ಧಾರವಾಡ: ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳು ಮಾಡಿದ್ದೇ ದರ್ಬಾರ್ ಆಗಿದೆ. ಇಂಥದ್ದೇ ಒಂದು ಕಾಂಡ ಧಾರವಾಡದ ಕರ್ನಾಟಕ ವಿವಿಯಲ್ಲಿ ನಡೆದಿದೆ. ಈ ವಿವಿಯ ಕುಲಪತಿಗಳು ಇಲ್ಲಿಗೆ ಬಂದ ನಂತರ ಬೇಕಾಬಿಟ್ಟಿ ಬಿಲ್ ಹಚ್ಚಿ ಹಣ ಹೊಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ವಿರುದ್ಧ ದುಂದುವೆಚ್ಚ ಆರೋಪ ಕೇಳಿಬಂದಿದೆ. ಆರ್ಟಿಐ ಮಾಹಿತಿ ಪ್ರಕಾರ ಕುಲಪತಿ ಕೆ.ಬಿ ಗುಡಸಿ ಅಧಿಕಾರಕ್ಕೆ ಬಂದು ವರ್ಷವಾಗ್ತಿದೆ. ಅಷ್ಟರಲ್ಲೇ ಕರ್ನಾಟಕ ವಿವಿಯ ಬಂಗಲೆಗೂ ಶಿಫ್ಟ್ ಆಗಿದ್ದಾರೆ. ಆದರೆ ಅಲ್ಲಿಗೆ ಬಂದ್ಮೇಲೆ ಅವರು ಆ ಮನೆಗೆ 11 ಲಕ್ಷ ಖರ್ಚು ಮಾಡಿದ್ದಾರೆ. ಇದನು ಟೆಂಡರ್ ಕರೆಯದೇ ತುಂಡು ಗುತ್ತಿಗೆ ನೀಡಿದ್ದಾರೆ. ಕಾಮಗಾರಿಯಲ್ಲಿ ಕಿಟಕಿಯ ಕರ್ಟನ್, ಹೊಸ ಕಾಟು, ತಲೆದಿಂಬು ಸೇರಿ ಬರೋಬ್ಬರಿ 33 ಲಕ್ಷ ಖರ್ಚು ಮಾಡಿರುವುದಾಗಿ ಮಾಹಿತಿ ಸಿಕ್ಕಿದೆ. ಅದು ಹೇಗೆ ಎಂದು ಗೊತ್ತಾಗಬೇಕು. ಈ ಹಣದಲ್ಲಿ ಹೊಸ ಬಂಗಲೆಯನ್ನೇ ಕಟ್ಟಬಹುದಿತ್ತು ಎಂದು ಆರೋಪಿಸಲಾಗ್ತಿದೆ. ಇದನ್ನೂ ಓದಿ: ಕಲಬುರ್ಗಿ ಹತ್ಯೆ ಪ್ರಕರಣ – ಸಾಕ್ಷಿ ನುಡಿದ ಮಗಳು, ಪತ್ನಿ
ಈ ವಿಚಾರ ರಾಜ್ಯಪಾಲರ ಗಮನಕ್ಕೂ ತರಲಾಗಿದೆ. ಇನ್ನು ಈ ಹಿಂದೆ ಇದ್ದ ಕುಲಪತಿ ವಾಲಿಕಾರ್ 7 ಲಕ್ಷ ರೂಪಾಯಿನಷ್ಟು ಖರ್ಚು ಮಾಡಿದ್ದಾರೆ. ತದನಂತರ ಪ್ರಮೋದ್ ಗಾಯ್ ಇದ್ದಾಗಲೂ 9 ಲಕ್ಷ ಖರ್ಚು ಮಾಡಿದ್ದಾರೆ. ಈ ಲೆಕ್ಕದಂತೆಯೇ ಹೋದರೆ ಈ ಬಂಗಲೆಗೆ 10 ವರ್ಷಗಳಲ್ಲಿ 60 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಲಾಗಿದೆ. ಆದರೆ ಸರ್ಕಾರದ ಉನ್ನತ ಶಿಕ್ಷಣ ಸಚಿವರಿಗೆ ಈ ಬಗ್ಗೆ ಕೇಳಿದರೆ, ನನ್ನ ವ್ಯಾಪ್ತಿಗೆ ಬರಲ್ಲ ಅಂತಾರೆ. 10 ಕೋಟಿ ಟೆಂಡರ್ ಮಾತ್ರ ಇವರಿಗೆ ಸಂಬಂಧ ಅಂತೆ.
ಒಟ್ಟಿನಲ್ಲಿ ಇಲ್ಲಿ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಅಂತಾಗಿದೆ. ಸರ್ಕಾರಕ್ಕೆ ಜನರ ದುಡ್ಡಿನ ಮೇಲೆ ಅಷ್ಟೇ ಕಾಳಜಿ ಇದ್ದರೆ, ಇಂಥವರಿಗೆ ಮೂಗುದಾರ ಹಾಕಬೇಕು. ಇಲ್ಲದಿದ್ದರೆ ಜನರ ದುಡ್ಡು ನೀರಿನಲ್ಲಿ ಹೋಮದಂತೆ ಖರ್ಚಾಗುವುದರಲ್ಲಿ ಅನುಮಾನ ಇಲ್ಲ.