ನವದೆಹಲಿ: ಏರ್ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರ ಮೇಲೆ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ಚಪ್ಪಲಿಯಿಂದ ಹಲ್ಲೆ ಮಾಡಿದ ಪ್ರಕರಣದ ಬೆನ್ನಲ್ಲೇ ಇನ್ಮುಂದೆ ವಿಮಾನ ಹಾರಾಟ ವಿಳಂಬವಾಗಲು ಕರಣವಾಗೋ ಪ್ರಯಾಣಿಕರಿಗೆ ಭಾರೀ ದಂಡ ವಿಧಿಸಲು ಏರ್ ಇಂಡಿಯಾ ತೀರ್ಮಾನಿಸಿದೆ.
ಇದಕ್ಕಾಗಿ ಏರ್ ಇಂಡಿಯಾ ಹೊಸ ನಿಯಮವನ್ನ ರೂಪಿಸಿದ್ದು, 1 ಗಂಟೆವರೆಗೆ ತಡವಾದ್ರೆ 5 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಒಂದು ವೇಳೆ 1 ರಿಂದ 2 ಗಂಟೆ ತಡವಾದ್ರೆ 10 ಲಕ್ಷ ರೂ. ಹಾಗೂ 2 ಗಂಟೆಗೂ ಮೀರಿ ತಡವಾದ್ರೆ ಬರೋಬ್ಬರಿ 15 ಲಕ್ಷ ರೂ ದಂಡ ವಿಧಿಸಲಿದೆ.
ಈಗಾಗಲೇ ಏರ್ ಇಂಡಿಯಾ ಸಂಸ್ಥೆ ಲಾಗ್ಬುಕ್ನಲ್ಲಿ ಕೆಲವು ಬದಲಾವಣೆಗಳನ್ನೂ ಮಾಡಿದೆ. ಈ ಹೊಸ ವ್ಯವಸ್ಥೆಯಡಿ ವಿಮಾನ ಹೊರಡುವುದು ತಡವಾದ್ರೆ, ಅದರಲ್ಲೂ ಪ್ರಯಾಣಿಕರ ದುರ್ನಡತೆಯ ಸಂದರ್ಭದಲ್ಲಿ ತಡವಾಗಲು ಕಾರಣವೇನು ಎಂಬುದನ್ನು ಇತರೆ ಎಲ್ಲಾ ಮಾಹಿತಿಯನ್ನ ಒದಗಿಸಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಮಾರ್ಚ್ನಲ್ಲಿ ಪುಣೆ- ದೆಹಲಿ ವಿಮಾನದಲ್ಲಿ ತನ್ನನ್ನು ಬ್ಯುಸಿನೆಸ್ ಕ್ಲಾಸ್ನಿಂದ ಎಕಾನಮಿ ಕ್ಲಾಸ್ಗೆ ವರ್ಗಾಯಿಸಿದ್ದಕ್ಕೆ ಕೋಪಗೊಂಡ ಗಾಯಕ್ವಾಡ್ ಏರ್ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರ ಮೇಲೆ ಚಪ್ಪಲಿಯಿಂದ ಹೊಡೆದಿದ್ದರು. ಹೀಗಾಗಿ 6 ವಿಮಾನಯಾನ ಸಂಸ್ಥೆಗಳು ಗಾಯಕ್ವಾಡ್ ಪ್ರಯಾಣದ ಮೇಲೆ ನಿಷೇಧ ಹೇರಿದ್ದವು. ಬಳಿಕ ನಿಷೇಧವನ್ನ ಹಿಂಪಡೆಯಲಾಗಿತ್ತು. ಗಾಯಕ್ವಾಡ್ ಅವರ ಈ ಅವಾಂತರದಿಂದ ವಿಮಾನ ಒಂದೂವರೆ ಗಂಟೆ ತಡವಾಗಿ ಹೊರಟಿತ್ತು.