ಚಿತ್ರದುರ್ಗ: ಮುರುಘಾ ಮಠದ (Murugha Mutt) ಉಸ್ತುವಾರಿ ಬಸವಪ್ರಭುಶ್ರೀ ವಿರುದ್ಧ ಮಠದ ಹಣ ದುರುಪಯೋಗ ಮಾಡಿಕೊಂಡಿರುವ ಆರೋಪವೊಂದು ಕೇಳಿಬಂದಿದೆ.
ಚಿತ್ರದುರ್ಗ ಮುರುಘಾ ಮಠದ 24 ಲಕ್ಷ ರೂಪಾಯಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆಂದು ಆರೋಪಿಸಿ ಬಸವಪ್ರಭುಶ್ರೀಗೆ ಆಡಳಿತಾಧಿಕಾರಿ ನೋಟಿಸ್ ನೀಡಿದ್ದಾರೆ. ಇದನ್ನೂ ಓದಿ: ಮೆಟ್ರೋದಲ್ಲಿ ಯುವತಿ ಹಿಂದಿನಿಂದ ಮೈ,ಕೈ ಮುಟ್ಟಿ ಎಸ್ಕೇಪ್ಗೆ ಯತ್ನ- ಯುವಕ ಅರೆಸ್ಟ್
ಮುರುಘಾಶ್ರೀ (Murugha Shree) ಜೈಲಿನಲ್ಲಿದ್ದ ಸಂದರ್ಭದಲ್ಲಿ ಮಠದ ಆಡಳಿತಾಧಿಕಾರಿಯಾಗಿದ್ದ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶೆ ರೇಖಾ ಅವರು ನವೆಂಬರ್ 4ರಂದು ಬಸವಪ್ರಭುಶ್ರೀಗೆ (Basavaprabhu Shree) ನೋಟಿಸ್ ಜಾರಿಗೊಳಿಸಿದ್ದಾರೆ. ಆ ನೋಟಿಸ್ ತಡವಾಗಿ ವೈರಲ್ ಆಗಿದೆ. ಆದರೆ ಮಠದ ಹಣವನ್ನು ವಕೀಲರ ಸಂಭಾವನೆಗೆ ಬಳಸಿದ್ದೇವೆಂದು ಬಸವಪ್ರಭು ಶ್ರೀ ಸಮಜಾಯಿಷಿ ನೀಡಿದ್ದು, ಅವರು ನೀಡಿದ ಸಮಜಾಯಿಷಿ ಸಮಂಜಸವಲ್ಲ ಎಂದು ನೋಟಿಸ್ ನಲ್ಲಿ ಉಲ್ಲೇಖವಾಗಿದೆ.
ಶೀಘ್ರವೇ ಮಠದ ಹಣವನ್ನು ಖಾತೆಗೆ ಸಂದಾಯ ಮಾಡದಿದ್ದಲ್ಲಿ ಕೋರ್ಟ್ ನಲ್ಲಿ (Court) ದಾವೆ ಹೂಡಲಾಗುವುದೆಂದು ನೋಟಿಸ್ ನೀಡಲಾಗಿದೆ. ಗುರುವಾರವಷ್ಟೇ ಮಠದ ಅಧಿಕಾರ ಮರಳಿ ಪಡೆದಿರುವ ಮುರುಘಾಶ್ರೀ ಶಿಷ್ಯರಾದ ಬಸವಪ್ರಭು ವಿಚಾರದಲ್ಲಿ ಯಾವ ನಿರ್ಣಯ ಕೈಗೊಳ್ಳುವರೆಂಬ ಕುತೂಹಲ ಭಕ್ತರಲ್ಲಿದೆ. ಇತ್ತ ಮಠದ ಹಣ ದುರ್ಬಳಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ಹಾಗೂ ಚರ್ಚೆ ಶುರುವಾಗಿವೆ.