ಭೋಪಾಲ್: ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ಯಾತ್ರೆಗೆ (Bharat Jodo Yatra) ಹೋಗೋವಾಗಿ ಎಚ್ಚರವಾಗಿರಿ. ಜೋಡೋ ಯಾತ್ರೆಯಲ್ಲಿ ಜೇಬುಗಳ್ಳರು (Pickpockets) ಹೆಚ್ಚಿದ್ದಾರೆ. ಹೀಗೆಂದು ಕಾಂಗ್ರೆಸ್ (Congress) ವಿರೋಧಿಗಳು ಅಥವಾ ಜನರು ಹೇಳಿಲ್ಲ. ಬದಲಿಗೆ ಮಧ್ಯಪ್ರದೇಶದ ಪೊಲೀಸರೇ (Madhya Pradesh Police) ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯೇ ಈಗ ಜೇಬುಗಳ್ಳರ ಟಾರ್ಗೆಟ್ ಎಂದು ಪೊಲೀಸರು ಜನರಿಗೆ ಎಚ್ಚರಿಕೆ ನೀಡಿದ್ದಲ್ಲದೇ ರಾಜಸ್ಥಾನದ ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಪ್ರಕಾರ ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯಲ್ಲಿ ಯಾತ್ರೆ ಸಾಗುತ್ತಿದ್ದಾಗ ಹಲವರು ಜೇಬುಗಳ್ಳತನಕ್ಕೆ ಗುರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ನಾವು ಈಗಾಗಲೇ 8-10 ಜೇಬುಗಳ್ಳರನ್ನು ಹಿಡಿದಿದ್ದೇವೆ. ಅವರಲ್ಲಿ ಕೆಲವರು ರಾಜಸ್ಥಾನದ ಕೋಟಾ ಮತ್ತು ಜಲಾವರ್ ನಿವಾಸಿಗಳು. ಕೆಲವರು ರಾಜ್ಯದ ಗುನಾ, ರಾಜ್ಗಢ, ಶಾಜಾಪುರ ಮತ್ತು ರೈಸನ್ ಜಿಲ್ಲೆಗಳ ನಿವಾಸಿಗಳು ಎಂದು ಅಗರ್ ಮಾಲ್ವಾ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಕುಮಾರ್ ಸಾಗರ್ ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾ, ಶ್ರೀಲಂಕಾ, ಮಾರಿಷಸ್ ಜೊತೆ ಕ್ಲಿಕ್ – ಮತ್ತಷ್ಟು ದೇಶಗಳೊಂದಿಗೆ ರುಪಿ ವ್ಯವಹಾರಕ್ಕೆ ಮುಂದಾದ ಭಾರತ
ಯಾತ್ರೆಯ ವೇಳೆ ಜೇಬುಗಳ್ಳರಿಂದ ಎಚ್ಚರ ವಹಿಸುವಂತೆ ಮಧ್ಯಪ್ರದೇಶ ಪೊಲೀಸರು ರಾಜಸ್ಥಾನ ಪೊಲೀಸರಿಗೂ ಎಚ್ಚರಿಕೆ ನೀಡಿದ್ದಾರೆ. ಜೋಡೋ ಯಾತ್ರೆ ಡಿಸೆಂಬರ್ 5 ರಂದು ಮಧ್ಯಪ್ರದೇಶದಿಂದ ರಾಜಸ್ಥಾನ ತಲುಪಿತ್ತು. ರಾಜ್ಯದ ಬುಂದಿ ಜಿಲ್ಲೆಯನ್ನು ತಲುಪುವುದಕ್ಕೂ ಮೊದಲು ಜಲಾವರ್ ಮತ್ತು ಕೋಟಾ ಜಿಲ್ಲೆಗಳಲ್ಲಿ ಹಾದುಹೋಗಿದೆ. ಬುಂದಿ ಬಳಿಕ ಸವಾಯಿ ಮಾಧೋಪುರ್, ದೌಸಾ ಮತ್ತು ಅಲ್ವಾರ್ ಜಿಲ್ಲೆಗಳಲ್ಲಿ ಸಾಗಿದೆ.
ಅಗರ್ ಮಾಲ್ವಾದಲ್ಲಿ ಆರೋಪಿಗಳಿಂದ ನಾವು 5-6 ಮೊಬೈಲ್ ಫೋನ್ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ. ಯಾತ್ರೆಯಲ್ಲಿ ಭಾಗವಹಿಸಿದ್ದ 4-5 ಜನರು ತಮ್ಮ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡಿರುವ ಬಗ್ಗೆ ದೂರು ನೀಡಿದ್ದಾರೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ನಾವು ಸೈಬರ್ ಪೊಲೀಸರ ಸಹಾಯವನ್ನೂ ಪಡೆದಿದ್ದೇವೆ. ಯಾತ್ರೆಯ ಶಿಬಿರಗಳಲ್ಲಿ ಮಧ್ಯಾಹ್ನ ಹಾಗೂ ರಾತ್ರಿಯ ಊಟದ ವೇಳೆಯೇ ಹೆಚ್ಚಿನ ಕಳ್ಳತನಗಳು ನಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 3 ತಿಂಗಳು ಕಾಲೇಜಲ್ಲಿ ವಿದ್ಯಾರ್ಥಿನಿಯಂತೆ ನಟಿಸಿ ರ್ಯಾಗಿಂಗ್ ಪ್ರಕರಣವನ್ನು ಭೇದಿಸಿದ ಮಹಿಳಾ ಪೇದೆ
ಭಾರತ್ ಜೋಡೋ ಯಾತ್ರೆ ಡಿಸೆಂಬರ್ 21 ರಂದು ಹರಿಯಾಣ ಪ್ರವೇಶಿಸಲಿದೆ. ಇದಕ್ಕೂ ಮುನ್ನ ಈ ಯಾತ್ರೆ ರಾಜಸ್ಥಾನದಲ್ಲಿ 17 ದಿನಗಳಲ್ಲಿ ಸುಮಾರು 500 ಕಿ.ಮೀ ದೂರವನ್ನು ಕ್ರಮಿಸಲಿದೆ.