– ದಿನೇಶ್ ಗುಂಡೂರಾವ್ ಗೆ ಪರೋಕ್ಷ ಟಾಂಗ್
– ಶಾಸಕರು ಮೀಡಿಯಾ ಮುಂದೆ ಬಹಿರಂಗಪಡಿಸಬೇಡಿ
ಬೆಂಗಳೂರು: ಅತೃಪ್ತರನ್ನು ಕಾಂಗ್ರೆಸ್ ಕೈಬಿಟ್ಟಂತೆ ಕಾಣುತ್ತಿದೆ. ಯಾಕಂದರೆ ಇತ್ತೀಚೆಗಷ್ಟೇ ಸಚಿವ ಡಿಕೆಶಿವಕುಮಾರ್, ನಾವು ರಾಜೀನಾಮೆ ನೀಡುವವರನ್ನು ತಡೆಯುವುದಿಲ್ಲ. ಅವರ ಮನವೊಲಿಸುವ ಕೆಲಸಕ್ಕೂ ಕೈ ಹಾಕಲ್ಲ ಎಂದಿದ್ದರು. ಇದೀಗ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರು ಕೂಡ ಶಾಸಕ ಆನಂದ್ ಸಿಂಗ್ ಸಂಪರ್ಕಿಸುವ ಪ್ರಯತ್ನ ನಾನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಿವರ್ಸ್ ಆಪರೇಷನ್ ವಿಚಾರವನ್ನ ದಿನೇಶ್ ಗುಂಡೂರಾವ್ ಅವರನ್ನೇ ಕೇಳಿ. ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷರಲ್ವಾ ಎಂದು ಪ್ರಶ್ನಿಸಿದರು. ಅಲ್ಲದೆ ಅವರು ಹೇಳಿದ್ರೆ ಒಂದು ರೀತಿಯ ವಿಶೇಷ ಅರ್ಥ ಇರುತ್ತದೆ ಎಂದು ಹೇಳಿ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.
ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ನಮಗೆ ಆಘಾತ ತಂದಿದೆ. ಮುಂದಿನ ವಾರ ನಾನು ದೆಹಲಿಗೆ ಹೋಗಿ ರಾಹುಲ್ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸುವುದಾಗಿ ತಿಳಿಸಿದರು. ಅಲ್ಲದೆ ಶಾಸಕ ಆನಂದ್ ಸಿಂಗ್ ಸಂಪರ್ಕಿಸುವ ಪ್ರಯತ್ನ ನಾನು ಮಾಡಿಲ್ಲ. ಒಂದು ಹಂತದವರೆಗೆ ಅತೃಪ್ತರನ್ನು ಮನವೊಲಿಸಬಹುದು. ಆ ಹಂತ ದಾಟಿದ ಮೇಲೆ ಅವರ ನಿರ್ಧಾರ ಅವರಿಗೆ ಬಿಟ್ಟಿದ್ದು ಎಂದು ಖಡಕ್ ಆಗಿ ಹೇಳಿದ್ದಾರೆ.
ಸಿಎಂ ಅಮೇರಿಕ ಪ್ರವಾಸ ಮುಗಿಸಿ ಬಂದ ಬಳಿಕ ಜೆಡಿಎಸ್ ಕಾಂಗ್ರೆಸ್ ಶಾಸಕರೊಂದಿಗೆ ಚರ್ಚೆ ನಡೆಸುತ್ತೇವೆ. ನಾನು ಸಿಎಂ ಇಬ್ಬರು ಒಬ್ನೊಬ್ಬರೇ ಶಾಸಕರನ್ನ ಕರೆದು ಅವರ ಸಮಸ್ಯೆಗಳ ಬಗ್ಗೆ ಪ್ರತ್ಯೇಕ ಮಾತುಕತೆ ನಡೆಸುತ್ತೇವೆ. ಈ ಹಿಂದೆ ಜೆಡಿಎಸ್ ಕಾಂಗ್ರೆಸ್ ಜಂಟಿ ಶಾಸಕಾಂಗ ಸಭೆ ನಡೆಸುವ ಬಗ್ಗೆ ತೀರ್ಮಾನಿಸಿದ್ದೆವು. ಆದರೆ ಸಿಎಲ್ಪಿ (ಕಾಂಗ್ರೆಸ್ ಶಾಸಕಾಂಗ ಸಭೆ) ಯಲ್ಲಿ ಶಾಸಕರು ತಮ್ಮ ಎಲ್ಲ ಸಮಸ್ಯೆಗಳನ್ನ ಹೇಳಿಕೊಳ್ಳಲು ಆಗಲ್ಲ. ಪ್ರತ್ಯೇಕವಾಗಿಯೇ ಶಾಸಕರ ಜೊತೆ ಮಾತಾಡಲು ನಾನು ಸಿಎಂ ನಿರ್ಧರಿಸಿದ್ದೇವೆ ಎಂದರು.
ಇದೇ ವೇಳೆ ಶಾಸಕರು ಬಹಿರಂಗವಾಗಿ ಮಾಧ್ಯಮಗಳಿಗೆ ಮಾತಾಡೋದು ಬೇಡ. ಅವರ ಸಮಸ್ಯೆಗಳು, ಭಿನ್ನಾಭಿಪ್ರಾಯಗಳನ್ನ ನಮ್ಮ ಎದುರೇ ಹೇಳಿಕೊಳ್ಳಲಿ ಎಂದು ಮನವಿ ಮಾಡಿಕೊಂಡರು.