ಚಾಮರಾಜನಗರ: ನಾನು ಈಗ ರಾಜಕೀಯ ಕೊನೆಗಾಲದಲ್ಲಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸತ್ತೇಗಾಲ ಸರ್ಕಾರಿ ಶಾಲಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಏನಿಲ್ಲ ಅಂದ್ರು 20 ಬಾರಿ ಚಾಮರಾಜನಗರಕ್ಕೆ ಬಂದಿದ್ದೇನೆ. ನಾನು ಚಾಮರಾಜನಗರಕ್ಕೆ ಬಂದಾಗಲೆಲ್ಲ ಅಧಿಕಾರ ಕಳೆದುಕೊಂಡಿಲ್ಲ. ಬದಲಿಗೆ ಸಿಎಂ ಖುರ್ಚಿ ಗಟ್ಟಿಯಾಗಿದೆ. ನಾನು ಈಗ ರಾಜಕೀಯ ಕೊನೆಗಾಲದಲ್ಲಿದ್ದೇನೆ. ಜನರ ಪ್ರೀತಿ ಅಭಿಮಾನ ಗಳಿಸದೆ ಇದ್ರೆ ರಾಜಕೀಯದಲ್ಲಿ ಉಳಿಗಾಲ ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ನನ್ನ ಕೊನೆ ಉಸಿರು ಇರೋವರೆಗೂ ರಾಜಕೀಯ ಮಾಡ್ತೀನಿ: ಹೆಚ್.ಡಿ ದೇವೇಗೌಡ
ಈ ಬಿಜೆಪಿಯವ್ರು ನಾವು ಕೊಡೊ ಗೃಹಲಕ್ಷ್ಮಿ ಯೋಜನೆಯಿಂದ ಅತ್ತೆ-ಸೊಸೆಗೆ ಜಗಳ ತಂದಿಟ್ರು ಎಂದು ಅಪಪ್ರಚಾರ ಮಾಡಿದ್ರು. ಬಿಜೆಪಿಯವರಿಗೆ ಬರಿ ಇದೆ ಕೆಲಸ. ನಿಮಗೆ ಉಚಿತವಾಗಿ ಅಕ್ಕಿ ಕೊಡ್ತಾಯಿರೋರು ಯಾರು? ನಾನು ಮೊದಲು ಬಾರಿ ಸಿಎಂ ಆದಾಗ 5 ಕೆಜಿ ಉಚಿತವಾಗಿ ಕೊಟ್ಟೆ. ಈಗ 10 ಕೆಜಿ ನೀಡುತ್ತೇವೆ ಅಂದ್ರೆ ಕೇಂದ್ರದವರು ಅಡ್ಡಗಾಲು ಹಾಕಿದ್ದಾರೆ. ಫ್ರೀಯಾಗಿ ಏನನ್ನೂ ಕೊಡ್ಬೇಡಿ ಮೋದಿಯವರೇ, ಒಂದು ಕೆಜಿಗೆ 34 ರೂಪಾಯಿ ಕೊಡುತ್ತೇವೆ ಎಂದು ತಿಳಿಸಿದರು.
ನಾನು ಬರಿಗಾಲಲ್ಲಿ ಶಾಲೆಗೆ ಹೋಗಬೇಕಿತ್ತು. ಅದಕ್ಕೆ ಕಳೆದ ಬಾರಿ ಸಿಎಂ ಆಗಿದ್ದಾಗ ಪ್ರತಿ ವಿದ್ಯಾರ್ಥಿಯು ಶೂ ಹಾಕೊಳ್ಳೇಬೇಕು ಸಾಕ್ಸ್ ಹಾಕೊಳ್ಳೇಬೇಕು ತಾರತಮ್ಯ ಇರಬಾರದು ಅಂತ ಶೂ ಭಾಗ್ಯ ಜಾರಿಗೆ ತಂದೆ. ಪ್ರತಿಯೊಬ್ಬರೂ ಕೂಡ ಓದಬೇಕು. ನಾನು ಓದದೆ ಇದ್ದರೆ ಸಿಎಂ ಆಗೋಕೆ ಆಗ್ತಿತ್ತಾ? ನಿಮ್ಮ ಮುಂದೆ ನಿಂತುಕೊಂಡು ಭಾಷಣ ಮಾಡೋಕೆ ಆಗ್ತಿತ್ತಾ ಎಂದು ಕೇಳಿದರು. ಇದನ್ನೂ ಓದಿ: ಪವರ್ ಶೇರಿಂಗ್ – ಹೈಕಮಾಂಡ್ನಲ್ಲಿ ಆಗಿರೋ ತೀರ್ಮಾನದ ವಿಚಾರ ಅವರಿಬ್ಬರಿಗೆ ಗೊತ್ತು: ಮುನಿಯಪ್ಪ
ಮೈಸೂರಿನ ಅವಿಭಾಜ್ಯ ಈ ಚಾಮರಾಜನಗರ ಜಿಲ್ಲೆ. ಜೆ.ಹೆಚ್.ಪಟೇಲರಿಗೆ ಚಾಮರಾಜನಗರಕ್ಕೆ ಹೋದ್ರೆ ಅಧಿಕಾರ ಕಳೆದುಕೊಳ್ಳುತ್ತೀರಾ ಅಂತ ಆಗಿನ ಕೆಲ ಶಾಸಕರು ಹೇಳಿದ್ರು. ಪಾಪ ಆಗಿನಿಂದ ಆ ಕಳಂಕ ಚಾಮರಾಜನಗರ ಮೇಲಿದೆ. ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿ ಚಾಮರಾಜನಗರಕ್ಕೆ ಬಂದಿದ್ದೇನೆ. ಈ ಮೂಢನಂಬಿಕೆಯನ್ನು ರಾಚಯ್ಯ ಅವ್ರು ನಂಬಲಿಲ್ಲ, ನಾನು ನಂಬಲಿಲ್ಲ. ಚಾಮರಾಜನಗರಕ್ಕೆ ಬಂದು ಹೊಸ ಜಿಲ್ಲೆ ಘೋಷಣೆ ಮಾಡಿದ್ವಿ. ಆಗ ನಾನು ಉಪಮುಖ್ಯಮಂತ್ರಿ. ನಾವು ಚಾಮರಾಜನಗರಕ್ಕೆ ಬಂದು ಜಿಲ್ಲೆಯನ್ನ ಘೋಷಣೆ ಮಾಡಿದ್ವು ಎಂದು ನೆನೆಪಿಸಿಕೊಂಡರು.
ಸತ್ತೇಗಾಲ ಪಟ್ಟಣ ಪಂಚಾಯ್ತಿ ಮಾಡೋದಾಗಿ ಸಿಎಂ ಭರವಸೆ ಕೊಳ್ಳೇಗಾಲ ತಾಲೋಕಿನ ಸತ್ತೇಗಾಲ ಗ್ರಾಮದಲ್ಲಿ 13 ಸಾವಿರ ಮತದಾರರಿದ್ದಾರೆ. ಹೀಗಾಗಿ ಪಟ್ಟಣ ಪಂಚಾಯಿತಿ ಮಾಡಲು ಶಾಸಕ ಮಂಜುನಾಥ್ ಮನವಿ ಮಾಡಿದ್ದಾರೆ. ಅದನ್ನು ಸಹ ಮಾಡಿಕೊಡೋಣ ಎಂದ ಸಿಎಂ ಭರವಸೆ ನೀಡಿದರು.