ಬೆಂಗಳೂರು: ಇಂದು ರಾಜ್ಯಸಭೆ ಹೈವೋಲ್ಟೇಜ್ ಕದನ ನಡೆಯಲಿದೆ. ಕರ್ನಾಟಕದಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಮತದಾನ ನಡೆಯಲಿದೆ. ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೂ ಮತದಾನ ನಡೆಯಲಿದ್ದು, ಸಂಜೆ 5 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದೆ.
ಮೂರು ಪಕ್ಷಗಳಿಗೂ ರಾಜ್ಯಸಭೆ ಚುನಾವಣೆ (Rajyasabha Election) ಅಗ್ನಿ ಪರೀಕ್ಷೆ ಎದುರಾಗಿದೆ. 3 ಪಕ್ಷಗಳಿಗೆ ಅಡ್ಡ ಮತದಾನದ ಭೀತಿ ಶುರುವಾಗಿದೆ. 4 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 223 ಶಾಸಕರಿಂದ ಮತದಾನ ಆಗಲಿದೆ. ಇದನ್ನೂ ಓದಿ: ಕುತೂಹಲ ಘಟ್ಟದಲ್ಲಿ ರಾಜ್ಯಸಭಾ ಚುನಾವಣೆ – ನಂಬರ್ ಗೇಮ್ ಹೇಗಿದೆ? ಕಾಂಗ್ರೆಸ್, ದೋಸ್ತಿಗಳ ಲೆಕ್ಕಾಚಾರ ಏನು?
ಸಿದ್ಧತೆ ಹೇಗಿದೆ..?: ಮತದಾನಕ್ಕೆ ವಿಧಾನಸೌಧದಲ್ಲಿ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಬಿಗಿ ಭದ್ರತೆಯಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ವಿಧಾನಸೌಧದ ಮೊದಲ ಮಹಡಿಯ ಕೊಠಡಿ ಸಂಖ್ಯೆ 106ರಲ್ಲಿ ಮತದಾನಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಮತದಾನ ಕೊಠಡಿ ಬಳಿ ಬ್ಯಾರಿಕೇಡ್ ಹಾಕಿ ಬಿಗಿ ಭದ್ರತೆ ಒದಗಿಸಲಾಗುತ್ತಿದೆ. ಮತದಾನ ಕೊಠಡಿಯೊಳಗೆ ಏಜೆಂಟ್ ಗಳಿಗೆ ಪ್ರತ್ಯೇಕವಾಗಿ ಆಸನ ವ್ಯವಸ್ಥೆ ಮಾಡಲಗುತ್ತಿದೆ. ಶಾಸಕರು ತಮ್ಮ ಪಕ್ಷದ ಏಜೆಂಟರಿಗೆ ತೋರಿಸಿ ಮತದಾನ ಮಾಡಬೇಕಾಗುತ್ತದೆ. ಮತದಾನ ಕೇಂದ್ರದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಲಾಗಿದೆ. ಜೊತೆಗೆ ಮತದಾನ ಪ್ರಕ್ರಿಯೆಯನ್ನು ವಿಡಿಯೋ ರೆಕಾರ್ಡಿಂಗ್ ಮಾಡಿಕೊಳ್ಳಲಾಗುತ್ತದೆ.
ಅಖಾಡದಲ್ಲಿ ಯಾರೆಲ್ಲಾ ಇದ್ದಾರೆ..?: ರಾಜ್ಯಸಭೆ ಅಖಾಡದಲ್ಲಿ ಕಾಂಗ್ರೆಸ್ನಿಂದ (Congress) ಅಜಯ್ ಮಾಕೇನ್, ಸಯ್ಯದ್ ನಸೀರ್ ಹುಸೇನ್ ಮತ್ತು ಜಿ.ಸಿ. ಚಂದ್ರಶೇಖರ್ ಸ್ಪರ್ಧೆ ಮಾಡ್ತಿದ್ದಾರೆ. ಬಿಜೆಪಿಯಿಂದ (BJP) ನಾರಾಯಣಸಾ ಬಾಂಡಗೆ ಸ್ಪರ್ಧೆ ಮಾಡ್ತಿದ್ದು, 5ನೇ ಅಭ್ಯರ್ಥಿಯಾಗಿ ಬಿಜೆಪಿ-ಜೆಡಿಎಸ್ (BJP-JDS) ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಕಣದಲ್ಲಿ ಇದ್ದಾರೆ. ಮತಗಳ ಆಧಾರದಲ್ಲಿ ಕಾಂಗ್ರೆಸ್ಗೆ 3 ಸ್ಥಾನ, ಬಿಜೆಪಿಗೆ 1 ಸ್ಥಾನ ಬರುವುದು ಖಚಿತ ಎನ್ನಲಾಗಿದೆ. ಆದ್ರೆ ಕಾಂಗ್ರೆಸ್ನಲ್ಲಿ ಅಡ್ಡ ಮತದಾನವಾದರೆ ಮೈತ್ರಿ ಅಭ್ಯರ್ಥಿಯ ಗೆಲುವಿನ ಲೆಕ್ಕಾಚಾರ ಶುರುವಾಗಿದೆ.
ಹೋಟೆಲ್ನಲ್ಲಿ ತಂಗಿದ್ದ ಶಾಸಕರು: ಇತ್ತ ರಾಜ್ಯ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರು ಹಿಲ್ಟನ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ಶಾಸಕಾಂಗ ಸಭೆ ಮುಗಿಸಿ ಕೆಲ ಶಾಸಕರು ರಾತ್ರಿಯೇ ಮನೆಗೆ ತೆರಳಿದ್ದು, ಇಂದು ಬೆಳಗ್ಗೆ ಹಿಲ್ಟನ್ ಹೋಟೆಲ್ ಗೆ ವಾಪಾಸ್ ಆಗುತ್ತಿದ್ದಾರೆ. ಬೆಳಗ್ಗಿನ ಉಪಹಾರದ ನಂತರ ಬಸ್ ಮುಖಾಂತರ ಶಾಸಕರು ವಿಧಾನಸೌಧಕ್ಕೆ ತೆರಳಲಿದ್ದಾರೆ.