ಶ್ರೀನಗರ: ಪರಿಸರದಲ್ಲಿ ಪ್ರತಿಕೂಲ ವಾತಾವರಣ ಉಂಟಾಗಿರುವುದರಿಂದ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪಹಲ್ಗಾಮ್ನ ನುನ್ವಾನ್ ಶಿಬಿರದಿಂದ ಪವಿತ್ರ ಗುಹೆಯತ್ತ ತೆರಳಲು ಯಾತ್ರಾರ್ಥಿಗಳಿಗೆ ಅನುಮತಿ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೂ ದೇವರ ಫೋಟೋವಿದ್ದ ಪೇಪರ್ನಲ್ಲಿ ಕೋಳಿ ಮಾಂಸ ಮಾರಾಟ – ವ್ಯಕ್ತಿ ಅರೆಸ್ಟ್
ಅಮರನಾಥ ಯಾತ್ರಾರ್ಥಿಗಳ ಮೊದಲ ಬ್ಯಾಚ್ ಕಳೆದ ಗುರುವಾರ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಮೂಲ ಶಿಬಿರವನ್ನು ತಲುಪಿತ್ತು. ಕೋವಿಡ್ ಕಾರಣದಿಂದಾಗಿ ಸತತ ಎರಡು ವರ್ಷ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಈ ಬಾರಿ ಮತ್ತೆ ಆರಂಭವಾಗಿತ್ತು.
ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿ ಸ್ವಾಭಾವಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಲಿಂಗವನ್ನು ಹೊಂದಿರುವ ಗುಹಾ ದೇಗುಲ ಜಗತ್ಪ್ರಸಿದ್ಧವಾಗಿದೆ. ಯಾತ್ರಿಕರು ಬಹುತೇಕ ಕಾಲ್ನಡಿಗೆಯಲ್ಲೇ ಪ್ರಯಾಣಿಸುತ್ತಾರೆ. ಇದನ್ನೂ ಓದಿ: ಹುಟ್ಟುಹಬ್ಬ ಆಚರಣೆ- ಶಾಲಾ ವಿದ್ಯಾರ್ಥಿಗಳ ಗುಂಪಿನ ನಡುವೆ ಬಾಂಬ್ ದಾಳಿ
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಜಮ್ಮು ಬೇಸ್ ಕ್ಯಾಂಪ್ನಿಂದ 4,890 ಯಾತ್ರಾರ್ಥಿಗಳ ಮೊದಲ ಬ್ಯಾಚ್ಗೆ ಚಾಲನೆ ನೀಡಿದ್ದರು. ಅಮರನಾಥ ದೇಗುಲ ಮಂಡಳಿ (ಎಸ್ಎಎಸ್ಬಿ) ಸಹ ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಆನ್ಲೈನ್ ದರ್ಶನಕ್ಕೆ ಅವಕಾಶ ಕಲ್ಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶದ ಆರೋಗ್ಯ ಇಲಾಖೆಯು ಯಾತ್ರಾರ್ಥಿಗಳಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ವಿಶೇಷ ವ್ಯವಸ್ಥೆಗಳನ್ನು ಮಾಡಿದೆ. 109 ಬೇಸಿಕ್ ಲೈಫ್ ಸಪೋರ್ಟ್ ಅಂಬುಲೆನ್ಸ್ಗಳ ವ್ಯವಸ್ಥೆ ಸಹ ಇದೆ. ಪ್ರಾಥಮಿಕ ಚಿಕಿತ್ಸೆಯ ಸಾಮಾಗ್ರಿಗಳನ್ನು ಯಾತ್ರಾ ಮಾರ್ಗದಲ್ಲಿ ಅಲ್ಲಲ್ಲಿ ಇರಿಸಲಾಗಿದೆ. ಆಗಸ್ಟ್ 11ರವರೆಗೆ ಯಾತ್ರಿಕರು ಯಾತ್ರೆ ಮಾಡಬಹುದು.