ನವದೆಹಲಿ: ಇಂಡಿಯಾ ಗೇಟ್ನಲ್ಲಿ ಕಳೆದ 50 ವರ್ಷಗಳಿಂದ ಉರಿಯುತ್ತಿರುವ ಅಮರ್ ಜವಾನ್ ಜ್ಯೋತಿ ಇನ್ಮುಂದೆ ಅಲ್ಲಿ ಬೆಳಗುವುದಿಲ್ಲ. ಗಣರಾಜ್ಯೋತ್ಸವಕ್ಕೂ ಮುನ್ನ, ಇಂದು ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿರುವ ಜ್ಯೋತಿಯೊಂದಿಗೆ ಇದನ್ನು ವಿಲೀನಗೊಳಿಸಲಾಗುವುದು.
ಅಮರ್ ಜವಾನ್ ಜ್ಯೋತಿಯನ್ನು ನಂದಿಸಲಾಗುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಇದಕ್ಕೆ ಕೇಂದ್ರದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ಅಲ್ಲಗಳೆದಿದೆ. ಇದನ್ನೂ ಓದಿ: ಕೆಲವರಿಗೆ ದೇಶ ಭಕ್ತಿ ಅರ್ಥವಾಗುವುದಿಲ್ಲ: ರಾಹುಲ್ ಗಾಂಧಿ
ಅಮರ್ ಜವಾನ್ ಜ್ಯೋತಿಯನ್ನು ನಂದಿಸಲಾಗುತ್ತಿಲ್ಲ. ಬದಲಿಗೆ ಅದನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ಯೋತಿಯೊಂದಿಗೆ ವಿಲೀನಗೊಳಿಸಲಾಗುತ್ತಿದೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಮೊದಲನೆಯ ಮಹಾಯುದ್ಧದಲ್ಲಿ ಮಡಿದ ಬ್ರಿಟಿಷ್ ಭಾರತೀಯ ಸೇನೆಯ ಸೈನಿಕರ ಸ್ಮರಣಾರ್ಥ ಇಂಡಿಯಾ ಗೇಟ್ ಅನ್ನು ಬ್ರಿಟಿಷರು ನಿರ್ಮಿಸಿದ್ದರು. 1971ರಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅಮರ್ ಜವಾನ್ ಜ್ಯೋತಿಯನ್ನು ಇಂಡಿಯಾ ಗೇಟ್ ಬಳಿ ಇರಿಸಿತ್ತು. ಇಂಡಿಯಾ ಗೇಟ್ನಲ್ಲಿ ಕೆತ್ತಲಾದ ಹೆಸರುಗಳು ವಿಶ್ವಯುದ್ಧ-1 ಮತ್ತು ಆಂಗ್ಲೋ ಆಫ್ಘನ್ ಯುದ್ಧದಲ್ಲಿ ಬ್ರಿಟಿಷರಿಗಾಗಿ ಹೋರಾಡಿದ ಯೋಧರದ್ದಾಗಿದೆ. ಇದು ವಸಾಹತುಶಾಹಿಯ ಗತಕಾಲದ ಸಂಕೇತ ಎಂದು ಸರ್ಕಾರ ತನ್ನ ನಿಲುವಿಗೆ ಸ್ಪಷ್ಟನೆಯನ್ನು ನೀಡಿದೆ. ಇದನ್ನೂ ಓದಿ: ರಾಷ್ಟ್ರಪಿತನ ಬಗ್ಗೆ ಅವಹೇಳನಕಾರಿ ಹೇಳಿಕೆ – ಕಾಳಿಚರಣ್ ಮಹಾರಾಜ್ ಬಂಧನ
1971ರ ಯುದ್ಧ ಸೇರಿದಂತೆ ಸ್ವಾತಂತ್ರ್ಯದ ನಂತರದ ಯುದ್ಧಗಳಲ್ಲಿ ಮಡಿದ ಭಾರತೀಯ ಸೈನಿಕರ ಹೆಸರನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಕೆತ್ತಲಾಗಿದೆ. ದೇಶದ ಯೋಧರಿಗೆ ನಿಜವಾಗಿಯೂ ಶ್ರದ್ಧಾಂಜಲಿ ಸಲ್ಲಿಸಬೇಕಿರುವುದು ಈ ಸ್ಮಾರಕದಲ್ಲಿ ಎಂದು ಸರ್ಕಾರ ತಿಳಿಸಿದೆ.
ದಶಕಗಳಷ್ಟು ಹಳೆಯದಾದ ಸಂಪ್ರದಾಯದಲ್ಲಿ ಬದಲಾವಣೆ ತಂದಿರುವುದಕ್ಕೆ ವಿರೋಧ ಪಕ್ಷಗಳು ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳನ್ನು ವ್ಯಕ್ತಪಡಿಸುತ್ತಿವೆ. ಈ ಟೀಕೆಗಳು ವಿಪರ್ಯಾಸ ಎಂದು ಹೇಳಿರುವ ಕೇಂದ್ರ ಸರ್ಕಾರ, ಜ್ಯೋತಿಯನ್ನು ವಿಲೀನಗೊಳಿಸುವ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.
ಜ್ಯೋತಿಯು ವಿಲೀನಗೊಳ್ಳುವ ರಾಷ್ಟ್ರೀಯ ಯುದ್ಧ ಸ್ಮಾರಕವು 40 ಎಕರೆ ವ್ಯಾಪ್ತಿಯಲ್ಲಿ ವಿಸ್ತಾರವಾಗಿದೆ. ಇದನ್ನು 2019ರಲ್ಲಿ 176 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಸ್ಮಾರಕವನ್ನು ಉದ್ಘಾಟಿಸಿದ್ದರು.