ದಾವಣಗೆರೆ: ನಾನು ಈಗ ಹಳೆಯ ರೇಣುಕಾಚಾರ್ಯ ಅಲ್ಲ. ಸದ್ಯ ಎಲ್ಲವನ್ನೂ ನಾನು ಸಮಾನವಾಗಿ ಸ್ವೀಕರಿಸುತ್ತೇನೆ ಎಂದು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಚಿವ ಸಂಪುಟ ಸಮರ್ಥವಾಗಿದೆಯಾ ಎಂಬ ಪ್ರಶ್ನೆಗೆ ಉತ್ತರಸಿದ ಅವರು, ಸಚಿವ ಸಂಪುಟ ರಚನೆ ಸಿಎಂ ಅವರ ವಿವೇಚನೆ ಬಿಟ್ಟ ವಿಚಾರ. ನಾನು ಅದನ್ನು ತೀರ್ಮಾನ ಮಾಡುವ ಜಡ್ಜ್ ಅಲ್ಲ. ಫೀಲ್ಡ್ಗೆ ಇಳಿಯುವಾಗ ಎಲ್ಲದಕ್ಕೂ ಸಜ್ಜಾಗಿರಬೇಕು. ನಾನು ಸನ್ಯಾಸಿ ಅಲ್ಲ, ರಾಜಕಾರಣಿ. ಸಚಿವ ಸ್ಥಾನ ಸಿಕ್ಕರೆ ಸಮರ್ಥವಾಗಿ ಕೆಲಸ ಮಾಡುತ್ತೇನೆ. ಸಿಗದಿದ್ರೆ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ ಎಂದರು.
ಇದೇ ವೇಳೆ ಕೇಂದ್ರ ಸರ್ಕಾರ ತಾಲಿಬಾನಿಗಳೊಂದಿಗೆ ಚರ್ಚಿಸಬೇಕು ಎಂಬ ಓವೈಸಿ ಹೇಳಿಕೆಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಓವೈಸಿ ಹೇಳಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ದೇಶದ್ರೋಹಿಗಳು ವಿರೋಧಿ ಹೇಳಿಕೆ ನೀಡುತ್ತಾರೆ. ತಾಲಿಬಾನ್ಗಳ ಜತೆ ಮಾತನಾಡುವ ಅಗತ್ಯವೇನಿದೆ. ಪಾಕಿಸ್ತಾನಕ್ಕೆ ಯಾವ ರೀತಿ ಪ್ರಧಾನಿ ಉತ್ತರ ನೀಡಿದ್ರೋ, ಅದೇ ರೀತಿ ತಾಲಿಬಾನ್ಗಳಿಗೆ ಉತ್ತರ ನೀಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಪೊಲೀಸ್ ಕೇಸ್ಗೆ ಹೆದರಿ ಮಗ ಆತ್ಮಹತ್ಯೆ – ವಿಚಾರ ತಿಳಿದ ತಾಯಿಯೂ ಸೂಸೈಡ್
ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ದೆಹಲಿಗೆ ಭೇಟಿ ನೀಡಿದ್ದೆ. ಮಗು ಅಳದಿದ್ದರೆ, ತಾಯಿಯೂ ಹಾಲು ಕುಡಿಸಲ್ಲ. ದಾವಣಗೆರೆ ಜಿಲ್ಲೆ ಸಚಿವ ಸ್ಥಾನ ನೀಡಲು ವರಿಷ್ಠರಿಗೆ ಮನವಿ ಮಾಡಿದ್ದೇನೆ. ನಾನು ಆಶಾವಾದಿಯಾಗಿದ್ದೇನೆ. ಆತ್ಮವಿಶ್ವಾಸ ಕಳೆದುಕೊಂಡಿಲ್ಲ, ರಾಜಕಾರಣದಲ್ಲಿ ಮುಜಗರ ಇರಬಾರದು. ಜಿಲ್ಲೆಗೊಂದು ಸಚಿವ ಸ್ಥಾನದ ಭರವಸೆ ಇದೆ. ಜಿಲ್ಲೆಯ ಐದೂ ಜನರು ಒಗ್ಗಟ್ಟಾಗಿದ್ದೇವೆ. ಜಿಲ್ಲೆಯಲ್ಲಿ ಹಿರಿಯರು ಎಸ್.ಎ. ರವೀಂದ್ರನಾಥ್, ನಾನು ಮೂರು ಬಾರಿ ಶಾಸಕನಾಗಿದ್ದೇನೆ. ಅವಕಾಶ ಸಿಕ್ಕಾಗ ನಾವೆಲ್ಲರೂ ಪ್ರತ್ಯೇಕವಾಗಿ ಮಂತ್ರಿ ಸ್ಥಾನಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ರಸ್ತೆ ಬಿಟ್ಟು ಮನೆ ಛಾವಣಿ ಹತ್ತಿ ನಿಂತ ಆಟೋ!
ಪಕ್ಷ, ಸಂಘಟನೆ ತಾಯಿ ಇದ್ದಂತೆ. ಮಾಜಿ ಸಿಎಂ ಬಿಎಸ್ವೈ ತಂದೆ ಸಮಾನ. ಸಿಎಂ ಬೊಮ್ಮಾಯಿ ಸಹೋದರರಿದ್ದಂತೆ ಎಂದು ಶಾಸಕರು ವ್ಯಾಖ್ಯಾನಿಸಿದರು. ಸಚಿವ ಸಂಪುಟ ರಚನೆಗೆ ಮುನ್ನ ಮಾಧ್ಯಮಗಳಲ್ಲಿ ನನ್ನ ಹೆಸರೂ ಓಡುತ್ತಿತ್ತು. ಸಚಿವರ ಅಂತಿಮ ಪಟ್ಟಿಯಲ್ಲಿ ನನ್ನ ಹೆಸರಿತ್ತು ಎಂದು ಕೇಳಿದ್ದೆ. ಕೊನೆಯಲ್ಲಿ ಘಳಿಗೆಯಲ್ಲಿ ಸಚಿವ ಸ್ಥಾನ ಕೈತಪ್ಪಿತು. ಅವಕಾಶ ಸಿಕ್ಕಿಲ್ಲ ಅಂತಾ ಮನಸ್ಥಿತಿ ಕುಗ್ಗಿಲ್ಲ, ಕುಗ್ಗಬಾರದು. ನಾಲ್ಕು ಸಚಿವ ಸ್ಥಾನ ಖಾಲಿ ಇದೆ. ಅದರಲ್ಲಿ ನಮ್ಮ ಜಿಲ್ಲೆಗೊಂದು ಸಿಗುತ್ತೆ ಎನ್ನುವ ಭರವಸೆ ಇದೆ. ನಮ್ಮಲ್ಲಿ ಅಸಮಧಾನವೂ ಇಲ್ಲ, ಸಮಾಧಾನವೂ ಇಲ್ಲ. ಸಚಿವನಾಗಿಲ್ಲ ಎಂದು ನಿರಾಶನಾಗಿಲ್ಲ, ಆಶಾವಾದಿಯಾಗಿದ್ದೇನೆ ಕಾಯುತ್ತೇನೆ ಎಂದರು. ಇದನ್ನೂ ಓದಿ: 60 ವರ್ಷದಲ್ಲಿ ಆಗದ ಅಭಿವೃದ್ಧಿ ಕಾರ್ಯಗಳು ಮೋದಿ ಅವಧಿಯಲ್ಲಿ ನಡೆದಿದೆ: ರಾಜೀವ್ ಚಂದ್ರಶೇಖರ್