ನವದೆಹಲಿ: ಅಚ್ಚರಿಯ ಬೆಳವಣಿಗೆಯಲ್ಲಿ ಲೋಕಸಭಾ ಚುನಾವಣೆ (Lok Sabha Election) ಫಲಿತಾಂಶ ಪ್ರಕಟವಾಗುವ ಮುನ್ನ ದಿನವಾದ ಇಂದು ದೆಹಲಿಯಲ್ಲಿ ಪ್ರಧಾನಿ ಮೋದಿ (PM Narendra Modi) ಅವರನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ಭೇಟಿ ಮಾಡಿದರು. ಇಬ್ಬರು ನಾಯಕರು ಯಾವ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ.
ಹಣಕಾಸು ಆಯೋಗದ ನಿಯೋಗವು ಜೂನ್ 10 ರಂದು ಪಾಟ್ನಾಗೆ ಭೇಟಿ ನೀಡುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಮತ್ತು ವಿಶೇಷ ಪ್ಯಾಕೇಜ್ಗಾಗಿ ಬಿಹಾರ ಸರ್ಕಾರದ ಬೇಡಿಕೆಯ ಬಗ್ಗೆ ಚರ್ಚಿಸಿರಬಹುದು ಎಂದು ಮೂಲಗಳು ತಿಳಿಸಿವೆ.
ಎನ್ಡಿಎ (NDA) ಸರ್ಕಾರ ಅಧಿಕಾರಕ್ಕೆಏರಿದರೆ ನಿತೀಶ್ ಕುಮಾರ್ ಅವರಿಗೆ ಮೋದಿ ಕ್ಯಾಬಿನೆಟ್ನಲ್ಲಿ ಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ಅವರ ಜೊತೆ ಚರ್ಚಿಸಲು ಮೋದಿ ಇಂದು ನಿತೀಶ್ ಅವರನ್ನು ಆಹ್ವಾನಿಸಿದ್ದಾರೆ ಎಂಬ ವದಂತಿ ಹರಡಿದೆ. ಇದನ್ನೂ ಓದಿ: 64.2 ಕೋಟಿ ಜನರಿಂದ ಮತದಾನ – ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ ವಿಶ್ವದಾಖಲೆ
ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು ಮಂಗಳವಾರ ಫಲಿತಾಂಶ ಪ್ರಕಟವಾಗಲಿದೆ. ಮತಗಟ್ಟೆ ಸಮೀಕ್ಷೆ ನಡೆಸಿದ ಬಹುತೇಕ ಸಮೀಕ್ಷೆಗಳು ಎನ್ಡಿಎಗೆ 350+ ಸ್ಥಾನಗಳನ್ನು ನೀಡಿವೆ. ಬಿಹಾರದಲ್ಲಿ ಬಿಜೆಪಿ, ಜೆಡಿಯು ಮೈತ್ರಿಕೂಟ ಹೆಚ್ಚಿನ ಸ್ಥಾನ ಪಡೆಯಲಿದೆ ಎಂದು ಭವಿಷ್ಯ ನುಡಿದಿವೆ.