ಅಹಮದ್ ನಗರ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಾಕಾರಿಯಾಗಿ ವಾಟ್ಸಾಪ್ ಪೋಸ್ಟ್ ಹಾಕಿದ್ದ ಪೇದೆಯನ್ನು ಇಲಾಖೆಯಿಂದ ಅಮಾನತು ಮಾಡಿದ ಘಟನೆ ಮಹಾರಾಷ್ಟ್ರದ ಅಹಮದ್ ನಗರದಲ್ಲಿ ಭಾನುವಾರದಂದು ನಡೆದಿದೆ.
ಪೊಲೀಸ್ ಪೇದೆ ರಮೇಶ್ ಶಿಂಧೆ ಅಮಾನಾತಾಗಿದ್ದಾರೆ. ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಬಾಳಾಸಾಹೇಬ್ ತೋರಟ್ ಅವರ ಬಾಡಿಗಾರ್ಡ್ ಆಗಿದ್ದ ರಮೇಶ್ ಶಿಂಧೆ ಮೋದಿ ಅವರನ್ನು ನಿಂದಿಸಿ ಪೋಸ್ಟ್ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ನ ಸೈಬರ್ ಸೆಲ್ ತನಿಖೆ ನಡೆಸಿದ ಬಳಿಕ ಶನಿವಾರದಂದು ಶಿಂಧೆ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅಹಮದ್ ನಗರದ ಎಸ್ಪಿ ರಂಜನ್ ಕುಮಾರ್ ಹೇಳಿದ್ದಾರೆ.
15 ದಿನಗಳ ಹಿಂದೆ ಬೆಂಗಳೂರಿನಲ್ಲಿ ಪೊಲೀಸ್ ಪೇದೆಯೊಬ್ಬರು ಮೋದಿ ವಿರುದ್ಧ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಕ್ಕೆ ಪೇದೆಯನ್ನು ಅಮಾನತು ಮಾಡಲಾಗಿತ್ತು.
ಪೊಲೀಸ್ ಪೇದೆ ಸಮೀಲ್, ಮೋದಿಯವರೇ ನೀವು ಈ ಹಿಂದೆ ಎಂದಾದರೂ ಸೈನಿಕರ ಪ್ರತಿಭಟನೆ ನೋಡಿದ್ದೀರಾ? ನೀವು ಅಂತಹ ವಿಷಯವನ್ನ ಎಂದಾದ್ರೂ ಕೇಳಿದ್ದೀರಾ? ನಿಮ್ಮ ಸರ್ಕಾರಕ್ಕೆ ಇದಕ್ಕಿಂತಾ ನಾಚಿಕೆ ವಿಷಯ ಮತ್ತೊಂದಿಲ್ಲ. ನೀನು ಪ್ರಧಾನ ಮಂತ್ರಿಯಾಗಿರೋದು ಸಾಕಾಗಿಲ್ವಾ ಎಂದು ಏಕವಚನದಲ್ಲಿ ಮೋದಿ ವಿರುದ್ಧ ಸಮೀಲ್ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು ಎಂದು ವರದಿಯಾಗಿದೆ.