ಕಲಬುರಗಿ: ಇಲ್ಲಿನ ಸೆಂಟ್ರಲ್ ಜೈಲಿನಲ್ಲಿ (Kalaburagi Jail) ನಡೆದಿದೆ ಎನ್ನಲಾದ ಹನಿಟ್ರ್ಯಾಪ್ (Honey Trap) ಹಾಗೂ ಬ್ಲ್ಯಾಕ್ಮೇಲ್ ಪ್ರಕರಣದ ವಿಚಾರವಾಗಿ ಕಾರಾಗೃಹ ಎಡಿಜಿಪಿ ಕಚೇರಿಯ ಎಸ್ಪಿ ಯಶೋಧಾ ಅವರು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜೈಲಿನಲ್ಲಿರುವ ಮಲ್ಲೇಶ್ವರಂ ಸ್ಫೋಟ ಪ್ರಕರಣದ (Malleswaram Blast Case) ಆರೋಪಿ ಜುಲ್ಫೀಕರ್ ಹಾಗೂ ಆತನ ಗ್ಯಾಂಗ್ನ ಬಗ್ಗೆ `ಪಬ್ಲಿಕ್ ಟಿವಿ’ ವರದಿ ಮಾಡಿತ್ತು. ವರದಿ ಬೆನ್ನಲ್ಲೇ ಬೆಂಗಳೂರಿನಿಂದ ಕಲಬುರಗಿಗೆ ಆಗಮಿಸಿದ ಯಶೋಧಾ ಅವರು ಕಾರಾಗೃಹ ಅಧೀಕ್ಷಕರು ಹಾಗೂ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಬಿಂದಾಸ್ ಲೈಫ್ – ಪ್ರಕರಣ ಸಿಸಿಬಿಗೆ ವರ್ಗಾವಣೆ
ಕೈದಿ ಸಾಗರ್ ಎಂಬಾತನನ್ನು ವಿಡಿಯೋ ಕರೆ ಮೂಲಕ ಹನಿಟ್ರ್ಯಾಪ್ ಜಾಲಕ್ಕೆ ದೂಡಲಾಗಿತ್ತು. ಈ ಪ್ರಕರಣ ಮುಚ್ಚಿ ಹಾಕಲು 50,000 ರೂ. ನೀಡುವಂತೆ ಆತನಿಗೆ ಬ್ಲ್ಯಾಕ್ಮೇಲ್ ಮಾಡಲಾಗಿತ್ತು. ಈ ವಿಚಾರವನ್ನು ಸಾಗರ್ ಆತನ ಸಹೋದರನೊಂದಿಗೆ ಹೇಳಿಕೊಂಡಿದ್ದ.
ಇದೇ ಪ್ರಕರಣ ಬಳಸಿಕೊಂಡು ಜೈಲಿನ ಸಿಬ್ಬಂದಿಗೂ ಬ್ಲ್ಯಾಕ್ಮೇಲ್ ಮಾಡಲು ಜುಲ್ಫಿಕರ್ ಯತ್ನಿಸಿದ್ದಾನೆ ಎನ್ನಲಾಗುತ್ತಿದೆ. ಇದರಿಂದ ಕಾರಾಗೃಹ ಇಲಾಖೆ ಮುಜುಗರಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ತಕ್ಷಣ ಎಸ್ಪಿ ಯಶೋಧಾ ಅವರನ್ನು ಘಟನೆಯ ಮಾಹಿತಿ ಕಲೆಹಾಕಲು ಕಳಿಸಿದೆ. ಇದನ್ನೂ ಓದಿ: ಮಲ್ಲೇಶ್ವರಂ ಸ್ಫೋಟದಲ್ಲಿ ಭಾಗಿಯಾಗಿದ್ದ ಉಗ್ರನಿಂದ ಕಲಬುರಗಿ ಸೆಂಟ್ರಲ್ ಜೈಲಿನಿಂದಲೇ ಹನಿಟ್ರ್ಯಾಪ್?