ಮುಂಬೈ: ದಕ್ಷಿಣ ಆಫ್ರಿಕಾ ಆಲ್ರೌಂಡರ್ ಅಲ್ಬಿ ಮಾರ್ಕೆಲ್ ಐಪಿಎಲ್ ನಲ್ಲಿ ಚೆನ್ನೈ ತಂಡದ ಪರ ಆಡಿದ ಪಂದ್ಯದ ಬಗ್ಗೆ ಮಾತನಾಡಿದ್ದು, ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಬೌಲಿಂಗ್ ಮಾಡಿದ್ದೇಕೆ ಎಂದು ಇಂದಿಗೂ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
2012ರಲ್ಲಿ ಸಿಎಸ್ಕೆ ಪರ ಮಾರ್ಕೆಲ್ ಆಡಿದ್ದರು. ಆರ್ ಸಿಬಿ ವಿರುದ್ಧ ಪಂದ್ಯದಲ್ಲಿ 7 ಎಸೆತಗಳಲ್ಲಿ 28 ರನ್ ಗಳಿಸಿ ಪಂದ್ಯ ಗೆಲ್ಲಿಸಿಕೊಟ್ಟು ತಂಡದ ಪರ ಹೀರೋ ಆಗಿ ಹೊರಹೊಮ್ಮಿದ್ದರು. ಬಹುಮುಖ್ಯವಾಗಿ ಅಂದು ವಿರಾಟ್ ಕೊಹ್ಲಿ ಎಸೆದ 19ನೇ ಓವರಿನಲ್ಲಿ ಮಾರ್ಕೆಲ್ 28 ರನ್ ಸಿಡಿಸಿದ್ದರು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಬೆಂಗಳೂರು ತಂಡ 20 ಓವರ್ ಗಳಲ್ಲಿ 205 ರನ್ ಗಳಿಸಿತ್ತು. ಆ ಬಳಿಕ ಬ್ಯಾಟಿಂಗ್ ಮಾಡಿದ್ದ ಚೆನ್ನೈ ಬಹುಬೇಗ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಂತಿಮ 2 ಓವರ್ ಗಳಲ್ಲಿ ಚೆನ್ನೈ ತಂಡಕ್ಕೆ 43 ರನ್ಗಳ ಅಗತ್ಯವಿತ್ತು. ಆದರೆ ಈ ಸಂದರ್ಭದಲ್ಲಿ ಯಾರು ಊಹಿಸಿದಂತೆ ಆರ್ ಸಿಬಿ ನಾಯಕರಾಗಿದ್ದ ಡೇನಿಲ್ ವೆಕ್ಟೋರಿ 19ನೇ ಓವರ್ ಎಸೆಯಲು ವಿರಾಟ್ ಕೊಹ್ಲಿ ಅವರಿಗೆ ಚೆಂಡು ನೀಡಿದ್ದರು. ಕೊಹ್ಲಿ ಎಸೆದ ಓವರಿನಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಅಲ್ಬಿ ಮಾರ್ಕೆಲ್ 3 ಸಿಕ್ಸರ್, 2 ಬೌಂಡರಿ ಸಿಡಿಸಿ ಮಿಂಚಿದ್ದರು. ಆದರೆ ಕೊಹ್ಲಿ ಏಕೆ ಬೌಲಿಂಗ್ ಮಾಡಿದ್ದರು ಎಂದು ಇಂದಿಗೂ ಯಾವುದೇ ಐಡಿಯಾ ಇಲ್ಲ ಎಂದು ಮಾರ್ಕೆಲ್ ಹೇಳಿದ್ದಾರೆ.
ನಾನು ಬ್ಯಾಟಿಂಗ್ ಆಗಮಿಸುವ ವೇಳೆಗೆ 2 ಓವರ್ ಮಾತ್ರ ಬಾಕಿ ಇತ್ತು. 43 ರನ್ ಗೆಲುವಿಗೆ ಅಗತ್ಯವಿತ್ತು. ಆ ವೇಳೆ 2 ಭರ್ಜರಿ ಹೊಡೆತ ಸಿಡಿಸಿದರೆ ಗೆಲುವಿನ ಕುರಿತು ಚಿಂತಿಸಬಹುದು ಎಂದು ಕೊಂಡು ಬ್ಯಾಟಿಂಗ್ ಆರಂಭಿಸಿದ್ದೆ. ಅಂತಹ ಸಂದರ್ಭದಲ್ಲಿ ಕೊಹ್ಲಿ ಬೌಲಿಂಗ್ ಮಾಡಿದ್ದು, ನನ್ನ ಕೆಲಸವನ್ನ ಸುಲಭ ಮಾಡಿತ್ತು ಎಂದು ಮಾರ್ಕೆಲ್ ಅಂದಿನ ಸನ್ನಿವೇಶವನ್ನು ಸ್ಮರಿಸಿಕೊಂಡಿದ್ದಾರೆ. ಪಂದ್ಯದಲ್ಲಿ ಅಲ್ಬಿ ಮಾರ್ಕೆಲ್ ಔಟಾದ ಬಳಿಕ ಬ್ರಾವೋ ಚೆನ್ನೈ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಅಂತಿಮವಾಗಿ 5 ವಿಕೆಟ್ ಕಳೆದುಕೊಂಡಿದ್ದ ಚೆನ್ನೈ 208 ರನ್ ಗಳಿಸಿ ಗೆಲುವು ಪಡೆದಿತ್ತು.