ಇದು ಹೇಳಿಕೇಳಿ ಹೊಸ ಅಲೆಯ, ಚಕಿತಗೊಳಿಸುವಂಥಾ ಪ್ರಯೋಗಾತ್ಮಕ ಗುಣಲಕ್ಷಣ ಹೊಂದಿರುವ ಸಿನಿಮಾಗಳ ಜಮಾನ. ಈ ವೆರೈಟಿಯ ಸಿನಿಮಾಗಳತ್ತ ಪ್ರೇಕ್ಷಕರು ಕೂಡಾ ಅಗಾಧವಾದ ಒಲವಿಟ್ಟುಕೊಂಡಿದ್ದಾರೆ. ಅದೆಂಥಾದ್ದೇ ಸವಾಲುಗಳೆದುರಾದರೂ ಕೂಡಾ ಇಂಥಾ ಸಿನಿಮಾಗಳು ಸೋಲದಂತೆ ಕಾಪಾಡುತ್ತಾ ಪೊರೆಯುತ್ತಿದ್ದಾರೆ. ಈ ಕಾರಣದಿಂದಲೇ ಕನ್ನಡ ಚಿತ್ರರಂಗದಲ್ಲಿ ವರ್ಷದ ಪ್ರತೀ ಋತುಮಾನಗಳೂ ಹೊಸತನದ ಸುಗ್ಗಿ ಸಂಭ್ರಮವಾಗಿ ಕಳೆಗಟ್ಟಿಕೊಂಡಿದೆ. ಈ ಪರಂಪರೆಯನ್ನು ಮತ್ತಷ್ಟು ಸಮೃದ್ಧಗೊಳಿಸುವಂತೆ ಮೂಡಿ ಬಂದಿರುವ ಚಿತ್ರ ‘ಅಳಿದು ಉಳಿದವರು’. ಅಶು ಬೆದ್ರ ನಿರ್ಮಾಣ ಮಾಡಿ ನಾಯಕನಾಗಿಯೂ ನಟಿಸಿರುವ ಈ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಬೆದ್ರ ವೆಂಚರ್ಸ್ ಮತ್ತು ಪಿವಿಆರ್ ಪಿಚ್ಚರ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ ಈಗಾಗಲೇ ಬಹು ನಿರೀಕ್ಷಿತ ಸಿನಿಮಾವಾಗಿ ಹೊರಹೊಮ್ಮಿದೆ. ಅಷ್ಟಕ್ಕೂ ಈ ಸಿನಿಮಾ ಯಾವುದೇ ಅಬ್ಬರ, ಸದ್ದುಗದ್ದಲವೂ ಇಲ್ಲದಂತೆ ಚಿತ್ರೀಕರಣವನ್ನು ಪೂರೈಸಿಕೊಂಡಿತ್ತು. ಅಳಿದು ಉಳಿದವರು ಎಲ್ಲರ ಗಮನ ಸೆಳೆದುಕೊಂಡಿದ್ದದ್ದು ಫಸ್ಟ್ ಲುಕ್ ಪೋಸ್ಟರ್ ಮೂಲಕ. ಇದನ್ನು ಬಿಡುಗಡೆಗೊಳಿಸಿದ್ದ ರಕ್ಷಿತ್ ಶೆಟ್ಟಿ ಇಡೀ ಚಿತ್ರತಂಡಕ್ಕೆ ಸಾಥ್ ಕೊಟ್ಟಿದ್ದರು. ಈ ಬಗ್ಗೆ ಅವರಾಡಿದ ಮಾತುಗಳೇ ಪ್ರೇಕ್ಷಕರೆಲ್ಲ ಸದರಿ ಸಿನಿಮಾದತ್ತ ಆಕರ್ಷಿತರಾಗುವಂತೆ ಮಾಡಿ ಬಿಟ್ಟಿತ್ತು. ಇದೇ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಮುಂಗಡವಾಗಿಯೇ ಟ್ರೇಲರ್ ಬಗ್ಗೆಯೂ ಮಾತಾಡಿದ್ದರು. ತಾವು ಈಗಾಗಲೇ ಟ್ರೇಲರ್ ನೋಡಿರೋದಾಗಿ ಹೇಳಿದ್ದ ರಕ್ಷಿತ್ ಅದು ಅದ್ಭುತವಾಗಿದೆ ಅಂದಿದ್ದರಲ್ಲಾ? ಆ ಕ್ಷಣದಿಂದಲೇ ಅಳಿದು ಉಳಿದವರತ್ತ ಪ್ರೇಕ್ಷಕರ ಚಿತ್ತ ನೆಟ್ಟುಕೊಂಡಿತ್ತು.
ಅಳಿದು ಉಳಿದವರು ಚಿತ್ರವನ್ನು ಅರವಿಂದ್ ಶಾಸ್ತ್ರಿ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಈ ಸಿನಿಮಾ ಟ್ರೇಲರ್ ಸಖತ್ ಕ್ರೇಜ್ ಸೃಷ್ಟಿಸೋದರ ಜೊತೆಗೆ ಇದರಲ್ಲಿ ಯಾರ ಎಣಿಕೆಗೂ ಸಿಗದ ಕುತೂಹಲಕರ ಕಥೆ ಇದೆ ಅನ್ನೋದನ್ನು ಸ್ಪಷ್ಟಪಡಿಸಿದೆ. ಚಿತ್ರತಂಡ ಈ ಬಗ್ಗೆ ಹೆಚ್ಚೇನೂ ಹೇಳಿಕೊಂಡಿಲ್ಲ. ಹಾಗಿದ್ದ ಮೇಲೆ ಕಥೆಯ ಸುಳಿವು ಬಿಟ್ಟು ಕೊಡುವಂಥಾ ಪ್ರಮೇಯವೇ ಎದುರಾಗಿಲ್ಲ. ಆದರೆ ಇಲ್ಲಿ ಪ್ರೇಕ್ಷಕರೆಲ್ಲರನ್ನು ಬೆರಗಾಗಿಸುವಂಥಾ, ಪ್ರತೀ ಕ್ಷಣವೂ ಥ್ರಿಲ್ಲಿಂಗ್ನ ಉತ್ತುಂಗಕ್ಕೆ ಕರೆದೊಯ್ಯುವಂಥಾ ಸಮ್ಮೋಹಕ ಕಥೆ ಇರುವುದಂತೂ ನಿಜ.
ಈಗಾಗಲೇ ಕಿರುತೆರೆಯಲ್ಲಿ ನಿರ್ಮಾಪಕರಾಗಿ ಛಾಪು ಮೂಡಿಸಿ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅಶು ಬೆದ್ರ ಈ ಮೂಲಕ ನಾಯಕನಾಗಿ ಆಗಮಿಸುತ್ತಿದ್ದಾರೆ. ಅಳಿದು ಉಳಿದವರು ಕಥೆಯ ಅಸಲಿ ಅಂತರಾಳ ನಾಳೆ ನಿಮ್ಮೆಲ್ಲರೆದುರು ಅನಾವರಣಗೊಳ್ಳಲಿದೆ.