ಯ ಸ್ಟೇಡಿಯಂನಿಂದ ವಾಯುಸೇನೆಯ ಹೆಲಿಕಾಪ್ಟರ್ ನಲ್ಲಿ ಅಂಬಿ ಪಾರ್ಥಿವ ಶರೀರವನ್ನು ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು. ಈ ಸಂದರ್ಭದಲ್ಲಿ ನಲಪಾಡ್ ಎಚ್ಎಎಲ್ ಪ್ರವೇಶಿಸಿದ್ದಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಗರಂ ಆಗಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ಕಾನೂನು ಪ್ರಕಾರ ನಲಪಾಡ್ ಒಳ ಪ್ರವೇಶಿಸಲು ಅವಕಾಶ ಇಲ್ಲ. ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಕೊಲೆ ಯತ್ನದ ಆರೋಪಿಯನ್ನು ಎಚ್ಎಎಲ್ ಒಳಗಡೆ ಬಿಟ್ಟಿದ್ದು ಭದ್ರತಾ ವೈಫಲ್ಯ. ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಗರಂ ಆಗಿದ್ದು, ಸ್ಥಳದಲ್ಲಿದ್ದ ಕಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ.
ನಲಪಾಡ್ ಎಚ್ಎಎಲ್ ಪ್ರವೇಶಿಸಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಕೇಳಿದ್ದಕ್ಕೆ ಕುಟುಂಬದ ಸದಸ್ಯರ ಜೊತೆ ಒಳಗಡೆ ಹೋಗಿದ್ದಾರೆ ಪೊಲೀಸರು ಹಾರಿಕೆಯ ಉತ್ತರ ನೀಡಿದ್ದರು. ವಿಐಪಿಗಳಿಗೆ ಮತ್ತು ಕುಟುಂಬಸ್ಥರಿಗೆ ಮಾತ್ರ ಅವಕಾಶ ನೀಡಿದ್ದರೂ ನಲಪಾಡ್ ಪ್ರವೇಶಿಸಿದ್ದು ಹೇಗೆ ಉತ್ತರ ನೀಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಈಗ ಸೂಚಿಸಿದ್ದಾರೆ. ಕೆಲವು ಪೊಲೀಸ್ ಅಧಿಕಾರಿಗಳ ಮುಂದೆಯೇ ನಲಪಾಡ್ ಎಚ್ಎಎಲ್ ಒಳಗಡೆ ಹೋಗಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ನಲಪಾಡ್ ಮೇಲೆ ಯಾವೆಲ್ಲ ಕೇಸ್ ಹಾಕಲಾಗಿದೆ?
ಐಪಿಸಿ ಸೆಕ್ಷನ್ 307(ಕೊಲೆ ಯತ್ನ), 341(ಅಕ್ರಮ ಬಂಧನ), 504(ಅವ್ಯಾಚ್ಯ ಶಬ್ಧಗಳಿಂದ ನಿಂದನೆ), 143, 144- 146, 147, 149 (ಅಕ್ರಮ ಗುಂಪುಗಾರಿಕೆ), 326(ಗಂಭೀರ ಗಾಯ), 506 ಬಿ (ಪ್ರಾಣಬೆದರಿಕೆ) ಕೇಸ್ ಹಾಕಲಾಗಿದೆ.