ಚಾಮರಾಜನಗರ: ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದ ವಿಷ ದುರಂತದಲ್ಲಿ ತಂದೆ-ತಾಯಿ ಕಳೆದುಕೊಂಡ ಅನಾಥರಾಗಿದ್ದ ಮಕ್ಕಳಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆ ಆಸರೆಯಾಗಿ ಪರಿಹಾರ ಧನವನ್ನು ಕೂಡ ನೀಡಿದೆ.
ಮಂಗಳವಾರ ಪ್ರಿಯಾ ಮನೆಗೆ ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಕುರಿಯನ್ ಭೇಟಿ ನೀಡಿ ಒಂದು ಲಕ್ಷ ರೂ. ಹಣವನ್ನು ನೀಡಿದ್ದಾರೆ. ಈಗಾಗಲೇ ಉನ್ನತ ಶಿಕ್ಷಣ ಪಡೆದು ಉದ್ಯೋಗಕ್ಕೆ ಸೇರುವ ತನಕ ಉಚಿತ ಶಿಕ್ಷಣ, ಹಾಸ್ಟೆಲ್ ವ್ಯವಸ್ಥೆ ಹಾಗೂ ಉದ್ಯೋಗ ಕಲ್ಪಿಸುವ ಜವಬ್ದಾರಿಯನ್ನು ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವ ಅವರು ಹೊತ್ತುಕೊಂಡಿದ್ದಾರೆ.
ಇನ್ನೂ ಮಾರಮ್ಮ ವಿಷ ಪ್ರಸಾದದಿಂದ ಮೃತಪಟ್ಟಿದ್ದ ಕುಟುಂಬದವರಿಗೆ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ಪರಿಹಾರ ಧನ ನೀಡುವುದಾಗಿ ಹೇಳಿದ್ದರು. ಅದರಂತೆಯೇ ಮೃತ ಕುಟುಂಬವರ ಮನೆಗೆ ಹೋಗಿ 5 ಲಕ್ಷ ಪರಿಹಾರ ಧನದ ಚೆಕ್ ವಿತರಣೆ ಮಾಡಿದ್ದಾರೆ. ಬಿದರಹಳ್ಳಿ, ಸುಳ್ವಾಡಿ, ಕೋಟೆಪೊದೆ, ಗೋಡೆಸ್ನಗರ, ವಡ್ಡರದೊಡ್ಡಿ, ಎಂಜಿ ದೊಡ್ಡಿ, ಮಲೆಮಹದೇಶ್ವರ ಬೆಟ್ಟ, ದೊಡ್ಡಹಾಣೆ ಮತ್ತು ತುಳಸಿಕೆರೆ ಗ್ರಾಮಗಳು ಸೇರಿದಂತೆ ಒಟ್ಟು 15 ಮಂದಿಗೆ ಸರ್ಕಾರದದಿಂದ 5 ಲಕ್ಷ ರೂ. ಹಾಗೂ ಕೆಪಿಸಿಸಿಯಿಂದ 50 ಸಾವಿರ ರೂ. ನೀಡಿದ್ದಾರೆ. ಶಾಸಕ ನರೇಂದ್ರ 50 ಸಾವಿರ, ಸಂಸದ ಆರ್.ಧೃವನಾರಯಣ್ 50 ಸಾವಿರ ರೂ. ಹಾಗೂ ದಿನನಿತ್ಯ ಬಳಕೆ ವಸ್ತುಗಳು ಪೂರೈಕೆ ಮಾಡಿದ್ದಾರೆ.
ಮಾರಮ್ಮ ವಿಷ ದುರಂತದಲ್ಲಿ ಕೃಷ್ಣ ನಾಯ್ಕ್ ಮತ್ತು ಮೈಲಿಬಾಯಿ ದಂಪತಿ ಇಬ್ಬರು ಮೃತಪಟ್ಟಿದ್ದರು. ಆದರೆ ಇವರಿಗೆ ರಾಣಿಬಾಯಿ, ಪ್ರಿಯಾಬಾಯಿ ಮತ್ತು ರಾಜೇಶ್ ಮೂವರು ಮಕ್ಕಳಿದ್ದು, ತಂದೆ-ತಾಯಿ ಅಗಲಿಕೆಯಿಂದ ಅನಾಥರಾಗಿದ್ದರು. ಇಬ್ಬರು ಹೆಣ್ಣು ಮಕ್ಕಳು ನರ್ಸಿಂಗ್ ಮಾಡುತ್ತಿದ್ದು, ಮಗ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ. ಈ ವೇಳೆ ಇವರ ಆಸರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಮುಂದಾಗಿ, ಮೂವರು ಮಕ್ಕಳನ್ನು ದತ್ತು ಪಡೆಯುವುದಾಗಿ ಹೇಳಿತ್ತು. ಅಷ್ಟೇ ಅಲ್ಲದೇ ಅವರ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ಭರಿಸಲು ಆಳ್ವಾಸ್ ಸಂಸ್ಥೆ ತೀರ್ಮಾನ ಮಾಡಿತ್ತು.
ಮಾಧ್ಯಮಗಳಲ್ಲಿ ಸುಳ್ವಾಡಿ ದೇವಾಲಯ ವಿಷಪ್ರಸಾದದ ಸುದ್ದಿ ಪ್ರಸಾರವಾಗುತ್ತಿತ್ತು. ಇದನ್ನು ನೋಡಿದ ಆಳ್ವಾಸ್ ಮುಖ್ಯಸ್ಥ ಡಾ. ಮೋಹನ್ ಆಳ್ವಾ ಅವರು ಸ್ಪಂದಿಸಿ, ದುರಂತದಿಂದ ಅನಾಥರಾಗಿರುವ ಮೂವರು ಮಕ್ಕಳನ್ನು ದತ್ತು ಪಡೆಯುತ್ತೇವೆ. ಅವರ ತಂದೆ-ತಾಯಿ ಜಾಗದಲ್ಲಿ ನಿಂತು ಅವರು ವಿದ್ಯಾಭ್ಯಾಸದ ಖರ್ಚನ್ನು ಭರಿಸುತ್ತೇವೆ. ಈಗ ಅವರು ಕಲಿಯುತ್ತಿದ್ದ ಸ್ಥಳದಿಂದ ನಮ್ಮ ಸಂಸ್ಥೆಗೆ ವರ್ಗಾವಣೆ ಮಾಡಿಸಿಕೊಳ್ಳುತ್ತೇವೆ. ಬಳಿಕ ಅವರ ವಿದ್ಯಾಭ್ಯಾಸ ಮುಗಿಸಿ, ಉದ್ಯೋಗ ಪಡೆಯುವವರೆಗೂ ನಾವು ಮೂವರ ಮಕ್ಕಳ ಜವಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv