ನವದೆಹಲಿ: ಅಸಂಸದೀಯ ಪದ ಬಳಕೆಯನ್ನು ನಿರ್ಬಂಧಿಸಿದ ಬೆನ್ನಲ್ಲೇ ಸೋಮವಾರದಿಂದ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ಧರಣಿ ನಡೆಸುವುದನ್ನು ನಿಷೇಧಿಸಲಾಗಿದೆ. ಮುಂಗಾರು ಅಧಿವೇಶನಕ್ಕೆ ಮುಂಚಿತವಾಗಿ, ಸಂಸತ್ತಿನಲ್ಲಿ ಯಾವುದೇ ಧರಣಿಗೆ ಅವಕಾಶ ನೀಡುವುದಿಲ್ಲ ಹೊಸ ಆದೇಶದಲ್ಲಿ ತಿಳಿಸಲಾಗಿದೆ.
ಸಂಸತ್ತಿನ ಸದಸ್ಯರು ಯಾವುದೇ ಧರಣಿ ಅಥವಾ ಮುಷ್ಕರಕ್ಕೆ ಅದರ ಆವರಣವನ್ನು ಬಳಸುವಂತಿಲ್ಲ ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
“ಸದಸ್ಯರು ಯಾವುದೇ ಪ್ರತಿಭಟನೆ, ಧರಣಿ, ಮುಷ್ಕರ, ಉಪವಾಸ ಅಥವಾ ಯಾವುದೇ ಧಾರ್ಮಿಕ ಸಮಾರಂಭಗಳನ್ನು ನಡೆಸುವ ಉದ್ದೇಶಕ್ಕಾಗಿ ಸಂಸತ್ ಭವನದ ಆವರಣವನ್ನು ಬಳಸುವಂತಿಲ್ಲ” ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: I2U2 ಶೃಂಗಸಭೆ – 6 ಕ್ಷೇತ್ರಗಳಲ್ಲಿ 4 ದೇಶಗಳು ಜಂಟಿಯಾಗಿ ಹೂಡಿಕೆ
ಗುರುವಾರ ಲೋಕಸಭೆ ಕಾರ್ಯದರ್ಶಿಗಳು, ಅಸಂಸದೀಯ ಪದ ಬಳಕೆಗೆ ಸಂಬಂಧಿಸಿ ಹೊಸ ಬುಕ್ಲೆಟ್ ಬಿಡುಗಡೆ ಮಾಡಿದ್ದರು. ಅಸಂಸದೀಯ ಪದಗಳ ಪಟ್ಟಿಗೆ ಹೊಸದಾಗಿ ಹಲವು ಪದಗಳನ್ನು ಸೇರಿಸಲಾಗಿದೆ. ಅದರ ಪ್ರಕಾರ ಇನ್ನು ಮುಂದೆ ಜುಮ್ಲಾ ಜೀವಿ, ಕೋವಿಡ್ ಸ್ಪ್ರೆಡರ್, ಸ್ನೂಪ್ಗೇಟ್ ಪದಗಳನ್ನು ಸಂಸದರು ಸಂಸತ್ ಕಲಾಪದಲ್ಲಿ ಬಳಸುವಂತೆ ಇಲ್ಲ.
ಅಷ್ಟೇ ಅಲ್ಲದೇ ನಾಚಿಕೆಗೇಡು, ಕಿರುಕುಳ, ಮೋಸ, ಭ್ರಷ್ಟ, ಡ್ರಾಮಾ, ಹಿಪೋಕ್ರಸಿ, ಸರ್ವಾಧಿಕಾರಿ ಎಂಬ ಪದಗಳನ್ನೂ ಬಳಸುವಂತೆ ಇಲ್ಲ. ಶಕುನಿ, ತಾನ್ ಶಾ, ವಿನಾಶ ಪುರುಷ್, ಖಲಿಸ್ತಾನಿ, ದ್ರೋಹಿ, ದ್ರೋಹ ಚರಿತ್ರೆ, ಚಮ್ಚಾ, ಚಮಚಾಗಿರಿ, ಹೇಡಿ, ಕ್ರಿಮಿನಲ್, ಮೊಸಳೆ ಕಣ್ಣೀರು, ಕತ್ತೆ, ಅಸಮರ್ಥ, ಗೂಂಡಾ, ಅಹಂಕಾರಿ, ಕತ್ತಲ ದಿನಗಳು, ದಾದಾಗಿರಿ, ಲೈಂಗಿಕ ಕಿರುಕುಳ, ನಂಬಿಕೆ ದ್ರೋಹಿ ಎಂಬ ಪದಗಳನ್ನು ಕೂಡ ಸಂಸತ್ ಭಾಷಣದ ವೇಳೆ ಸಂಸದರು ಬಳಕೆ ಮಾಡಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.