ನವದೆಹಲಿ: ಅಗ್ನಿಪಥ್ ಸೇವಾ ನೇಮಕಾತಿ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತು ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ನ್ಯಾಯಾಲಯವು ಸರ್ಕಾರದ ಪರವಾದ ವಾದವನ್ನು ಆಲಿಸಬೇಕು ಎಂದು ಕೋರಿ ಕೇಂದ್ರವು ಸುಪ್ರೀಂ ಕೋರ್ಟ್ಗೆ ಕೇವಿಯಟ್ ಸಲ್ಲಿಸಿದೆ.
ಕೇಂದ್ರದ ನೂತನ ಯೋಜನೆ ಆಗಿರುವ ಅಗ್ನಿಪಥ್ ವಿರೋಧಿಸಿ ದೇಶದ ಹಲವಾರು ಭಾಗದಲ್ಲಿ ಪ್ರತಿಭಟನೆಯ ಕಿಚ್ಚು ಹತ್ತಿದೆ. ಅನೇಕ ಸಾರ್ವಜನಿಕ ಆಸ್ತಿ ಪಾಸ್ತಿಗಳು ಇದರಿಂದ ನಾಶವಾಗಿದೆ. ಇದೀಗ ಇದನ್ನು ವಿರೋಧಿ ಅನೇಕರು ಸುಪ್ರೀಂ ಕೋರ್ಟ್ನ ಮಧ್ಯ ಪ್ರವೇಶವನ್ನು ಬಯಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಗ್ನಿಪಥ್ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ 3 ಅರ್ಜಿಗಳನ್ನು ಸಲ್ಲಿಸಲಾಗಿದೆ.
ಇದಕ್ಕೆ ಸಂಬಂಧಿಸಿ ನಿನ್ನೆಯೂ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕೆಂದು ವಕೀಲ ಹರ್ಷ ಅಜಯ್ ಸಿಂಗ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಸಂಬಂಧ ಅರ್ಜಿಯಲ್ಲಿ ಈ ಯೋಜನೆಯಿಂದಾಗಿ ದೇಶದ ಹಲವಾರು ಭಾಗಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಯೂ ನಡೆದಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಮರುಪರಿಶೀಲಿಸಲು ಕೇಂದ್ರಕ್ಕೆ ನಿರ್ದೇಶನಗಳನ್ನು ನೀಡಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಎಲ್ಲ ಮದರಸಾಗಳಲ್ಲಿ ಯೋಗ ದಿನ ಆಚರಿಸಬೇಕು: ಯುಪಿ ಸರ್ಕಾರ ಆದೇಶ
ಇದಕ್ಕೂ ಮುನ್ನ ಈ ಯೋಜನೆಯ ವಿರುದ್ಧ ವಕೀಲರಾದ ಎಂಎಲ್ ಶರ್ಮಾ ಮತ್ತು ವಿಶಾಲ್ ತಿವಾರಿ ಅವರು ಸುಪ್ರೀಂ ಕೋರ್ಟ್ನಲ್ಲಿ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯ ಬಳಿಕ MVA ಸರ್ಕಾರಕ್ಕೆ ಮತ್ತೆ ಶಾಕ್ – ಬಿಜೆಪಿಯ ಐವರು ಆಯ್ಕೆ
ಎಂಎಲ್ ಶರ್ಮಾ ಸಲ್ಲಿಸಿದ ಅರ್ಜಿಯಲ್ಲಿ ಅಗ್ನಿಪಥ್ ಯೋಜನೆಯು ಸಂವಿಧಾನಾತ್ಮಕ ನಿಬಂಧನಗಳಿಗೆ ವಿರುದ್ಧವಾಗಿದೆ ಹಾಗೂ ಸರ್ಕಾರವು ಸಂಸತ್ತಿನ ಅನುಮೋದನೆಯಿಲ್ಲದೆ ಶತಮಾನಗಳಷ್ಟು ಹಳೆಯದಾದ ಸಶಸ್ತ್ರ ಪಡೆಗಳ ಆಯ್ಕೆ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ ಎಂದು ಆರೋಪಿಸಿದ್ದಾರೆ.
ಜೂನ್ 14ರಂದು ಕೇಂದ್ರವು ಅಗ್ನಿಪಥ್ ಯೋಜನೆಯನ್ನು ಜಾರಿಗೆ ತರುವುದಾಗಿ ಹೇಳಿತ್ತು. ಇದಾದ ಬಳಿಕ ಈ ಯೋಜನೆಯನ್ನು ವಿರೋಧಿಸಿ ದೇಶದ ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆಗಳು ತಾರಕಕ್ಕೆ ಏರಿದೆ. 17.5 ರಿಂದ 21 ವರ್ಷದೊಳಗಿನ ಸೈನಿಕರನ್ನು 4 ವರ್ಷಗಳ ಅವಧಿಗೆ ಶಸ್ತ್ರಾಸ್ತ್ರ ಪಡೆಗಳಲ್ಲಿ ನೇಮಕ ಮಾಡಿಕೊಳ್ಳುವ ಕೇಂದ್ರದ ಯೋಜನೆಗೆ ಕಳೆದ 4 ದಿನಗಳಿಂದ ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಹರಿಯಾಣ, ತೆಲಂಗಾಣ ರಾಜ್ಯಗಳಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಪ್ರತಿಭಟನೆ ಪರಿಣಾಮ ಭಾನುವಾರ 483 ರೈಲುಗಳು ರದ್ದಾಗಿತ್ತು.