ನವದೆಹಲಿ: ತರಗತಿಗಳಲ್ಲಿ ಹಿಜಬ್ ನಿಷೇಧಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಇಂದು ಮತ್ತೊಂದು ಅರ್ಜಿ ಸಲ್ಲಿಕೆಯಾಗಿದೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಈ ಹೊಸ ಅರ್ಜಿ ಸಲ್ಲಿಸಿದೆ.
ಮಂಡಳಿಯು ತನ್ನ ಕಾರ್ಯದರ್ಶಿ ಮೊಹಮ್ಮದ್ ಫಜ್ಲುರ್ರಹೀಮ್ ಜೊತೆಗೆ ಇಬ್ಬರು ಅರ್ಜಿದಾರರಾದ ಮುನಿಸಾ ಬುಶ್ರಾ ಮತ್ತು ಜಲೀಸಾ ಸುಲ್ತಾನಾ ಯಾಸೀನ್ ಮೂಲಕ ಅರ್ಜಿ ಸಲ್ಲಿಸಿದೆ.
ಇಸ್ಲಾಮಿಕ್ ಧರ್ಮಗುರುಗಳ ಸಂಘಟನೆಯಾದ ಸಮಸ್ತ ಕೇರಳ ಜೆಮ್-ಇಯ್ಯತುಲ್ ಉಲಮಾ ಮುಸ್ಲಿಮರು ಹಿಜಬ್ ಧರಿಸುವುದು ಕಡ್ಡಾಯ ಎಂದು ಹೇಳಿಕೆ ನೀಡಿದ ಬಳಿಕ ಈ ಅರ್ಜಿ ಸಲ್ಲಿಕೆಯಾಗಿದ್ದು, ಹಿಜಬ್ ಮುಸ್ಲಿಮರ ಕಡ್ಡಾಯ ಧಾರ್ಮಿಕ ಆಚರಣೆಯಲ್ಲ ಎನ್ನುವ ಅಂಶವನ್ನು ಪ್ರಶ್ನೆ ಮಾಡಲಾಗಿದೆ.
ಕರ್ನಾಟಕ ಹೈಕೋರ್ಟಿನ ತೀರ್ಪು ಪವಿತ್ರ ಕುರಾನ್ ಮತ್ತು ಹದೀಸ್ಗಳ ತಪ್ಪಾದ ವ್ಯಾಖ್ಯಾನ ಮತ್ತು ಇಸ್ಲಾಮಿಕ್ ಕಾನೂನಿನ ತಪ್ಪು ತಿಳುವಳಿಕೆಯನ್ನು ಆಧರಿಸಿದೆ ಎಂದು ತನ್ನ ಅರ್ಜಿಯಲ್ಲಿ ಸಂಘಟನೆಯು ಪ್ರತಿಪಾದಿಸಿದೆ. ಇದನ್ನೂ ಓದಿ: SSLC ಪರೀಕ್ಷೆಗೆ ಹಿಜಬ್ ಧರಿಸಿ ಬಂದ ವಿದ್ಯಾರ್ಥಿನಿಯರು – ಪರೀಕ್ಷಾ ಸಿಬ್ಬಂದಿಯಿಂದ ಮನವೊಲಿಕೆ
ತರಗತಿಗಳಲ್ಲಿ ಹಿಜಬ್ ನಿಷೇಧ ವಿರೋಧಿಸಿ ಉಡುಪಿ ಮೂಲದ ಒಟ್ಟು ಏಳು ವಿದ್ಯಾರ್ಥಿನಿಯರು ಎರಡು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಈ ಅರ್ಜಿಗಳ ತುರ್ತು ವಿಚಾರಣೆಗೆ ಹಿಂದೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ವಿರೋಧಿಸಿದ್ದರು. ಪರೀಕ್ಷೆ ಮತ್ತು ಹಿಜಬ್ ಎರಡು ಪ್ರತ್ಯೇಕ ವಿಚಾರಗಳು ಪರಿಸ್ಥಿತಿ ಸೂಕ್ಷ್ಮಗೊಳಿಸಬೇಡಿ ಎಂದು ಅವರು ಹೇಳಿದ್ದರು.