ಬೆಳಗಾವಿ: ಜಮ್ಮು ಕಾಶ್ಮೀರದ ಪವಿತ್ರ ಯಾತ್ರಾ ಸ್ಥಳ ಅಮರನಾಥ ದರ್ಶನಕ್ಕೆ ತೆರಳಿದ 50ಕ್ಕೂ ಹೆಚ್ಚು ಜನರು ಶೇಷನಾಗ ಎಂಬ ಪ್ರದೇಶದಲ್ಲಿ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಸಿಕ್ಕಿದೆ.
ನಗರದ ಶಿವಾಜಿ ನಗರ, ಕಾಮತಗಲ್ಲಿ ಸೇರಿದಂತೆ ವಿವಿಧ ಕಡೆಗಳಿಂದ ಸುಮಾರು 55 ರಿಂದ 60 ಜನ ಅಮರನಾಥ ಯಾತ್ರೆಗೆ ಭಕ್ತರು ಪ್ರವಾಸ ಕೈಗೊಂಡಿದ್ದರು. ಆದರೆ ಅಮರನಾಥ ಪರ್ವತದಲ್ಲಿ ಮೇಘ ಸ್ಫೋಟ ಆಗಿ ದುರ್ಘಟನೆ ಸಂಭವಿಸಿದ್ದರಿಂದ ಕುಟುಂಬಸ್ಥರಲ್ಲಿ ಆತಂಕ ಮನೆಮಾಡಿತು. ಸದ್ಯ ದರ್ಶನಕ್ಕೆ ತೆರಳಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಮೈದುಂಬಿ ಧುಮ್ಮುಕ್ಕುತ್ತಿರುವ ಗೋಕಾಕ್ ಫಾಲ್ಸ್ನಲ್ಲಿ ಪ್ರವಾಸಿಗರ ಹುಚ್ಚಾಟ
ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯ ಶಿವಾಜಿ ಮಂಡೋಳಕರ ತಂಡದಲ್ಲಿ 32 ಜನರಿದ್ದು, ಅದನ್ನು ಹೊರತುಪಡಿಸಿ 20ಕ್ಕೂ ಹೆಚ್ಚು ಬೆಳಗಾವಿಗರು ದರ್ಶನ ಪಡೆದುಕೊಂಡು ವಾಪಸ್ ಬರುವಾಗ ಮೇಘ ಸ್ಟೋಟದಿಂದ ಅಮರನಾಥ ದೇವಸ್ಥಾನದಿಂದ 20ಕಿ.ಮೀ. ದೂರದಲ್ಲಿರುವ ಶೇಷನಾಗ ಎಂಬ ಪ್ರದೇಶದಲ್ಲಿ ಸುರಕ್ಷಿತವಾಗಿದ್ದಾರೆ.
ದರ್ಶನಕ್ಕೆ ತೆರಳಿದ್ದ ಶಿವಾಜಿ ನೇತೃತ್ವದ ತಂಡ ಮೊದಲಿಗೆ ಜಮ್ಮುಕಾಶ್ಮೀರದಿಂದ ಚಂದನವಾಡಿ, ಪೆಹಲಗಾಮ್ಗೆ ಬಂದು ಅಲ್ಲಿಂದ ಪಾದಯಾತ್ರೆ ಆರಂಭಿಸಿದ್ದು, ಸದ್ಯ ಧಾರಾಕಾರ ಮಳೆಗೆ ಸಂಭವಿಸಿದ ದುರ್ಘಟನೆಯಿಂದ ಶೇಷನಾಗದಲ್ಲಿ ಉಳಿದುಕೊಂಡಿದ್ದಾರೆ. ಇಲ್ಲವಾಗಿದ್ದರೆ ಶುಕ್ರವಾರವೇ ದರ್ಶನ ಪಡೆದುಕೊಂಡು ವಾಪಸ್ ಬರುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯ ಎಲ್ಲರು ಸೇಫ್ ಆಗಿದ್ದು ಅವರನ್ನು ಕರೆದುಕೊಂಡು ಬರಲು ಬೆಳಗಾವಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.