ಕಲಬುರಗಿ: ಶೀಘ್ರದಲ್ಲೇ ಕೆಪಿಸಿಸಿ (KPCC) ಅಧ್ಯಕ್ಷರ ಬದಲಾವಣೆಯಾಗಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸುಳಿವು ನೀಡಿದ್ದಾರೆ.
ಇಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಾದ್ಯಂತ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಹಂತಹಂತವಾಗಿ ಕೈಗೊಳ್ಳಲಾಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಈಗಾಗಲೇ ಮೂರು ರಾಜ್ಯಗಳಲ್ಲಿ ಪಿಸಿಸಿ ಅಧ್ಯಕ್ಷರ ನೇಮಕ ಮಾಡಲಾಗಿದೆ. ಆದಷ್ಟು ಬೇಗ ಹಂತ ಹಂತವಾಗಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ನೇಮಕ ನಡೆಯಲಿದೆ. ಇದಕ್ಕೆ ಕರ್ನಾಟಕ ಹೊರತಾಗಿಲ್ಲ ಎಂದರು.
ಇತ್ತೀಚೆಗೆ ದೆಹಲಿಯ ತಮ್ಮ ನಿವಾಸದಲ್ಲಿ ರಾಜ್ಯದ ಗೃಹ ಸಚಿವ ಪರಮೇಶ್ವರ್ (Parameshwar) ಹಾಗೂ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ (satish jarkiholi)ತಮ್ಮನ್ನು ಭೇಟಿ ಮಾಡಿ ಚರ್ಚಿಸಿದ ಕುರಿತು ಸುದ್ದಿಗಾರರು ಪ್ರಸ್ತಾಪಿಸಿದಾಗ, ನಾನು ಈ ರಾಜ್ಯದವನು ಎಐಸಿಸಿ ಅಧ್ಯಕ್ಷನಾಗಿದ್ದೇನೆ. ಹೀಗಾಗಿ ನಮ್ಮ ರಾಜ್ಯದ ನಾಯಕರು ನನ್ನ ಭೇಟಿಯಾಗಲು ಬರುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಪರೀಕ್ಷೆಗೆ ಓದಿಕೊಳ್ಳುವಂತೆ ತಾಯಿ ಗದರಿಸಿದ್ದಕ್ಕೆ 20ನೇ ಮಹಡಿಯಿಂದ ಜಿಗಿದು ಬಾಲಕಿ ಆತ್ಮಹತ್ಯೆ
ನಮ್ಮ ಜೊತೆ ಆತ್ಮೀಯರಾಗಿ ಇರುವವರು ಪೋನ್ ಮಾಡಿ ಬರುತ್ತಾರೆ. ಹಾಗೆ ಬರುವವರನ್ನು ಬೇಡ ಎನ್ನಲು ಆಗುತ್ತಾ? ಅದರಲ್ಲಿ ಏನೂ ವಿಶೇಷ ಇಲ್ಲ. ಪರಮೇಶ್ವರ್, ಜಾರಕಿಹೊಳಿ ಭೇಟಿ ಬಗ್ಗೆ ಗೊಂದಲ ಸೃಷ್ಟಿ ಮಾಡುವುದು ಬೇಡ. ದಯವಿಟ್ಟು ಮಾಧ್ಯಮದವರು ಗೊಂದಲ ಸೃಷ್ಟಿ ಮಾಡಬೇಡಿ ಎಂದು ಮನವಿ ಮಾಡಿದರು.