ಬಿಗ್ ಬಾಸ್ ಮನೆಯಲ್ಲಿ ಯಾರು ಇರುತ್ತಾರೋ, ಯಾರು ಹೊರ ಬರುತ್ತಾರೋ ಸ್ವತಃ ಈ ಶೋ ನಡೆಸುವ ಸುದೀಪ್ ಅವರಿಗೂ ಗೊತ್ತಿರುವುದಿಲ್ಲ. ಬಿಗ್ ಬಾಸ್ ಆಟ ಬಲ್ಲವರಾರು ಎನ್ನುವ ಹೊಸ ಗಾದೆಯೇ ಇದೆ. ಆದರೆ, ಈ ವಾರ ದೊಡ್ಮನೆಯಿಂದ ಅಕ್ಷತಾ ಕುಕ್ಕಿ ಅಥವಾ ಸ್ಪೂರ್ತಿ ಗೌಡ ಹೊರ ಹೋಗುವ ಸಾಧ್ಯತೆಗಳೇ ಹೆಚ್ಚಿವೆ. ವಾರ ಪೂರ್ತಿ ಈ ಸ್ಪರ್ಧಿಗಳು ಮನೆಯಲ್ಲಿರಲು ಏನೆಲ್ಲ ಮಾಡಬೇಕಿತ್ತು, ಅದನ್ನು ಬಿಟ್ಟು ಬೇರೆಲ್ಲ ಮಾಡಿದ್ದಾರೆ. ಹಾಗಾಗಿ ಈ ಇಬ್ಬರಲ್ಲಿ ಒಬ್ಬರು ಎಲಿಮಿನೇಟ್ ಆಗುವ ಸಾಧ್ಯತೆ ಹೆಚ್ಚಿದೆ.
ಅಕ್ಷತಾ ಕುಕ್ಕಿ ಹೇಳಿಕೊಳ್ಳುವಂತ ಆಟವನ್ನು ಬಿಗ್ ಬಾಸ್ ಮನೆಯಲ್ಲಿ ಆಡುತ್ತಿಲ್ಲ. ಇರುವ ಸಹ ಸ್ಪರ್ಧಿಗಳೊಂದಿಗೆ ಅವರ ಒಡನಾಟವೂ ಅಷ್ಟಕಷ್ಟೇ. ಮನರಂಜನೆ ನೀಡುವಂತಹ ಚಟುವಟಿಕೆಗಳನ್ನೂ ಅವರಿಂದ ನಿರೀಕ್ಷಿಸುವಂತಿಲ್ಲ. ಹಾಗಾಗಿ ಅಕ್ಷತಾ ಕುಕ್ಕಿ ಮೇಲೆ ಎಲಿಮಿನೇಟ್ ತೂಗುಕತ್ತಿ ತೂಗುತ್ತಿದೆ. ಅಲ್ಲದೇ, ಸತತವಾಗಿ ಎರಡು ವಾರಗಳಿಂದ ನಾಮಿನೇಟ್ ಕೂಡ ಆಗಿದ್ದಾರೆ. ಈ ಕಾರಣದಿಂದಾಗಿ ಅಕ್ಷತಾ ಈ ವಾರ ಮನೆಯಿಂದ ಆಚೆ ಬರಬಹುದು. ಇದನ್ನೂ ಓದಿ: ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು
ಕಳೆದ ವಾರದಲ್ಲಿ ಸ್ಪೂರ್ತಿ ಗೌಡ, ರಾಕೇಶ್ ಮತ್ತು ಸಾನ್ಯ ಐಯ್ಯರ್ ನಡುವಿನ ತ್ರಿಕೋನ ಲವ್ ಸ್ಟೋರಿ ನೋಡುಗರಿಗೆ ಮನರಂಜನೆ ನೀಡಿತ್ತು. ಆದರೆ ಈ ವಾರ ಸಪ್ಪೆ ಅನಿಸಿದ್ದಾರೆ ಸ್ಪೂರ್ತಿ ಗೌಡ. ಸರಿಯಾದ ರೀತಿಯಲ್ಲಿ ಆಟವಾಡಲು ತಮಗೆ ಅವಕಾಶ ಸಿಗುತ್ತಿಲ್ಲ ಎಂದು ಪದೇ ಪದೇ ಹೇಳಿಕೊಳ್ಳುತ್ತಿದ್ದರೂ, ಸಿಕ್ಕಿರುವ ಅವಕಾಶವನ್ನು ಅವರು ಸದುಪಯೋಗ ಪಡೆಸಿಕೊಳ್ಳುತ್ತಿಲ್ಲ. ಮತ್ತು ಚೆಂದಾಗಿ ನಡೆಯುವ ಆಟವನ್ನೂ ಹಾಳುಗೆಡವುತ್ತಾರೆ ಅನ್ನುವ ಆರೋಪ ಅವರ ಮೇಲಿದೆ. ಹೀಗಾಗಿ ಸ್ಪೂರ್ತಿ ಗೌಡ ಕೂಡ ಮನೆಯಿಂದ ಆಚೆ ಬರಬಹುದು ಎಂದು ಅಂದಾಜಿಸಲಾಗಿದೆ.
ಈ ವಾರ ನಾಮಿನೇಟ್ ಆದವರು ಲಿಸ್ಟ್ ನಲ್ಲಿ ಜಯಶ್ರೀ ಆರಾಧ್ಯ, ಸೋಮಣ್ಣ, ಸಾನ್ಯ ಐಯ್ಯರ್, ರಾಕೇಶ್ ಅಡಿಗ, ನಂದು ಇದ್ದರೂ, ಇವರು ನಾನಾ ಕಾರಣಗಳಿಂದಾಗಿ ಮನೆಯಲ್ಲೇ ಉಳಿಯುವ ಸಾಧ್ಯತೆ ಹೆಚ್ಚಿದೆ. ಸ್ಪೂರ್ತಿ ಗೌಡ ಮತ್ತು ಅಕ್ಷತಾ ಕುಕ್ಕಿಗೆ ಹೋಲಿಸಿದರೆ, ಇವರು ಜನರನ್ನು ರಂಜಿಸುವಲ್ಲಿ ಮೇಲಿದ್ದಾರೆ. ಹೀಗಾಗಿಯೇ ಈ ವಾರದ ಕಿಚ್ಚನ ಪಂಚಾಯತಿ ಕುತೂಹಲ ಮೂಡಿಸಿದೆ.