ಬೆಂಗಳೂರು: ಕನ್ನಡ ಹೆಸರಾಂತ ಧಾರಾವಾಹಿಗಳಲ್ಲಿ ಒಂದಾದ ಅಗ್ನಿಸಾಕ್ಷಿಯ ಸಿದ್ದಾರ್ಥ್ ಖ್ಯಾತಿಯ ನಟ ವಿಜಯ್ ಸೂರ್ಯ ತಮ್ಮ ದೂರದ ಸಂಬಂಧಿ ಚೈತ್ರಾ ಅವರ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಗುಳಿಕೆನ್ನೆಯ ಚೆಲುವ ವಿಜಯ್ ಸೂರ್ಯ ತಮ್ಮ ದೂರದ ಸಂಬಂಧಿ ಚೈತ್ರಾ ಅವರ ಜತೆ ಪ್ರೇಮಿಗಳ ದಿನದಂದೇ ವಿವಾಹವಾಗಿದ್ದಾರೆ. ಮನೆಯವರೆಲ್ಲ ಮೆಚ್ಚಿದ ಚೈತ್ರಾ ಅವರ ಜೊತೆ ವಿಜಯ್ ಸಪ್ತಪದಿ ತುಳಿದಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ಅಗ್ನಿಸಾಕ್ಷಿ’ ಧಾರಾವಾಹಿಯ ಮೂಲಕವೇ ನಟ ವಿಜಯ್ ಸೂರ್ಯ ಜನಪ್ರಿಯತೆ ಪಡೆದವರು. ಚೈತ್ರಾ ಅವರ ಸಾಫ್ಟ್ ವೇರ್ ಉದ್ಯೋಗಿಯಾದ್ದು, ಈ ಕಿರುತೆರೆ ಹಾಗೂ ಸಾಫ್ಟ್ ವೇರ್ ಜೋಡಿ ಅಗ್ನಿಸಾಕ್ಷಿಯಾಗಿ ನವ ಜೀವನವನ್ನು ಆರಂಭಿಸಲು ಜೊತೆಗೂಡಿದ್ದಾರೆ.
ಈ ಹಿಂದೆ ಮಾಧ್ಯಮಗಳಲ್ಲಿ ವಿಜಯ್ ಸೂರ್ಯ ತಮ್ಮ ಮದುವೆಯ ಕುರಿತು ಹೇಳಿದ್ದರು. ಚೈತ್ರಾ ಮತ್ತು ನಮ್ಮ ಕುಟುಂಬದವರಿಗೆ 9 ವರ್ಷಗಳ ಹಿಂದೆ ಪರಿಚಯವಾಗಿತ್ತು ಆದರೆ ನಾನು ಚೈತ್ರಾರನ್ನು ಎರಡು ಬಾರಿ ಮಾತ್ರ ಭೇಟಿ ಮಾಡಿದ್ದೆ. ನಮ್ಮ ತಾಯಿ ಚೈತ್ರಾರನ್ನು ನೋಡಿ ಇಷ್ಟಪಟ್ಟು ಮದುವೆಯ ಬಗ್ಗೆ ಅವರ ಕುಟುಂಬದವರ ಮುಂದೆ ಪ್ರಸ್ತಾಪ ಮಾಡಿದ್ದರು. ಬಳಿಕ ಅವರು ಒಪ್ಪಿಗೆ ಸೂಚಿಸಿದ ಬಳಿಕ ಇಬ್ಬರ ಜಾತಕ ಹೊಂದಾಣಿಕೆಯಾಗಿದ್ದು, ಗುರು-ಹಿರಿಯರ ಸಮ್ಮುಖದಲ್ಲೇ ಮದುವೆಯಾಗಲಿದ್ದೇವೆ ಎಂದು ಹೇಳಿದ್ದರು.
ಚೈತ್ರಾ ನಾನೊಬ್ಬ ನಟ ಎಂದು ಅಷ್ಟಾಗಿ ಚಿಂತಿಸಲಿಲ್ಲ. `ವ್ಯಕ್ತಿ ಯಾರು ಎನ್ನುವುದಕ್ಕಿಂತ ವ್ಯಕ್ತಿ ಹೇಗೆ’ ಎಂದು ಚೈತ್ರಾ ನೋಡುತ್ತಾರೆ. ನನ್ನ ನಟನಾ ಫೀಲ್ಡ್, ಅಲ್ಲಿನ ಸುದ್ದಿ, ಗಾಸಿಪ್ಗಳ ಬಗ್ಗೆ ಮುಂಚಿತವಾಗಿ ನಾನು ಅವರೊಂದಿಗೆ ಮಾತನಾಡಿದ್ದೇನೆ. ಬೇರೆ ವೃತ್ತಿಯಂತೆ ನಟನೆಯು ಒಂದು ವೃತ್ತಿ ಎಂದು ಅವರು ಅರ್ಥಮಾಡಿಕೊಂಡಿದ್ದಾರೆ. ಆದ್ದರಿಂದ ಅವರು ನನಗೆ ಇಷ್ಟವಾದರು ಎಂದು ವಿಜಯ್ ಸೂರ್ಯ ತಮ್ಮ ಪತ್ನಿ ಚೈತ್ರಾ ಬಗ್ಗೆ ಹೇಳಿದ್ದಾರೆ.
ವಿಶೇಷವಾಗಿ ಪ್ರೇಮಿಗಳ ದಿನದಂದು ಈ ನವ ಜೋಡಿ ಸಪ್ತಪದಿ ತುಳಿದಿದ್ದು, ಇವರ ದಾಂಪತ್ಯ ಜೀವನ ಚೆನ್ನಾಗಿರಲಿ ಎಂದು ಬಂಧು – ಮಿತ್ರರು ಶುಭಹಾರೈಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv