ರಾಯಚೂರು: ಕೊರೊನಾ ಎಫೆಕ್ಟ್ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಿಂದ ಕಲಬುರಗಿಗೆ ಹೋಗುತ್ತಿದ್ದ ಎಲ್ಲಾ ಸರ್ಕಾರಿ ಬಸ್ಗಳ ಸಂಚಾರ ಬಂದ್ ಮಾಡಲಾಗಿದೆ.
ಜಿಲ್ಲೆಯ ವಿವಿಧ ಡಿಪೋಗಳಿಂದ ಒಟ್ಟು 26 ಬಸ್ಗಳು ಕಲಬುರಗಿಗೆ ಹೋಗುತ್ತಿದ್ದವು. ಈಗ ಎಲ್ಲವೂ ಸಂಚಾರ ಸ್ಥಬ್ದಗೊಳಿಸಿವೆ ಎಂದು ಸಾರಿಗೆ ವಿಭಾಗೀಯ ನಿಯಂತ್ರಕ ವೆಂಕಟೇಶ್ ಹೇಳಿದ್ದಾರೆ.
ಕಲಬುರಗಿಯಲ್ಲಿ ವೃದ್ಧ ಸಾವನ್ನಪ್ಪಿದ ನಂತರ ಮತ್ತೆರಡು ಪಾಸಿಟಿವ್ ಬಂದಿರುವುದರಿಂದ ಜಿಲ್ಲೆಯ ಜನರಲ್ಲೂ ಆತಂಕ ಮನೆ ಮಾಡಿದೆ. ಇದರಿಂದ ರಾಯಚೂರಿಂದ ಹೋಗುವ ಬಸ್ ಗಳು ಶಹಪುರದವರೆಗೆ ಮಾತ್ರ ಸಂಚಾರ ಮಾಡುತ್ತಿವೆ. ಹೀಗಾಗಿ ಕಲಬುರಗಿಗೆ ರಸ್ತೆ ಸಾರಿಗೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ.
ರಾಯಚೂರಿನಿಂದ ಖಾಸಗಿ ಬಸ್ಗಳ ಸಂಚಾರವೂ ಇಲ್ಲದಿರುವುದರಿಂದ ಪ್ರಯಾಣಿಕರು ಪರದಾಟಕ್ಕೀಡಾಗಿದ್ದಾರೆ. ಅಲ್ಲದೆ ಪ್ಯಾಸೆಂಜರ್ ರೈಲು ಸಹ ತಾಂತ್ರಿಕ ಕಾರಣಕ್ಕೆ ರಾಯಚೂರು ಕಲಬುರಗಿ ಸಂಚಾರ ನಿಲ್ಲಿಸಿದೆ. ಈಗಾಗಲೇ ರಾಯಚೂರಿನಿಂದ ಕಲಬುರಗಿಗೆ ಹೋಗುವವರ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದೆ.