ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ರ ಬಜೆಟ್ ಭಾಷಣದಲ್ಲಿ ರೈತರಿಗಾಗಿ ‘ಭಾರತ್-ವಿಸ್ತಾರ್’ ಎಂಬ ಕ್ರಾಂತಿಕಾರಿ ಬಹುಭಾಷಾ AI (ಕೃತಕ ಬುದ್ಧಿಮತ್ತೆ) ಉಪಕರಣವನ್ನು ಘೋಷಿಸಿದ್ದಾರೆ. ಫೆ.17ರಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಈ ಆಪ್ ಅನ್ನು ಬಿಡುಗಡೆಗೊಳಿಸಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ರೈತರ ಆದಾಯ ಹೆಚ್ಚಿಸುವುದು ಮತ್ತು ಕೃಷಿ ಪದ್ಧತಿಯನ್ನು ಆಧುನೀಕರಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಹಾಗಿದ್ರೆ ಏನಿದು ಭಾರತ್ ವಿಸ್ತಾರ್ ಎಐ ಸಾಧನ? ಇದರಿಂದ ರೈತರಿಗೆ ಏನೆಲ್ಲಾ ಉಪಯೋಗಗಳಿವೆ? ಬಳಕೆ ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.
ರೈತರ ಸಬಲೀಕರಣಕ್ಕಾಗಿ ಡಿಜಿಟಲ್ ಕೃಷಿ ಯೋಜನೆ:
ಭಾರತ ಸರ್ಕಾರ ರೈತರನ್ನು ಸಬಲೀಕರಣಗೊಳಿಸಲು ಪ್ರಾರಂಭಿಸಿದ ಡಿಜಿಟಲ್ ಯೋಜನೆಯೇ ಅಗ್ರಿಸ್ಟಾಕ್. ಇದರಲ್ಲಿ ಕೃಷಿಗೆ ಸಂಬಂಧಿಸಿದ ಎಲ್ಲ ಯೋಜನೆಗಳ ಮಾಹಿತಿ ಲಭ್ಯವಿರಲಿದೆ. ಅಗ್ರಿಸ್ಟಾಕ್ ಒಂದೇ ವೇದಿಕೆಯಲ್ಲಿ ಕೃಷಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ನೀಡುವ ಗುರಿ ಹೊಂದಿದೆ.
ಭಾರತ್-ವಿಸ್ತಾರ್ ಎಂದರೇನು?
ಭಾರತ್ ವಿಸ್ತಾರ್, ಇದರ ವಿಸ್ತರಿತ ರೂಪ ವರ್ಚುವಲಿ ಇಂಟಿಗ್ರೇಟೆಡ್ ಸಿಸ್ಟಮ್ ಟು ಆಕ್ಸೆಸ್ ಅಗ್ರಿಕಲ್ಚರಲ್ ರಿಸೋರ್ಸಸ್ (VISTAAR) ಪ್ಲಾಟ್ಫಾರ್ಮ್. ಇದು ಕೃಷಿ-ಸ್ಟ್ಯಾಕ್ ಪೋರ್ಟಲ್ ಮತ್ತು ICAR ಅನುಮೋದಿತ ಕೃಷಿ ಪದ್ಧತಿಗಳನ್ನು ಎಐ ವ್ಯವಸ್ಥೆಗಳೊಂದಿಗೆ ಸಂಯೋಜಿಸುತ್ತದೆ. ರೈತರಿಗೆ ಒಂದೇ ಕಡೆ ವಿಶ್ವಾಸಾರ್ಹ, ವೈಜ್ಞಾನಿಕ ಸಲಹೆಯನ್ನು ಒದಗಿಸುವುದು ಇದರ ಗುರಿಯಾಗಿದೆ. ಇದು ಡೇಟಾ ಮತ್ತು ಸಂಶೋಧನೆಯ ಆಧಾರದ ಮೇಲೆ ಕೃಷಿ ಚಟುವಟಿಕೆಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಭಾರತ್-ವಿಸ್ತಾರ್ ಎಐ ಸಾಧನದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 2026-27ನೇ ಸಾಲಿಗೆ 150 ಕೋಟಿ ರೂ. ಮೀಸಲಿಡಲಾಗಿದೆ

ಎಐ ಟೂಲ್ ಕೆಲಸ ಹೇಗೆ?
ಭಾರತ್ ವಿಸ್ತಾರ್ ಎಐ ಟೂಲ್ ಬೆಳೆ ಮಾದರಿಗಳು, ಮಣ್ಣಿನ ಗುಣಮಟ್ಟ, ಹವಾಮಾನ ಪ್ರವೃತ್ತಿಗಳು ಮತ್ತು ಇತರ ಕೃಷಿ ದತ್ತಾಂಶಗಳನ್ನು ವಿಶ್ಲೇಷಿಸಿ ರೈತರಿಗೆ ಸಲಹೆ ಅಥವಾ ಶಿಫಾರಸುಗಳನ್ನು ಮಾಡುತ್ತದೆ. ಸರ್ಕಾರದ ಪ್ರಕಾರ, ಇದು ರೈತರಿಗೆ ಸರಳ ಮತ್ತು ಪ್ರಾಯೋಗಿಕ ರೀತಿಯಲ್ಲಿ ವೈಜ್ಞಾನಿಕ ಮಾಹಿತಿಯನ್ನು ತಲುಪಿಸುತ್ತದೆ. ಕೃಷಿ ಚಟುವಟಿಕೆಗಳಲ್ಲಿನ ನಷ್ಟವನ್ನು ಕಡಿಮೆ ಮಾಡುವುದು ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು ವೇದಿಕೆಯ ಗುರಿಯಾಗಿದೆ. ಸರಿಯಾದ ಸಮಯದಲ್ಲಿ ನಿಖರವಾದ ಮಾಹಿತಿಯನ್ನು ಒದಗಿಸುವುದು ವೆಚ್ಚಗಳನ್ನು ನಿಯಂತ್ರಿಸಲು ಮತ್ತು ಉತ್ಪಾದನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಅಗ್ರಿಸ್ಟಾಕ್ನಡಿ ಕಾರ್ಯ ನಿರ್ವಹಿಸುವ 3 ರಿಜಿಸ್ಟ್ರಿಗಳು:
ಈ ಅಗ್ರಿಸ್ಟಾಕ್ ವೇದಿಕೆಯಡಿ ಪ್ರಮುಖವಾಗಿ 3 ರಿಜಿಸ್ಟ್ರಿಗಳು ಅಂದರೆ 3 ವಿಧಾನದಲ್ಲಿ ನೋಂದಣಿ ಮಾಡಿಕೊಳ್ಳಬಹುದು.
ಫಾರ್ಮರ್ ರಿಜಿಸ್ಟ್ರಿ – ರೈತರಿಗೆ ಸಂಬಂಧಿಸಿದ ದಾಖಲೆಗಳು.
ಕ್ರಾಪ್ ಸಾನ್ ರಿಜಿಸ್ಟ್ರಿ – ಬೆಳೆ ಪ್ರಮಾಣದ ಮಾಹಿತಿ
ಜಿಯೋ ರೆಫರೆನ್ಸ್ಡ್ ವಿಲೇಜ್ ಮ್ಯಾಪ್ ಡೇಟಾ – ಕೃಷಿ ಭೂಮಿಯ ಭೌಗೋಳಿಕ ಮಾಹಿತಿ ಸಂಗ್ರಹಣೆ
ಭಾರತ್-ವಿಸ್ತಾರ್ ವೈಶಿಷ್ಟ್ಯತೆಗಳೇನು?
ಸ್ಥಳೀಯ ಭಾಷೆಯಲ್ಲಿ ಮಾಹಿತಿ:
ಈ ಎಐ ಉಪಕರಣವು ಬಹುಭಾಷಾ ಬೆಂಬಲವನ್ನು ಹೊಂದಿದೆ. ಇದರಿಂದ ರೈತರು ತಮ್ಮದೇ ಭಾಷೆಯಲ್ಲಿ ಪ್ರಶ್ನೆಗಳನ್ನು ಕೇಳಿ ಕೃಷಿ ಸಲಹೆಗಳನ್ನು ಪಡೆಯಬಹುದು.
ನಿಖರವಾದ ಸಲಹೆಗಳು:
ಕೇವಲ ಸಾಮಾನ್ಯ ಮಾಹಿತಿಯ ಬದಲು, ನಿಮ್ಮ ಜಮೀನಿನ ಮಣ್ಣಿನ ಗುಣಮಟ್ಟ, ಹವಾಮಾನ ಮತ್ತು ನೀವು ಬೆಳೆದಿರುವ ಬೆಳೆಗೆ ತಕ್ಕಂತೆ ವೈಯಕ್ತಿಕಗೊಳಿಸಿದ ಸಲಹೆಗಳನ್ನು ಇದು ನೀಡುತ್ತದೆ.
ಹವಾಮಾನ ಮತ್ತು ಕೀಟ ಬಾಧೆ ಎಚ್ಚರಿಕೆ:
ಮಳೆ, ಬರ ಅಥವಾ ಕೀಟಗಳ ದಾಳಿಯ ಬಗ್ಗೆ ಮೊದಲೇ ಎಚ್ಚರಿಕೆ ನೀಡುವ ಮೂಲಕ ಬೆಳೆ ಹಾನಿಯನ್ನು ತಪ್ಪಿಸಲು ಸಹಾಯ ಮಾಡುತ್ತದೆ.
ಉತ್ತಮ ನಿರ್ಧಾರ: ಯಾವ ಸಮಯದಲ್ಲಿ ಬಿತ್ತನೆ ಮಾಡಬೇಕು, ಎಷ್ಟು ಗೊಬ್ಬರ ಹಾಕಬೇಕು ಮತ್ತು ಮಾರುಕಟ್ಟೆಯಲ್ಲಿ ಬೆಲೆ ಎಷ್ಟಿದೆ ಎಂಬ ಮಾಹಿತಿಯನ್ನು ನೀಡುವುದರಿಂದ ರೈತರು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
ಕಿಸಾನ್ ಕಾಲ್ ಸೆಂಟರ್ನೊಂದಿಗೆ ನೇರ ಸಂಪರ್ಕ:
ಭಾರತ್ ವಿಸ್ತಾರ್ ಟೂಲ್ ಕಿಸಾನ್ ಕಾಲ್ ಸೆಂಟರ್ ಸೇವೆಗಳೊಂದಿಗೆ ಲಿಂಕ್ ಆಗಿರುತ್ತದೆ. ಇದರಿಂದಾಗಿ ರೈತರು ನೇರವಾಗಿ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಮತ್ತು ಸಮಸ್ಯೆಗಳಿಗೆ ಪರಿಹಾರಗಳನ್ನು ಪಡೆಯಲು ಸಾಧ್ಯವಾಗಲಿದೆ. ರಿಯಲ್ ಟೈಂ ಹವಾಮಾನ ಮುನ್ಸೂಚನೆಗಳನ್ನು ಲಭ್ಯವಾಗುವಂತೆ ಮಾಡಲಾಗುತ್ತದೆ.
ಪ್ರಸ್ತುತ ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಲ್ಲಿ ಸುಮಾರು 4,000 ಮಂದಿ ಆಧಾರಿತ ಟೆಲಿಗ್ರಾಮ್ ಚಾಟ್ಬೋಟ್ನಿಂದ ಕೃಷಿ ಸಲಹೆಯನ್ನು ಪಡೆಯುತ್ತಿದ್ದಾರೆ. ಡಿಜಿಟಲ್ ಗ್ರೀನ್ ಭಾಷಿಣಿ ತಂತ್ರಜ್ಞಾನವನ್ನು ಬಳಸಿಕೊಂಡು ಈ ಚಾಟ್ಬೋಟ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಹಿಂದಿ, ತೆಲುಗು ಮತ್ತು ಇಂಗ್ಲಿಷ್ನಲ್ಲಿ ಪ್ರತಿಕ್ರಿಯಿಸುತ್ತದೆ. ಇದೀಗ ಭಾರತ್ ವಿಸ್ತಾರ್ ಎಐ ಟೂಲ್ನೊಂದಿಗೆ ದೇಶದ ಎಲ್ಲ ಭಾಗದ ರೈತರಿಗೆ ಅವರದೇ ಭಾಷೆಗಳಲ್ಲಿ ಸಲಹೆ ಸೂಚನೆ ಪಡೆಯಬಹುದಾಗಿದೆ.

ಅಗ್ರಿಸ್ಟಾಕ್ಗೆ ನೋಂದಣಿ ಪ್ರಕ್ರಿಯೆ ಹೇಗೆ?
ರಾಜ್ಯದ ಡಿಜಿಟಲ್ ಕೃಷಿ ಪೋರ್ಟಲ್ ಅಥವಾ ಕಾಮನ್ ಸರ್ವೀಸ್ ಸೆಂಟರ್ ಮೂಲಕ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳನ್ನು ಮತ್ತು ಭೂಮಿ ದಾಖಲೆಗಳನ್ನು ಲಿಂಕ್ ಮಾಡಿ ನೋಂದಣಿ ಮಾಡಿಕೊಳ್ಳಬಹುದು.
ಭಾರತ್ ವಿಸ್ತಾರ್ ಬಳಕೆ ಹೇಗೆ?
ರೈತರು ಯಾವುದೇ ದೂರವಾಣಿ ಅಥವಾ ಮೊಬೈಲ್ನಿಂದ ಮೀಸಲಾದ ಸಂಖ್ಯೆ 155261 ಅನ್ನು ಡಯಲ್ ಮಾಡಿ ‘ಭಾರತಿ’ ಎಂಬ AI ಸಹಾಯಕರೊಂದಿಗೆ ಮಾತನಾಡುವ ಮೂಲಕ ಭಾರತ್-ವಿಸ್ತಾರ್ ಬಳಸಬಹುದು. ಗೂಗಲ್ ಪ್ಲೇ ಸ್ಟೋರ್ನಲ್ಲಿ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಬಹುದು. ಇಲ್ಲವೇ ಅಪ್ಲಿಕೇಶನ್ನಂತೆಯೇ ಕಾರ್ಯನಿರ್ವಹಿಸುವ ವೆಬ್ ಇಂಟರ್ಫೇಸ್ ಲಿಂಕ್ (vistaar.da.gov.in) ಮೂಲಕ ಪ್ರವೇಶಿಸಬಹುದು. ಈ ಲಿಂಕ್ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ವೆಬ್ಸೈಟ್ಗಳಲ್ಲಿ ಹಾಗೂ PM-ಕಿಸಾನ್ ಮತ್ತು PMFBY ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಲಭ್ಯವಿರುತ್ತದೆ. ದೂರವಾಣಿ ಕರೆಗಳ ಜೊತೆಗೆ ಚಾಟ್ ಮೂಲಕವೂ ಸಂವಾದ ನಡೆಸಬಹುದು. ಭಾರತ್-ವಿಸ್ತಾರ್ ದಿನದ 24 ಗಂಟೆಗಳ ಕಾಲ ‘ಡಿಜಿಟಲ್ ಕೃಷಿ ತಜ್ಞ’ರಾಗಿ ಲಭ್ಯವಿರುತ್ತದೆ.
ಯಾವ ಮಾಹಿತಿ ಲಭ್ಯವಿರುತ್ತದೆ?
ಅಧಿಕಾರಿಗಳ ಪ್ರಕಾರ, ರೈತರು ಪ್ರಾರಂಭದಲ್ಲಿ 10 ಪ್ರಮುಖ ಕೇಂದ್ರ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಪಿಎಂ ಕಿಸಾನ್, ಪಿಎಂ ಫಸಲ್ ಭೀಮಾ ಯೋಜನಾ, ಮಣ್ಣಿನ ಆರೋಗ್ಯ ಕಾರ್ಡ್ (SHC), ಮೋಡಿಫೈಡ್ ಇಂಟರೆಸ್ಟ್ ಸಬ್ವೆನ್ಷನ್ ಯೋಜನೆ, ಕೃಷಿ ಯಾಂತ್ರೀಕರಣದ ಉಪ-ಮಿಷನ್, ಪರ್ ಡ್ರಾಪ್ ಮೋರ್ ಕ್ರಾಪ್, ಪಿಎಂ ಕೃಷಿ ಸಿಂಚಾಯಿ ಯೋಜನೆ, ಪಿಎಂ ಅನ್ನದಾತ ಆಯ್ ಸಂರಕ್ಷಣಾ ಅಭಿಯಾನ, ಕೃಷಿ ಮೂಲಸೌಕರ್ಯ ನಿಧಿ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ಬಗ್ಗೆ ಮಾಹಿತಿ ಲಭ್ಯವಿರುತ್ತದೆ.
ಇದಲ್ಲದೆ, ರೈತರು ಈ ಯೋಜನೆಗಳಿಗೆ ಸಂಬಂಧಿಸಿದ ತಮ್ಮ ಪ್ರಯೋಜನ ಸ್ಥಿತಿಯನ್ನು ಪರಿಶೀಲಿಸಬಹುದು. PM-KISAN ಕುಂದುಕೊರತೆಗಳನ್ನು ನೋಂದಾಯಿಸಿ ಟ್ರ್ಯಾಕ್ ಮಾಡಬಹುದು. ಹೆಚ್ಚುವರಿಯಾಗಿ, ICAR ನಿಂದ ವೈಜ್ಞಾನಿಕ ಅರಿವು, ಕೀಟ-ರೋಗ ಎಚ್ಚರಿಕೆಗಳು, ನೈಜ-ಸಮಯದ ಹವಾಮಾನ ಮಾಹಿತಿ, ಮಂಡಿ ಬೆಲೆಗಳು ಹಾಗೂ ಹವಾಮಾನ ಆಧಾರಿತ ಕೃಷಿ ವಿಜ್ಞಾನ ಸಲಹೆಯ ಆಧಾರದ ಮೇಲೆ ಬೆಳೆ ಮತ್ತು ಜಾನುವಾರು ಸಲಹೆಗಳನ್ನು ಪಡೆಯಬಹುದು.
ಎಲ್ಲಾ ಕೇಂದ್ರ ಯೋಜನೆಗಳನ್ನು ಮೇ 2026ರೊಳಗೆ ಅರ್ಹತೆ, ಅರ್ಜಿಗಳು, ಪ್ರಯೋಜನ ಸ್ಥಿತಿ ಮತ್ತು ಕುಂದುಕೊರತೆ ಪರಿಹಾರಕ್ಕಾಗಿ ಸಂಯೋಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೃಷಿಯಲ್ಲಿ ಎಐ ಸಾಧನ ಏಕೆ ಬೇಕು?
ಪ್ರಸ್ತುತ ಕೃಷಿ ಕ್ಷೇತ್ರದಲ್ಲಿ ಬಿತ್ತನೆ ಬೀಜದ ಅಭಿವೃದ್ಧಿಯಿಂದ ಹಿಡಿದು ಪೂರೈಕೆ ಸರಪಳಿ ಮತ್ತು ಕೃಷಿ ಸಾಲದವರೆಗೆ ವಿವಿಧ ಖಾಸಗಿ ಕಂಪನಿಗಳು, ಸ್ಟಾರ್ಟ್ಅಪ್ಗಳು, ಎನ್ಜಿಒಗಳು ಹಾಗೂ ಸರ್ಕಾರಿ ಸಂಶೋಧನಾ ಸಂಸ್ಥೆಗಳು ಪ್ರತ್ಯೇಕವಾಗಿ ಅನೇಕ ತಾಂತ್ರಿಕ ಪ್ರಯೋಗಗಳನ್ನು ನಡೆಸುತ್ತಿವೆ. ಇವೆಲ್ಲವೂ ಅಪಾರ ಪ್ರಮಾಣದ ದತ್ತಾಂಶವನ್ನು ಸೃಷ್ಟಿಸುತ್ತಿದ್ದರೂ, ಇವುಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ರೈತರಿಗೆ ಇವುಗಳ ಪೂರ್ಣ ಪ್ರಯೋಜನ ಅಥವಾ ಮಾಹಿತಿಗಳು ಸಿಗುತ್ತಿಲ್ಲ. ಈ ಎಲ್ಲ ಚದುರಿಹೋಗಿರುವ ಸಂಪನ್ಮೂಲಗಳನ್ನು ಮತ್ತು ಆಧುನಿಕ ಕೃಷಿ ತಂತ್ರಜ್ಞಾನದ ಆವಿಷ್ಕಾರಗಳನ್ನು ಒಂದೇ ವೇದಿಕೆಯಡಿ ತಂದು, ಕೃಷಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ದಕ್ಷತೆಯನ್ನು ಹೆಚ್ಚಿಸಲು ಭಾರತ್-ವಿಸ್ತಾರ್ ಎಂಬ ಎಐ ಉಪಕರಣವನ್ನು ಬಳಸಲಾಗುತ್ತಿದೆ

