ಬೆಂಗಳೂರು: ಸಮ್ಮಿಶ್ರ ಸರ್ಕಾರ ಅಲ್ಪಮತದತ್ತ ಕುಸಿಯುತ್ತಿದ್ದು, ಪತನದಂಚಿಗೆ ತಲುಪಿದೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿದ್ದು, ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ಸಿಎಂ ಆಗಲಿದ್ದಾರೆ ಎಂದು ಕಮಲ ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ.
ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡು ಮೂರಂಕಿಯಿಂದ ಎರಡಂಕಿ ಸಮೀಪಕ್ಕೆ ಬಂದು ನಿಂತಿದೆ. ಇದರಿಂದ ಬಿಜೆಪಿ ಉತ್ಸಾಹದಲ್ಲಿದ್ದು, ಕೇಂದ್ರ ನಾಯಕರ ಸೂಚನೆಗೆ ಕಾಯುತ್ತಿದೆ ಎಂಬ ಮಾತು ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿದೆ.
ರಾಜೀನಾಮೆ ಅಂಗೀರಾದ ಕುರಿತು ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ನಡೆಯಲಿದ್ದು, ಇಂದು ನಡೆಯುವ ಬೆಳವಣಿಗೆಯನ್ನು ಬಿಜೆಪಿ ನಾಯಕರು ತುದಿಗಾಲಲ್ಲಿ ನಿಂತು ನೋಡುತ್ತಿದ್ದಾರೆ. ಒಂದು ವೇಳೆ ತೀರ್ಪು ಅತೃಪ್ತ ಶಾಸಕರ ಪರವಾಗಿ ಬಂದಲ್ಲಿ ಬಿಜೆಪಿಗೆ ಇನ್ನೂ ಬಲ ಬಂದಾಗುತ್ತದೆ. ಅಲ್ಲದೆ, ರಾಜ್ಯಪಾಲರು ಪ್ರಮುಖ ಪಾತ್ರ ವಹಿಸುವ ಸಂದರ್ಭ ಬರುವುದನ್ನೂ ಬಿಜೆಪಿ ಎದುರು ನೋಡುತ್ತಿದ್ದು, ಒಂದು ವೇಳೆ ರಾಜ್ಯಪಾಲರು ಪ್ರಮುಖ ಪಾತ್ರವಹಿಸಿದಲ್ಲಿ ದೆಹಲಿಯ ಬಿಜೆಪಿ ನಾಯಕರು ನೇರ ಎಂಟ್ರಿ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬುಧವಾರ ಮೈತ್ರಿ ಸರ್ಕಾರದ ನಡೆ ವಿರುದ್ಧ, ಸಿಎಂ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ, ಸುಧಾಕರ್ ಕೂಡಿ ಹಾಕಿದ್ದನ್ನು ಸಮರ್ಥವಾಗಿ ಬಳಿಸಿಕೊಂಡು ಬಿಜೆಪಿ ಪ್ರತಿಭಟನೆ ನಡೆಸಿದೆ. ಅತ್ತ ಸ್ಪೀಕರ್ ಭೇಟಿಯಾಗಿ ಅತೃಪ್ತ ಶಾಸಕರ ರಾಜೀನಾಮೆಯನ್ನು ಶೀಘ್ರವೇ ಅಂಗೀಕರಿಸುವಂತೆ ಮನವಿ ಮಾಡಿದೆ. ಅಲ್ಲದೆ, ರಾಜ್ಯಪಾಲರನ್ನೂ ಭೇಟಿ ಮಾಡಿ ಬೇಗನೇ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ಗೆ ಸೂಚಿಸುವಂತೆ ಮನವಿ ಮಾಡಿದೆ.