ಚಿಕ್ಕಬಳ್ಳಾಪುರ: ಕಾಲ್ನಡಿಗೆಯ ಮೂಲಕವೇ ಗಿರಿಧಾಮವನ್ನು ಏರಿ ಗಾಂಧಿ ಜಯಂತಿಯನ್ನು ಆಚರಿಸಿದ ಕೃಷಿ ಸಚಿವ ಶಿವಶಂಕರರೆಡ್ಡಿ ಅವರು ಸ್ಥಳೀಯ ಶಾಸಕರ ವಿರುದ್ಧ ಬಹಿರಂಗವಾಗಿಯೇ ಭಿನ್ನಮತ ಹೊರಹಾಕಿದ್ದಾರೆ.
ವಿಶ್ವವಿಖ್ಯಾತ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದ ತಪ್ಪಲಿನ ಸುಲ್ತಾನ ಪೇಟೆಯ ಕಲ್ಲಿನ ಮೆಟ್ಟಿಲುಗಳ ಮಾರ್ಗದ ಬಳಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್ ಎಚ್ ಶಿವಶಂಕರರೆಡ್ಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿ ಅವರು, ಜಿಲ್ಲೆಯ ಯಾವುದೇ ಸಭೆ ಸಮಾರಂಭ-ಕಾರ್ಯಕ್ರಮಗಳಿಗೆ ನಾನು ಆಹ್ವಾನ ಮಾಡಿದ್ದರೂ ಕೂಡ ಶಾಸಕ ಸುಧಾಕರ್ ಬರಲ್ಲ ಅಂತ ಸಚಿವ ಶಿವಶಂಕರರೆಡ್ಡಿ ಶಾಸಕ ಸುಧಾಕರ್ ವಿರುದ್ಧ ತಮ್ಮ ಅಸಮಾಧಾನ ಹೊರಹಾಕುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ನಲ್ಲಿನ ಭಿನ್ನಮತವಿರುವುದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.
ಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ಸುಧಾಕರ್ ಗೈರು ಆಗಿದ್ದು, ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನೇ ಸ್ವತಃ ಕೆಲ ಸಭೆ-ಕಾರ್ಯಕ್ರಮಗಳಿಗೆ ಕರೆದಿದ್ದೇನೆ. ಆದರೆ ಸುಧಾಕರ್ ಬಂದಿಲ್ಲ, ಅವರು ಬಂದಿಲ್ಲ ಅಂದರೆ ನಾನು ಏನು ಮಾಡೋಕು ಆಗಲ್ಲ. ಮಂತ್ರಿಯಾಗಿ ನನ್ನ ಜವಾಬ್ದಾರಿಯನ್ನ ನಾನು ನಿಭಾಯಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಹೆಚ್ಚು ಅಲ್ಲ ಕಡಿಮೆ ಅಲ್ಲ. ಪಾಳೇಗಾರಿಕೆನೂ ಇಲ್ಲ, ಪಾಳೇಗಾರಿಕೆ ಕಾಲ ಮುಗಿದು ಹೋಗಿದೆ ಎಂದು ಹೇಳಿದರು.
ಜನಪ್ರತಿನಿಧಿಗಳಾದ ಮಾತ್ರಕ್ಕೆ ಯಾರಿಗೇನು ಕೊಂಬುಗಳಿಲ್ಲ. ಜನ ನಮ್ಮನ್ನ ಆಯ್ಕೆ ಮಾಡಿದ್ದಾರೆ, ಒಂದು ವೇಳೆ ಜನ ಮನಸ್ಸು ಮಾಡಿದ್ರೇ ನಮ್ಮನ್ನ ಕೆಳಗಿಳಿಸ್ತಾರೆ. ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಜಿಲ್ಲೆಯ ಅಭಿವೃದ್ದಿಗೆ ಸಹಕರಿಸಬೇಕೇ ಹೊರತು, ಯಾರು ಹೆಚ್ಚೇನು ಅಲ್ಲ ಕಡಿಮೆ ಅಲ್ಲ. ಇದನ್ನ ಶಾಸಕ ಸುಧಾಕರ್ ಅರ್ಥ ಮಾಡಿಕೊಳ್ಳಬೇಕಿದೆ. ಇಲ್ಲ ಅಂತ ದೂರ ಹೋದರೆ, ಯಾವುದು ನಿಲ್ಲಲ್ಲ. ಹೀಗಾಗಿ ನಾನು ಏನೂ ಮಾಡಕ್ಕಾಗಲ್ಲ ಅಂತ ಶಾಸಕ ಸುಧಾಕರ್ ವಿರುದ್ದ ಸಚಿವ ಶಿವಶಂಕರರೆಡ್ಡಿ ಬಹಿರಂಗವಾಗಿಯೇ ತಮ್ಮ ಬೇಸರ ಹೊರಹಾಕಿದ್ದಾರೆ.
ಗಾಂಧೀಜಿ ನಂಧಿಗಿರಿಧಾಮವನ್ನು ಕಾಲ್ನಡಿಗೆ ಮೂಲಕವೇ ಏರಿದ್ದರು. ಹೀಗಾಗಿ ಗಾಂಧಿ ಜಯಂತಿಯ ಅಂಗವಾಗಿ ಇಂದು ಸಹ ವಿವಿಧ ಶಾಲೆಯ ಎನ್ಎಸ್ಎಸ್ ನ ವಿದ್ಯಾರ್ಥಿಗಳು ನಂದಿಬೆಟ್ಟದ ಕಲ್ಲಿನ ಮೆಟ್ಟಿಲುಗಳನ್ನು ಮೂಲಕ ಬೆಟ್ಟು ಹತ್ತುವುದರ ಜೊತೆಗೆ ಶ್ರಮದಾನ ಮಾಡಿ ಗಾಂಧಿ ಜಯಂತಿ ಆಚರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಚಿವ ಶಿವಶಂಕರರೆಡ್ಡಿ ಹಾಗೂ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ಸಹ ಸ್ವಲ್ಪ ನಂದಿಬೆಟ್ಟ ಏರಿ ಗಾಂಧೀಜಿಯನ್ನ ನೆನೆದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv