ಬೆಂಗಳೂರು: ರಾಜರಾಜೇಶ್ವರಿ ಚುನಾವಣೆಯ ಫಲಿತಾಂಶ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಕಾರಣ ಕ್ಷೇತ್ರದ ಜನರು ಜಾತಿ, ಧರ್ಮ ನೋಡದೇ ಅಭಿವೃದ್ಧಿಗೆ ಮತ ನೀಡಿದ್ದಾರೆ. ಒಳ್ಳೆಯ ಕೆಲಸ ಮಾಡಿದ್ರೆ ಯಾವ ವ್ಯಕ್ತಿಯೂ ಸಾರ್ವಜನಿಕ ಜೀವನದಲ್ಲಿ ಯಶಸ್ವಿಯಾಗಹುಬುದು ಎಂಬುದಕ್ಕೆ ಇಂದು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ಉದಾಹರಣೆಯಾಗಿದೆ ಎಂದು ಕಾಂಗ್ರೆಸ್ ಶಾಸಕ ಮುನಿರತ್ನ ಹೇಳಿದ್ದಾರೆ.
ಅಭಿವೃದ್ಧಿ ಕೆಲಸಗಳನ್ನು ಗುರುತಿಸಿ ಇವತ್ತು ಮತದಾರರು ನನ್ನ ಕೈ ಹಿಡಿದಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪನವರು ಹಣ ಬಲದಿಂದ ಗೆದ್ದಿದ್ದಾರೆ ಅಂತಾ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರೋದನ್ನು ನೋಡಿದ್ದೇನೆ. ಜನಾದೇಶವನ್ನು ಹಣದೊಂದಿಗೆ ಹೋಲಿಸಿ ಮತದಾರರನ್ನು ಅವಮಾನಿಸಬೇಡಿ. ತಾವು ಹಿರಿಯರು ಎಚ್ಚರಿಕೆಯಿಂದ ಮಾತನಾಡಬೇಕು. ಒಂದು ಬಾರಿ ನನ್ನ ಕ್ಷೇತ್ರಕ್ಕೆ ಬಂದು ನೋಡಿ ಮುನಿರತ್ನ ಹೇಗೆ ಗೆಲುವು ಕಂಡಿದ್ದು ನಿಮಗೆ ಗೊತ್ತಾಗುತ್ತದೆ ಅಂತಾ ವಾಗ್ದಾಳಿ ನಡೆಸಿದ್ರು.
ಚುನಾವಣೆ ಮುಂದೂಡಿದ್ದು ನಮಗೆ ಒಳ್ಳೆದಾಯಿತು. ನಕಲಿ ಮತದಾರರನ್ನು ತಡೆದಿದ್ದರಿಂದ ಲಾಭವಾಗಿದೆ. ಆ ಮತಗಳನ್ನು ತಡೆಯದೇ ಇದ್ದಿದ್ರೆ ಇಂದು ನಮಗೆ ತೊಂದರೆ ಆಗುತ್ತಿತ್ತು. ಕ್ಷೇತ್ರದ ಜನರಿಗಾಗಿ ಮುಂದಿನ ದಿನಗಳಲ್ಲಿಯೂ ನನ್ನ ಅಭಿವೃದ್ಧಿ ಕೆಲಸಗಳು ಮುಂದುವರೆಯಲಿವೆ ಅಂತಾ ಹೇಳಿದ್ರು.
25,492 ಸಾವಿರ ಮತಗಳ ಅಂತರದಿಂದ ಮುನಿರತ್ನ ಗೆಲ್ಲುವ ಮೂಲಕ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಮುನಿರತ್ನ ಅವರಿಗೆ 1,08,064 ಮತಗಳು ಬಿದ್ದರೆ ಬಿಜೆಪಿ ಮುನಿರಾಜು ಗೌಡ ಅವರಿಗೆ 82,572 ಮತಗಳು ಬಿದ್ದಿವೆ. ಜೆಡಿಎಸ್ನ ರಾಮಚಂದ್ರ ಅವರಿಗೆ 60,360 ಮತಗಳು ಬಿದ್ದಿವೆ.