– ಸಚಿವ, ಶಾಸಕರ ವಿರುದ್ಧ ವಾಗ್ದಾಳಿ
ತುಮಕೂರು: ನೀರುಗಂಟಿ ಕೆಲಸ ಮಾಡೋದೂ ದೇಶ ಸೇವೆಯಿದ್ದಂತೆ. ಪ್ರಧಾನಿ ಮೋದಿ ಹೇಳಿದಂತೆ ನಾನೂ ನೀರುಗಂಟಿ ಕೆಲಸ ಮಾಡಿ ಕಾವಲುಗಾರನಾಗುತ್ತೇನೆ ಎಂದು ಸಂಸದ ಜಿ.ಎಸ್.ಬಸವರಾಜು ಸಚಿವ ರೇವಣ್ಣನಿಗೆ ಟಾಂಗ್ ಕೊಟ್ಟಿದ್ದಾರೆ.
ಬಸವರಾಜು ಒಬ್ಬ ಅನ್ಪಿಟ್ ವ್ಯಕ್ತಿ. ಹೇಮಾವತಿ ಡ್ಯಾಂ ಕೀ ಅವರಿಗೇ ಕೊಡುತ್ತೇನೆ, ನೀರು ಹರಿಸಿಕೊಳ್ಳಲಿ ಎಂದು ಸಚಿವ ರೇವಣ್ಣ ಹೇಳಿದ್ದರು. ಇದಕ್ಕೆ ತುಮಕೂರಿನಲ್ಲಿ ಪ್ರತಿಕ್ರಿಯಿಸಿದ ಬಸವರಾಜು ಸಚಿವ ರೇವಣ್ಣ ಗೋರೂರು ಡ್ಯಾಂ ಕೀ ಕೊಟ್ಟರೆ ಕಾವಲುಗಾರನಂತೆ ಕೆಲಸ ಮಾಡುತ್ತೇನೆ. ಜಿಲ್ಲೆಯ ಜನತೆಗೆ ಒಳ್ಳೆಯದಾಗಲಿದೆ ಅಂದರೆ ನೀರುಗಂಟಿ ಕೆಲಸ ಮಾಡಲೂ ಸಿದ್ಧ ಎಂದು ಹೇಳುವ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಅನ್ಫಿಟ್ ಅನ್ನುವ ಪದದ ಅರ್ಥ ರೇವಣ್ಣಗೆ ಗೊತ್ತಿಲ್ಲ. ಅವರಂತೆ ಸ್ವಾರ್ಥಕ್ಕಾಗಿ ಮೂರ್ಖತನದ ಪರಮಾವಧಿ ಮಾಡಲ್ಲ. 17ಟಿಎಂಸಿ ಬದಲಿಗೆ 45ಟಿಎಂಸಿ ನೀರನ್ನ ಉಪಯೋಗಿಸಿಕೊಂಡು ಎಲ್ಲರಿಗೂ ನಾಮ ಹಾಕ್ಕೊಂಡು, ನಾಲೆ ಒಡೆಯುವಂಥವರಿಗೆ ನಾವು ಬಲಿಯಾಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಎಸ್ ಆರ್.ಶ್ರೀನಿವಾಸ್ ವಿರುದ್ಧವೂ ಕಿಡಿಕಾರಿದ ಸಂಸದ, ಅವನ್ಯಾರೋ ನಮ್ಮ ಜಿಲ್ಲೆಯ ಕ್ಷೇತ್ರದ ಶಾಸಕನಾಗಿ ನೀರು ಹೇಗೆ ತರ್ತಾರೋ ನೋಡೋಣ ಅಂತಾನಲ್ಲ ಅವನಿಗೆ ಮರ್ಯಾದೆ ಇದ್ದರೆ ಹಾಗೆ ಮಾತಾಡುತ್ತಿರಲಿಲ್ಲ. ಶಾಸಕನಾಗಿ ಒಂದು ಕೆರೆಯನ್ನೂ ತುಂಬಿಸೋಕೆ ಯೋಗ್ಯತೆ ಇಲ್ಲ. ಮಾನಮರ್ಯಾದೆ ಇದ್ದಿದ್ರೆ ಈ ರೀತಿಯಾದ ಹೇಳಿಕೆ ನೀಡುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.