ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಕ್ಯಾಬಿನೆಟ್ ಫೈನಲ್ ಆಗಿದೆ. ನೂತನ ಸಚಿವರ ಅಧಿಕೃತ ಪಟ್ಟಿ ಬಿಡುಗಡೆ ಆಗಿದೆ. 17 ಮಂದಿ ಸಚಿವರ ಪೈಕಿ ನಾನೊಬ್ಬಳೇ ಮಹಿಳೆ ಅನ್ನೋ ಖುಷಿಯ ಜೊತೆಗೆ ಜವಾಬ್ದಾರಿಯೂ ಹೆಚ್ಚಾಗಿದೆ ಎಂದು ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಸಚಿವರ ಪಟ್ಟಿ ಬಿಡುಗಡೆಗೊಂಡ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬಾಲಚಂದ್ರ ಚಾರಕಿ ಹೊಳಿಗೆ ಸಚಿವ ಸ್ಥಾನ ಕೈ ತಪ್ಪಿರೋದು ಶಾಕ್ ಆಗಿದೆ. ಮುಂದಿನ ಲಿಸ್ಟ್ ನಲ್ಲಿ ಅವರನ್ನು ಪರಿಗಣಿಸಬಹುದು ಅನ್ನೋ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಹಳ ಸಂತೋಷವಾಗಿದೆ. ಹದಿನೇಳು ಜನರಲ್ಲಿ ನಾನೊಬ್ಬಳೇ ಮಹಿಳೆ. ಮಹಿಳೆಯರ ಅಭಿವೃದ್ಧಿ ಹಾಗೂ ಪ್ರವಾಹದಿಂದ ನಲುಗಿರುವ ಬೆಳಗಾವಿ ಭಾಗಕ್ಕೆ ಸಹಾಯವಾಗುವಂತೆ ಕೆಲಸ ಮಾಡುತ್ತೇನೆ. ಸಂಘಟನೆ, ಕೆಲಸವನ್ನು ನೋಡಿ ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದು ಅವರು ಹೇಳಿದರು.
ನನಗೆ ಸ್ಥಾನಮಾನ ಸಿಗುವ ಬಗ್ಗೆ ವಿಶ್ವಾಸವಿತ್ತು. ಖುಷಿಯ ಜೊತೆಗೆ ಜವಾಬ್ದಾರಿಯೂ ಹೆಚ್ಚಾಗಿದೆ. ಅನರ್ಹ ಶಾಸಕರು ಜೊತೆಗೆ ಇರೋದರಿಂದ ಸವಾಲು ಹೆಚ್ಚಾಗಿದೆ. ಅನರ್ಹ ಶಾಸಕರು ಜೊತೆಗೆ ಇರೋದ್ರಿಂದ ಸವಾಲು ಹೆಚ್ಚಾಗಿದೆ ಎಂದರು.
ಆಯ್ಕೆಗೊಂಡ 17 ಮಂದಿ ಶಾಸಕರು ಇಂದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ ರಾಜಭವನದಲ್ಲಿ ಹೊಸ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಸವರಾಜ ಬೊಮ್ಮಾಯಿ, ಜೆಸಿ ಮಾಧುಸ್ವಾಮಿ, ಜಗದೀಶ್ ಶೆಟ್ಟರ್, ವಿ.ಸೋಮಣ್ಣ, ಶಶಿಕಲಾ ಜೊಲ್ಲೆ, ಸಿಸಿ ಪಾಟೀಲ್, ಲಕ್ಷ್ಮಣ ಸವದಿ, ಆರ್.ಅಶೋಕ್, ಸಿಟಿ ರವಿ, ಡಾ.ಅಶ್ವಥ್ನಾರಾಯಣ್, ಗೋವಿಂದ ಕಾರಜೋಳ, ನಾಗೇಶ್, ಪ್ರಭು ಚೌಹಾಣ್, ಶ್ರೀರಾಮುಲು, ಈಶ್ವರಪ್ಪ, ಕೋಟ ಶ್ರೀನಿವಾಸ್ ಪೂಜಾರಿ, ಸುರೇಶ್ ಕುಮಾರ್ ಇವರೆಲ್ಲರೂ ಇಂದು ಸಚಿವರರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.