ನಟನಾಗಬೇಕು, ನಿರ್ದೇಶಕನಾಗಬೇಕು, ಕಲಾವಿದನಾಗಬೇಕು ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂಬ ಕನಸು ಹೊತ್ತು ಗಾಂಧಿ ನಗರಕ್ಕೆ ಕಾಲಿಟ್ಟವರ ಸಂಖ್ಯೆ ಲೆಕ್ಕವಿಲ್ಲದಷ್ಟು. ಈಗಲೂ ಕನಸು ಹೊತ್ತು ಬರುತ್ತಿರುವವರ ಸಂಖ್ಯೆಯೇನೂ ಕಮ್ಮಿಯಿಲ್ಲ. ಹೀಗೆ ಬಂದ ಪ್ರತಿಭೆಗಳಲ್ಲಿ ಪ್ರಮೋದ್ ರಾಜ್ ಕೂಡ ಒಬ್ಬರು.
ನಿರ್ದೇಶಕನಾಗಬೇಕು ಎಂಬ ಕನಸಿನ ಬೆನ್ನೇರಿ ಚಿತ್ರರಂಗಕ್ಕೆ ಪ್ರವೇಶಿಸಿದ ಪ್ರಮೋದ್ ರಾಜ್ ಆರಂಭಿಕ ದಿನಗಳಲ್ಲಿ ಸಹಾಯಕ ನೃತ್ಯ ನಿರ್ದೇಶಕನಾಗಿ ಹಲವು ನೃತ್ಯ ನಿರ್ದೇಶಕರ ಬಳಿ ಕೆಲಸ ನಿರ್ವಹಿಸಿದ್ದಾರೆ. ಹಾಗೆ ದುಡಿಯುತ್ತಲೇ ಸಿನಿಮಾ ಜ್ಞಾನವನ್ನೂ ಕರಗತ ಮಾಡಿಕೊಂಡು ಅವಿರತ ಪ್ರಯತ್ನದಿಂದ ಕೊನೆಗೂ ಅಘೋರ ಚಿತ್ರಕ್ಕೆ ನಿರ್ದೇಶಕನ ಕ್ಯಾಪ್ ತೊಟ್ಟು ಸಿನಿಮಾ ನಿರ್ದೇಶನದ ಕನಸು ನನಸಾಗಿಸಿಕೊಂಡಿದ್ದಾರೆ.
ಟ್ರೇಲರ್ ಮೂಲಕ ಅಘೋರ ಸಿನಿಮಾ ಝಲಕ್ ಕಂಡು ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಐದು ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡು ಎಲ್ಲರಿಂದಲೂ ಮೆಚ್ಚುಗೆ ಗಳಿಸಿಕೊಂಡ ಟ್ರೇಲರ್ ಸಿನಿಮಾ ಮೇಲೆ ಅಪಾರ ನಿರೀಕ್ಷೆಯನ್ನು ಹುಟ್ಟಿಸಿದೆ. ತಾಂತ್ರಿಕವಾಗಿ ರಿಚ್ ಆಗಿ ಮೂಡಿ ಬಂದಿರುವ ಸಿನಿಮಾ ಖಂಡಿತ ಸೀಟಿನಂಚಿನಲ್ಲಿ ಪ್ರೇಕ್ಷಕರನ್ನು ಕೂರಿಸುತ್ತೆ ಅನ್ನೋದು ನಿರ್ದೇಶಕರ ಭರವಸೆಯ ಮಾತುಗಳು. ಕಾಸ್ಮಿಕ್ ಎನರ್ಜಿ ಬಗ್ಗೆ ಹೆಣೆಯಲಾದ ಸಿನಿಮಾ ಅಘೋರ. ಪ್ರಪಂಚದಲ್ಲಿ ಹುಟ್ಟು ಎಲ್ಲರಿಗೂ ಗೊತ್ತು, ಆದ್ರೆ ಸಾವು ನಿಗೂಢ. ಆ ಸಾವಿನ ಸುಳಿಯಲ್ಲಿ ಸಿಕ್ಕಿಹಾಕಿಕೊಂಡವರು ತಪ್ಪಿಸಿಕೊಳ್ಳಲು ಯಾವೆಲ್ಲ ಪ್ರಯತ್ನಗಳನ್ನು ಮಾಡುತ್ತಾರೆ ಅನ್ನೋದನ್ನ ಹಾರರ್ ರೂಪದಲ್ಲಿ ಕಟ್ಟಿಕೊಡಲಾಗಿದೆ. ಅಷ್ಟೇ ಅಲ್ಲ ಪಂಚಭೂತಗಳಿಲ್ಲದೆ ಮನುಷ್ಯ ಜೀವನ ಇಲ್ಲ, ಹಾಗೆಯೇ ಪ್ರಕೃತಿ ಇಲ್ಲದೆಯೂ ಇಲ್ಲ. ಪಂಚಭೂತಗಳನ್ನು ಪ್ರಕೃತಿ ಜೊತೆ ಹೋಲಿಕೆ ಮಾಡಿ ಹಾರರ್ ಜಾನರ್ನಲ್ಲಿ ಸಿದ್ಧವಾದ ಸಿನಿಮಾ ಇದು. ಸಿನಿಮಾದ ಪ್ರತಿಯೊಂದು ಪಾತ್ರ ಕೂಡ ಇಲ್ಲಿ ಪಂಚಭೂತಗಳನ್ನು ಪ್ರತಿನಿಧಿಸಲಿದೆಯಂತೆ. ಇದನ್ನೂ ಓದಿ: ಐರಾಗೆ ಹುಟ್ಟುಹಬ್ಬದ ಸಂಭ್ರಮ – ನಿನ್ನ ಕೈ ಹಿಡಿಯಲು ಯಾವಾಗಲೂ ಇರುತ್ತೇನೆ ಅಂದ ರಾಧಿಕಾ
ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಇಡೀ ಚಿತ್ರತಂಡ ನಿರತವಾಗಿದ್ದು, ಹಿರಿಯ ನಟ ಅವಿನಾಶ್ ಅಘೋರಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಉಳಿದಂತೆ ಅಶೋಕ್, ಪುನೀತ್ ಗೌಡ, ರಚನಾ ದಶರಥ್, ದ್ರವ್ಯ ಶೆಟ್ಟಿ ಮುಂತಾದವರನ್ನೊಳಗೊಂಡ ತಾರಾಗಣ ಚಿತ್ರದಲ್ಲಿದೆ. ವಿ.ನಾಗೇಂದ್ರ ಪ್ರಸಾದ್ ಸಂಗೀತ ಸಂಯೋಜನೆ, ಮುರಳೀಧರನ್ ಹಾಗೂ ಪ್ರವೀಣ್ ಪೌಲ್ ಹಿನ್ನೆಲೆ ಸಂಗೀತದಲ್ಲಿ ಸಿನಿಮಾ ಮೂಡಿ ಬಂದಿದ್ದು, ಸಂಜಿತ್ ಹೆಗ್ಡೆ, ಹನುಮಂತ ಹಾಡುಗಳಿಗೆ ದನಿಯಾಗಿದ್ದಾರೆ.
ಶರತ್ ಜಿ ಕುಮಾರ್ ಛಾಯಾಗ್ರಹಣ, ವೆಂಕಟೇಶ್ ಸಂಕಲನ, ಮಾಸ್ ಮಾದ, ವಿಕ್ರಮ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಮೋಕ್ಷ ಸಿನಿಮಾಸ್ ಬ್ಯಾನರ್ ನಿರ್ಮಾಣದಲ್ಲಿ ಮೂಡಿ ಬಂದ ಈ ಚಿತ್ರಕ್ಕೆ ಪುನೀತ್ ಎಂ.ಎನ್ ನಿರ್ಮಾಪಕರು.