ಅಪೆಂಡಿಕ್ಸ್ ಇಲ್ಲದಿದ್ರೂ ಹಣದ ಆಸೆಗೆ ಆಪರೇಷನ್- ಮಿಮ್ಸ್ ವೈದ್ಯರ ವಿರುದ್ಧ ಗಂಭೀರ ಆರೋಪ

Public TV
2 Min Read
mnd mems hospital

ಮಂಡ್ಯ: ಅಪೆಂಡಿಕ್ಸ್ ಇಲ್ಲದಿದ್ದರೂ ಹಣದಾಸೆಯಿಂದ ಮಂಡ್ಯ ಮಿಮ್ಸ್ ಆಸ್ಪತ್ರೆ ವೈದ್ಯ ಗೋಪಾಲಕೃಷ್ಣ ಆಪರೇಷನ್ ಮಾಡಲು ಮುಂದಾಗಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಕೇಶವಮೂರ್ತಿ ವೈದ್ಯರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಅಪೆಂಡಿಕ್ಸ್ ಇಲ್ಲದಿದ್ದರೂ ವೈದ್ಯರು ಆಪರೇಷನ್ ಮಾಡಲು ಮುಂದಾಗಿದ್ದಾರೆ. ಅದ್ದರಿಂದ ಅವರು ಮಾಧ್ಯಮ ಮುಂದೆಯೇ ಬಹಿರಂಗವಾಗಿ ಆಪರೇಷನ್ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಡಾಕ್ಟರ್ ಗೋಪಾಲಕೃಷ್ಣ ಅವರ ಬಳಿ ಯಾರೇ ಹೊಟ್ಟೆನೋವು ಎಂದು ಹೇಳಿಕೊಂಡು ಹೋದರೂ ಅವರಿಗೆ ಅಪೆಂಡಿಕ್ಸ್ ಇದೆ ಎಂದು ಹಣ ಕೇಳುತ್ತಾರೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಪರೀಕ್ಷಿಸುವ ಸಲುವಾಗಿ ನಾನು ಅವರ ಬಳಿ ಸುಳ್ಳು ಹೇಳಿಕೊಂಡು ಹೊಟ್ಟೆ ನೋವು ಎಂದು ಹೋಗಿದ್ದೆ. ನನ್ನನ್ನು ಖಾಸಗಿ ಸ್ಕ್ಯಾನಿಂಗ್ ಸೆಂಟರ್‍ನಲ್ಲಿ ತಪಾಸಣೆ ಮಾಡಿಸಿ, ನಿಮಗೆ ಅಪೆಂಡಿಕ್ಸ್ ಇದೆ ಎಂದು ಸುಳ್ಳು ಹೇಳಿ ಆಪರೇಷನ್ ಮಾಡಲು 5 ಸಾವಿರ ಖರ್ಚಾಗುತ್ತೆ ಎಂದು ಡಾಕ್ಟರ್ ಗೋಪಾಲಕೃಷ್ಣ ಹೇಳಿದ್ದರು. ಅಷ್ಟೇ ಅಲ್ಲದೇ ನನ್ನ ಬಳಿ ಒಂದೂವರೆ ಸಾವಿರ ಹಣ ಮುಂಗಡ ಪಡೆದು, ಆಪರೇಷನ್ ಮಾಡುವ ದಿನ ಉಳಿದ ಮೂರೂವರೆ ಸಾವಿರ ಹಣ ನೀಡುವಂತೆ ಹೇಳಿದ್ದಾರೆ ಎಂದು ಕೇಶವಮೂರ್ತಿ ಆರೋಪ ಮಾಡಿದ್ದಾರೆ.

vlcsnap 2018 09 09 13h59m16s315

ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಪರೀಕ್ಷೆ ನಡೆಸಲು ಸೌಲಭ್ಯವಿದ್ದರೂ ರೋಗಿಗಳನ್ನು ಖಾಸಗಿ ಸ್ಕ್ಯಾನಿಂಗ್ ಸೆಂಟರ್‍ಗೆ ಪರೀಕ್ಷೆ ಮಾಡಿಸಿಕೊಳ್ಳಲು ಕಳುಹಿಸುತ್ತಾರೆ. ಅಷ್ಟೇ ಅಲ್ಲದೇ ಡಾಕ್ಟರ್ ಗೋಪಾಲಕೃಷ್ಣ ಮತ್ತು ನಾನು ಅಪೆಂಡಿಕ್ಸ್ ಆಪರೇಷನ್ ಬಗ್ಗೆ ಮಾತನಾಡಿರುವುದು ಹಾಗೂ ನಾನು ಅವರಿಗೆ ದುಡ್ಡು ಕೊಟ್ಟಿರುವುದನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದೇನೆ. ಈ ಬಗ್ಗೆ ದಾಖಲೆಗಳ ಸಮೇತ ಜಿಲ್ಲಾಧಿಕಾರಿ ಮಂಜುಶ್ರೀ, ಮಿಮ್ಸ್ ನಿರ್ದೇಶಕರಾದ ಪ್ರಕಾಶ್ ಹಾಗೂ ಉಸ್ತುವಾರಿ ಸಚಿವ ಪುಟ್ಟರಾಜು ಅವರಿಗೆ ದೂರು ಸಲ್ಲಿಸಿದ್ದೇನೆ ಎಂದು ತಿಳಿಸಿದರು.

ಒಂದೊಮ್ಮೆ ನನಗೆ ಅಪೆಂಡಿಕ್ಸ್ ಇದ್ದರೆ ಮಾಧ್ಯಮದ ಎದುರು ಬಹಿರಂಗವಾಗಿ ಆಪರೇಷನ್ ಮಾಡಲಿ ಎಂದು ದೂರುದಾರ ಕೇಶವಮೂರ್ತಿ ತಿಳಿಸಿದ್ದಾರೆ. ಆದರೆ ಎಲ್ಲ ಆರೋಪಗಳನ್ನು ನಿರಾಕರಿಸಿರುವ ವೈದ್ಯ ಗೋಪಾಲಕೃಷ್ಣ, ನನ್ನ ಹೆಸರಿಗೆ ಕಪ್ಪು ಚುಕ್ಕೆ ತರುವ ಉದ್ದೇಶದಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *