ಕೋಲಾರ: ಮೈತ್ರಿ ಪಕ್ಷಗಳ ನಾಯಕರು ನನ್ನ ಮಾತು ಕೇಳಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೇ ಬಿಜೆಪಿಯವರು ನನಗೆ 5 ಕೋಟಿ ರೂ. ನೀಡಲು ಬಂದಿದ್ದರು ಎಂದು ನಾಯಕರಿಗೆ ತಿಳಿಸಿದ್ದೆ. ಆಗಲೇ ಮೈತ್ರಿ ಪಕ್ಷಗಳ ನಾಯಕರು ನನ್ನ ಮಾತನ್ನು ಗಂಭೀರವಾಗಿ ಪರಿಗಣಿಸಿದ್ದರೆ, ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಮೈತ್ರಿ ಪಕ್ಷಗಳ ನಾಯಕರ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದರು.
ಒಂದು ಪಕ್ಷದ ಚಿಹ್ನೆಯಿಂದ ಗೆದ್ದು ಈ ರೀತಿ ನಡೆದುಕೊಳ್ಳಬಾರದು. ಅತೃಪ್ತ ಶಾಸಕರು ಬಂದು ಸರ್ಕಾರ ಉಳಿಸಬೇಕು. ಮುಖ್ಯಮಂತ್ರಿ ಕುಮಾರಸ್ವಾಮಿ ನಡೆ ಬಗ್ಗೆ ಯಾರೂ ಪ್ರಶ್ನೆ ಮಾಡಬಾರದು. ಅವರು ಉತ್ತಮ ವ್ಯಕ್ತಿತ್ವದ ಹೊಂದಿದ ವ್ಯಕ್ತಿ. ಶಾಸಕರು ಮರಳಿ ಬರಬೇಕು. ಸ್ಪೀಕರ್ ರಮೇಶ್ ಕುಮಾರ್ ಅನುಭವಿಗಳಾಗಿದ್ದು, ವಿಶ್ವಾಸಮತಯಾಚನೆ ವಿಚಾರದಲ್ಲಿ ಕಾನೂನು ಬದ್ಧವಾಗಿ ನಡೆದುಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅತೃಪ್ತ ಶಾಸಕರು ವಾಪಸ್ ಬಂದು ಮೈತ್ರಿ ಸರ್ಕಾರವನ್ನು ಉಳಿಸಬೇಕು ಎಂದು ಮನವಿ ಮಾಡುತ್ತೇನೆ. ಇಬ್ಬರು ಪಕ್ಷೇತರರಿಗೆ ಸಚಿವ ಸ್ಥಾನ ನೀಡಿರುವುದರಲ್ಲಿ ತಪ್ಪಿಲ್ಲ. ನನಗೂ ಸಚಿವ ಸ್ಥಾನ ನೀಡಿದ್ದರೆ ಬೇಡ ಎನ್ನುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.