ಹೈದರಾಬಾದ್: ಬಾಲಿವುಡ್ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ- ಅಭಿಷೇಕ್ ಬಚ್ಚನ್ ಅವರ ಏಕೈಕ ಪುತ್ರಿ ಆರಾಧ್ಯ ಮುಂದೊಂದು ದಿನ ಪ್ರಧಾನಿಯಾಗ್ತಾಳೆ ಅಂತ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.
ಡಿ. ಜ್ಞಾನೇಶ್ವರ್ ಅವರು ಭವಿಷ್ಯ ನುಡಿದ ಜ್ಯೋತಿಷಿಯಾಗಿದ್ದು, ಆರಾಧ್ಯಾ ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ ಅಂತ ಹೇಳಿದ್ದಾರೆ. ಮುನ್ನೋಟ 2018 ಎನ್ನುವ ವಿಚಾರದ ಬಗ್ಗೆ ಸುದ್ದಿಗೋಷ್ಠಿಯನ್ನು ನಡೆಸಿ ಜ್ಯೋತಿಷಿ ಡಿ. ಜ್ಞಾನೇಶ್ವರ್ ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಆರಾಧ್ಯ ತನ್ನ ಹೆಸರನ್ನು ರೋಹಿಣಿ ಎಂದು ಬದಲಿಸಿಕೊಂಡರೆ ಅವಳು ದೇಶದ ಪ್ರಧಾನ ಮಂತ್ರಿ ಆಗಬಹುದು ಎಂದು ಸಲಹೆ ನೀಡಿದ್ರು.
ನಟರಾದ ಚಿರಂಜೀವಿ ಮತ್ತು ರಜನಿಕಾಂತ್ ಅವರು ರಾಜಕೀಯಕ್ಕೆ ಬರುತ್ತಾರೆ. 2009ರಲ್ಲಿ ಅವಿಭಜಿತ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಈ ಹಿಂದೆ ಭವಿಷ್ಯ ನುಡಿದಿದ್ದರು.
ಅಷ್ಟೆ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಧಿಕಾರವನ್ನು ಏರಲಿದ್ದಾರೆ. ಮುಂದೆ ತಮಿಳುನಾಡಿನಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ರಜನಿಕಾಂತ್ ಪಕ್ಷ ವಿಜಯ ಸಾಧಿಸುವುದರೊಂದಿಗೆ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
2024 ರಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯ ಯುದ್ಧ ನಡೆಯಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಮಾಲೀಕ ಮುಕೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಮದುವೆ 2019ರಲ್ಲಿ ನಡೆದರೆ ಉತ್ತಮ ಎನ್ನುವ ಸಲಹೆಯನ್ನು ನೀಡಿದ್ದಾರೆ.