ಬೆಂಗಳೂರು: ನಾನು ಎಲ್ಲಿಗೂ ಪ್ರಚಾರಕ್ಕೆ ಹೋಗಲ್ಲ. ಕರ್ನಾಟಕ ಬಿಟ್ಟು ನಾನು ಎಲ್ಲಿಯೂ ಹೋಗಲ್ಲ. ನನಗೆ ಇಲ್ಲಿಯೇ ಕೆಲಸ ಮಾಡಬೇಕು. ಗುಜರಾತ್ ಪ್ರಚಾರಕ್ಕೆ ನಾನ್ಯಾಕೆ ಹೋಗಲಿ? ಸ್ವೀಟ್ ತಿನ್ನೋಕೆ ಹೋಗ್ಲಾ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಬೇಕಾದಷ್ಟು ರಾಷ್ಟ್ರೀಯ ನಾಯಕರಿದ್ದಾರೆ. ಗುಜರಾತ್ಗೆ ಡಿ ಕೆ ಶಿವಕುಮಾರ್ ಹೋಗಬಹುದು. ನಾನು ಡಿಸೆಂಬರ್ 13 ರಿಂದ ರಾಜ್ಯ ಪ್ರವಾಸ ಮಾಡುತ್ತೇನೆ. ಪಕ್ಷದ ವತಿಯಿಂದಲೂ ಪ್ರಚಾರ ನಡೆಯಲಿದೆ. ಸರ್ಕಾರದ ಕಾರ್ಯಕ್ರಮದಲ್ಲಿ ಪಕ್ಷದ ಅಧ್ಯಕ್ಷರು ಬರಲ್ಲ. ಪಕ್ಷದ ಕಾರ್ಯಕ್ರಮಕ್ಕೆ ಅವರು ಕರೆದಾಗ ನಾನೇ ಹೋಗ್ತೇನೆ. ಪಕ್ಷದ ಅಧ್ಯಕ್ಷರು, ನಾನು ಮಾರ್ಚ್ನಲ್ಲಿ ಪ್ರಚಾರ ಮಾಡುತ್ತೇವೆ. ಒಟ್ಟಾಗಿ ಪ್ರಚಾರ ಮಾಡುತ್ತೇವೆ. ಬಿಜೆಪಿಯವರಂತೆ ನಾನು ತಮಟೆ ಹೊಡೆದುಕೊಂಡು ಹೋಗಲ್ಲ ಅಂತ ಹೇಳಿದ್ರು.
ಬಿಜೆಪಿಯವರು ಸಾಂಕೇತಿಕವಾಗಿಯಾದರೂ ಪ್ರತಿಭಟನೆ ಮಾಡಲಿ ಅಥವಾ ಸಾಂಕ್ರಾಮಿಕವಾಗಿಯಾದರೂ ಮಾಡಲಿ. ವಿನಯ್ ಕುಲಕರ್ಣಿಗೆ ಕಳಂಕ ತರಬೇಕು, ಅವರ ಹೆಸರಿಗೆ ಮಸಿ ಬಳಿಯಬೇಕು ಅಂತಾ ಈ ರೀತಿ ಮಾಡುತ್ತಿದ್ದಾರೆ. ಈಗಾಗಲೇ ಯೋಗಿಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಗಿದೆ. ಗಣಪತಿ ಪ್ರಕರಣದಲ್ಲಿ ಜಾರ್ಜ್ ವಿರುದ್ಧ ಸುಪ್ರಿಂ ಕೋರ್ಟ್ ಏನಾದ್ರೂ ಹೇಳಿದೆಯಾ ಅಂತ ಪ್ರಶ್ನಿಸಿದ್ರು.
ಯಡಿಯೂರಪ್ಪ ಮೇಲೆ 20 ಕೇಸ್ ಗಳಿವೆ. ಉತ್ತರಪ್ರದೇಶದ ಮುಖ್ಯಮಂತ್ರಿ ಮೇಲೆ ಸಾಕಷ್ಟು ಪ್ರಕರಣಗಳಿವೆ. ಅನಂತ ಕುಮಾರ್ ಹೆಗಡೆ ಮೇಲೆ ಎಫ್ಐಆರ್ ಆಗಿದೆ. ಜಿಗಜಿಣಗಿ ಮೇಲೆ ಕೇಸ್ ಗಳಿವೆ. ಮೊದಲು ಅವರು ರಾಜೀನಾಮೆ ನೀಡಲಿ. ಬಿಜೆಪಿಯವರಿಗೆ ಸಂವಿಧಾನ ಹಾಗೂ ಅಂಬೇಡ್ಕರ್ ಬಗ್ಗೆ ಗೌರವವಿಲ್ಲ. ಅದಕ್ಕೆ ಧರ್ಮಸಂಸದ್ ನಲ್ಲಿ ಸಂವಿಧಾನ ಪುನಾರಚನೆ ಬಗ್ಗೆ ಮಾತನಾಡಿರೋದು ಅಂತ ಅವರು ಬಿಜೆಪಿ ವಿರುದ್ಧ ಕೆಂಡಾಮಂಡಲರಾದ್ರು.
ನಿಮ್ಮ ಪಕ್ಷದಲ್ಲಿಯೇ ಇರುತ್ತೇನೆ ಅಂತ ಯೋಗೇಶ್ವರ್ ಹೇಳಿದ್ದರು. ಅವರು ಅಸೆಂಬ್ಲಿಗೇ ಬರಲ್ಲ. ಅಸೆಂಬ್ಲಿಯಲ್ಲಿ ಚನ್ನಪಟ್ಟದ ಬಗ್ಗೆ ಏನಾದ್ರೂ ಮಾತಾಡಿದ್ರಾ. ಅಲ್ಲಿನ ಎಲ್ಲ ಕೆಲಸಗಳಿಗೆ ನಾನು ಹಣ ಬಿಡುಗಡೆ ಮಾಡಿದ್ದೆ. ಅವರು ಮನೆಯಿಂದ ತಂದಿದ್ರಾ? ಹಣ ನಾವು ಕೊಟ್ಟಿದ್ದು. ತಮ್ಮನನ್ನ ಜಿ.ಪಂ ಅಧ್ಯಕ್ಷನನ್ನಾಗಿಯೂ ಮಾಡಿದ್ದೆವು. ಈಗ ಅಸಾಮಿ ಬಿಜೆಪಿಗೆ ಹೋಗಿದ್ದಾನೆ. ಇವರಿಗೇ ನೆಲೆ ಇಲ್ಲ. ನಮ್ಮ ಶಾಸಕರನ್ನು ನಿಮ್ಮನ್ನ ಮಂತ್ರಿ ಮಾಡಿಸ್ತೇನೆ ಬಿಜೆಪಿಗೆ ಬನ್ನಿ ಅಂತ ಕರಿತಾರೆ ಅಂತ ಯೋಗೇಶ್ವರ್ ಬಗ್ಗೆ ಸಿಎಂ ವ್ಯಂಗ್ಯವಾಡಿದ್ರು.