ನವದೆಹಲಿ: ಧಾರ್ಮಿಕ ಭಾವನೆಗಳನ್ನು ಕಡೆಗಣಿಸಿ ಪ್ರಯಾಣಿಕರಿಗೆ ನಾನ್-ವೆಜ್ ಊಟ ನೀಡಿದ್ದಕ್ಕೆ ಏರ್ ಏಷ್ಯಾ ವಿಮಾನ ಕಂಪನಿಗೆ ಗ್ರಾಹಕರ ನ್ಯಾಯಾಲಯ 1.54 ಲಕ್ಷ ರೂ. ರೂಪಾಯಿ ದಂಡ ವಿಧಿಸಿದೆ.
ನಾನ್ ವೆಜ್ ಊಟ ನೀಡಿ ನಮ್ಮನ್ನು ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಪ್ರಯಾಣಿಕ ವಿಜಯ್ ಕುಮಾರ್ ಟ್ರೆಹನ್ ಏರ್ ಏಷ್ಯಾ ವಿರುದ್ಧ ಹರ್ಯಾಣದ ಪಂಚಕುಲ ನ್ಯಾಯಾಲಯಲ್ಲಿ ದೂರು ನೀಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಏರ್ ಏಷ್ಯಾ ಕಂಪನಿಗೆ 1.54 ಲಕ್ಷ ರೂ. ದಂಡ ಕಟ್ಟುವಂತೆ ಆದೇಶಿಸಿದೆ.
ಏನಿದು ಪ್ರಕರಣ?
ಅಕ್ಟೋಬರ್ 2018ರಲ್ಲಿ ವಿಜಯ್ ಕುಮಾರ್ ಕುಟುಂಬ ಮಲೇಷ್ಯಾದ ಕೌಲಾಲಂಪುರ್ ನಿಂದ ಭಾರತಕ್ಕೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಆಗಮಿಸುವ ಮೊದಲ ದಿನವೂ ಕೂಡ ಸಿಬ್ಬಂದಿಯ ಅಸಹಕಾರದಿಂದ ವಿಮಾನ ಮಿಸ್ ಆಗಿತ್ತು. ಆ ಬಳಿಕ ಎರಡನೇ ದಿನ ನಾನ್ ವೆಜ್ ಊಟ ನೀಡಿ ನಮ್ಮನ್ನು ಏರ್ ಏಷ್ಯಾ ಸಿಬ್ಬಂದಿ ಹಿಂಸಿಸಿದ್ದಾರೆ. ನಾವು ಹಿಂದೂ ಕುಟುಂಬದವರಾಗಿದ್ದು, ಆದರಲೂ ಇಸ್ಕಾನ್ ಭಕ್ತರಾಗಿದ್ದು, ನವರಾತ್ರಿಯ ವೇಳೆ ನಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ವಿಜಯ್ ಕುಮಾರ್ ಹಾಗೂ ಕುಟುಂಬದ ಐವರು ಕೌಲಾಲಂಪುರ್ ನಿಂದ ಅಮೃತಸರಕ್ಕೆ ಮರಳುತ್ತಿದ್ದರು. ಈ ವೇಳೆ ಸಂಜೆ 5:15 ಗಂಟೆಗೆ ತಮ್ಮ ಕುಟುಂಬದವರ ಜೊತೆ ವಿಜಯ್ ಕುಮಾರ್ ಕೌಲಾಲಂಪುರ್ ವಿಮಾನ ನಿಲ್ದಾಣಕ್ಕೆ ತಲುಪಿ, ಲಗೇಜ್ ತೆರವು ಮತ್ತು ಬೋರ್ಡಿಂಗ್ ಪಾಸುಗಳನ್ನು ಪಡೆದಿದ್ದರು. ಸುಮಾರು 7:20ರ ಹೊತ್ತಿಗೆ ವಿಮಾನದ ಸಮಯ ನಿಗದಿಯಾಗಿತ್ತು.
ವಲಸೆ ಕೌಂಟರ್ ನಲ್ಲಿ ಬಹಳ ಪ್ರಯಾಣಿಕರು ಇದ್ದ ಕಾರಣಕ್ಕೆ ವಿಜಯ್ ಅವರ ಕುಟುಂಬದ ಲಗೇಜ್ ಪರಿಶೀಲನೆ ಮಾಡುವುದು ತಡವಾಗಿತ್ತು. ಇದರಿಂದ ಅವರು ತಮ್ಮ ವಿಮಾನವನ್ನು ಮಿಸ್ ಮಾಡಿಕೊಂಡಿದ್ದರು. ಹೀಗಾಗಿ ಅವರು ಮಾರನೇ ದಿನಕ್ಕೆ ಹೊಸ ಟಿಕೆಟ್ ಬುಕ್ ಮಾಡಿಕೊಂಡು 1 ದಿನ ಹೋಟೆಲ್ನಲ್ಲಿ ಇರಬೇಕಾಯ್ತು.
ಮರು ದಿವಸ ಕುಟುಂಬದೊಡನೆ ವಿಜಯ್ ಕುಮಾರ್ ಅದೇ ವಿಮಾನದಲ್ಲಿ ಭಾರತಕ್ಕೆ ವಾಪಸ್ ಆಗುತ್ತಿದ್ದರು. ಪ್ರಯಾಣದ ಮಧ್ಯೆ ಸಿಬ್ಬಂದಿ ಬಳಿ ಸಸ್ಯಾಹಾರ ಊಟ ನೀಡುವಂತೆ ವಿಜಯ್ ಹಾಗೂ ಅವರ ಕುಟುಂಬ ತಿಳಿಸಿತ್ತು. ಆದರೆ ಸಿಬ್ಬಂದಿ ಮಾಂಸಾಹಾರ ಊಟವನ್ನು ನೀಡಿದ್ದಾರೆ. ಇದಕ್ಕೆ ಕೋಪಗೊಂಡ ವಿಜಯ್ ಕುಮಾರ್ ವಿಮಾನ ಕಂಪನಿ ವಿರುದ್ಧ ದೂರು ನೀಡಿದ್ದರು.
ದೂರು ಆಧರಿಸಿ ವಿಚಾರಣೆ ಮಾಡಿದ ಗ್ರಾಹಕ ವೇದಿಕೆ ಏರ್ ಏಷ್ಯಾಕ್ಕೆ ಮೊದಲು ಸೂಚನೆ ನೀಡಿತ್ತು. ಆದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಹೀಗಾಗಿ ಹೊಸ ಟಿಕೆಟ್, ಹೋಟೆಲ್ ಕೊಠಡಿ ಬಾಡಿಗೆಗಳು, 9% ರಷ್ಟು ಆಹಾರದ ಬಿಲ್ ಸೇರಿಸಿ 1.54 ಲಕ್ಷವನ್ನು ಪ್ರಯಾಣಿಕ ಕುಟುಂಬಕ್ಕೆ ನೀಡುವಂತೆ ಸೂಚಿಸಿದೆ. ಕಿರುಕುಳ, ನೋವು ಮತ್ತು ಮಾನಸಿಕ ಸಂಕಟಕ್ಕೆ 30,000 ರೂ. ಹಣವನ್ನು ನೀಡುವಂತೆ ಆದೇಶಿಸಲಾಯಿತು. ಅಲ್ಲದೆ ನ್ಯಾಯಾಲಯ ಶುಲ್ಕವಾಗಿ 5,500 ರೂ. ದಂಡ ಕಟ್ಟುವಂತೆ ಸೂಚಿಸಿದೆ.