ಬೆಂಗಳೂರು: ಬಿಜೆಪಿ ನಾಯಕರ ದಲಿತರ ಮನೆ ಭೇಟಿ ಹಿಂದೆ ಮೋದಿ-ಷಾ ಮಾಸ್ಟರ್ ಪ್ಲಾನ್ ಇದ್ಯಾ?. ಉತ್ತರಪ್ರದೇಶದದಲ್ಲಿ ವರ್ಕೌಟ್ ಆದ ಜಾತಿ ಲೆಕ್ಕಚಾರ ಕರ್ನಾಟಕದಲ್ಲಿ ವರ್ಕೌಟ್ ಆಗುತ್ತಾ?.. ದಲಿತರ ಮನೆಯಲ್ಲಿ ಯಡಿಯೂರಪ್ಪ ಊಟ ಮಾಡಿದ್ರೆ ಸಿದ್ದರಾಮಯ್ಯರಿಗೇಕೆ ಹೊಟ್ಟೆ ಕಿಚ್ಚು ಗೊತ್ತಾಗ್ತಿಲ್ಲ. ಚುನಾವಣೆಗೂ ಮುನ್ನ ದಲಿತರ ಜಪ ಮಾಡ್ತಿರೋದ್ರ ಹಿಂದಿರೋ ರಣನೀತಿ ಏನು..? ಇದೆಲ್ಲದರ ಇನ್ಸೈಡ್ ಸ್ಟೋರಿ ಇಲ್ಲಿದೆ ನೋಡಿ.
ಹೌದು. ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಒಂದೇ ಒಂದು ವರ್ಷ ಬಾಕಿ ಉಳಿದಿದೆ. ಮತದಾರನ ಮನಗೆಲ್ಲಲು ರಾಜಕೀಯ ಪಕ್ಷಗಳು ಸರ್ಕಸ್ ನಡೆಸುತ್ತಿದೆ. ಕಾಂಗ್ರೆಸ್, ಜೆಡಿಎಸ್ಗೆ ಹೋಲಿಸಿದರೆ ಬಿಜೆಪಿ ಒಂದು ಹೆಜ್ಜೆ ಮುಂದಿದೆ. ತೆರೆಯ ಮರೆಯಲ್ಲೇ ಬಿಜೆಪಿ ರಾಜಕೀಯ ಸಮೀಕ್ಷೆ ಕೂಡ ನಡೆಸುತ್ತಿದೆ. ಅದರಲ್ಲೂ ರಾಜ್ಯ ಸರ್ಕಾರ ನಡೆಸಿದ ಜಾತಿ ಸಮೀಕ್ಷೆ ಬಹಿರಂಗವಾಗುವ ಮುನ್ನವೇ ದಲಿತರ ಮನೆಗಳಿಗೆ ಎಡತಾಕುತ್ತಿದೆ.
ಹಾಗೇ ನೋಡಿದ್ರೆ ರಾಜ್ಯದಲ್ಲಿ ಅನ್ಯ ಜಾತಿಗಳಿಗೆ ಹೋಲಿಸಿದರೆ ಪರಿಶಿಷ್ಟ ಜಾತಿಯವ್ರ ಪ್ರಾಬಲ್ಯ ಹೆಚ್ಚಾಗೇ ಇದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿಯವ್ರ ಜನಸಂಖ್ಯೆ 1.08 ಕೋಟಿ ಇದ್ದಾರೆ. ಪರಿಶಿಷ್ಟ ಪಂಗಡದವ್ರ ಸಂಖ್ಯೆ 40.45 ಲಕ್ಷವಿದೆ. ಈ ಹಿಂದೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮತಗಳು ಕೇವಲ ಕಾಂಗ್ರೆಸ್ಗೆ ಮಾತ್ರ ಸೀಮಿತ ಅನ್ನೋದು ಸಂಪ್ರದಾಯವಾಗಿತ್ತು. ಆದ್ರೆ ಈಗ ಪರಿಸ್ಥಿತಿ ಹಿಂದಿನಂತಿಲ್ಲ. ಬಿಜೆಪಿ ಕೂಡ ದಲಿತರ ಮನವೊಲಿಕೆಯಲ್ಲಿ ತೊಡಗಿದೆ. ದಲಿತರ ಮನವೊಲಿಕೆಯ ಭಾಗವಾಗಿಯೇ ತುಮಕೂರು ಹಾಗೂ ಚಿತ್ರದುರ್ಗದಲ್ಲಿ ದಲಿತರ ಮನೆಯಲ್ಲಿ ಬಿಎಸ್ವೈ ಅಂಡ್ ಟೀಂ ಉಪಹಾರ ಸೇವಿಸಿ, ನಾವೂ ದಲಿತರ ಜೊತೆಯಲ್ಲಿದ್ದೀವಿ ಅಂತ ಸಮಾನತೆ ಸಂದೇಶ ರವಾನಿಸಿದ್ದಾರೆ.
ರಾಜ್ಯದಲ್ಲೂ ಯುಪಿ ಮಾದರಿ ರಾಜತಂತ್ರ ಫಲಿಸುತ್ತಾ..?
ಇತ್ತೀಚೆಗಷ್ಟೇ ಅಂತ್ಯಗೊಂಡ ಉತ್ತರಪ್ರದೇಶ ವಿಧಾನಸಭಾ ಚುಣಾವಣೆಯಲ್ಲಿ ಜಯಭೇರಿ ಬಾರಿಸಿರುವ ಬಿಜೆಪಿ ಈಗ ಅದೇ ಬ್ರಹ್ಮಾಸ್ತ್ರವನ್ನು ಕರ್ನಾಟಕದಲ್ಲೂ ಪ್ರಯೋಗಿಸಲು ಹೊರಟಿದೆ. ಉತ್ತರಪ್ರದೇಶದಲ್ಲಿ ಮೇಲ್ವರ್ಗದ ಜನಸಂಖ್ಯೆ ಶೇ.22 ರಷ್ಟಿದ್ದರೂ ಕೂಡ ಹಿಂದುಳಿದ ವರ್ಗ ಜನಸಂಖ್ಯೆ ಶೇ.18 ಹಾಗೂ ಪರಿಶಿಷ್ಟರ ಜನಸಂಖ್ಯೆ ಶೇ.20 ರಷ್ಟು ಇತ್ತು. ಟಿಕೆಟ್ ಹಂಚಿಕೆ ಹಾಗೂ ಪ್ರಚಾರದ ವೇಳೆ, ಇವೆರಡೂ ವರ್ಗಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡ ಪರಿಣಾಮವಾಗಿ ಬಿಜೆಪಿ ಇತಿಹಾಸದಲ್ಲೇ ಮೊದಲ ಬಾರಿಗೆ ಬಹುಮತದೊಂದಿಗೆ ಅಧಿಕಾರದ ಗದ್ದುಗೆಗೇರಿತು.
ಈಗ ಅದೇ ತಂತ್ರವನ್ನು ಕರ್ನಾಟಕದಲ್ಲೂ ಅನುಸರಿಸಲಾಗ್ತಿದ್ದು, ದಲಿತರ ಮನವೊಲಿಕೆಯಲ್ಲಿ ಬಿಜೆಪಿ ನಾಯಕರು ತೊಡಗಿದ್ದಾರೆ. ಲಿಂಗಾಯತರು, ಒಕ್ಕಲಿಗರಂತೆ ದಲಿತರನ್ನೂ ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಮೋದಿ ಅಮಿತ್ ಶಾ ಸೂಚನೆ ಮೇರೆಗೆ, ಬಿಎಸ್ವೈ ಅಂಡ್ ಟೀಂ ದಲಿತರ ಮನೆಗಳಿಗೆ ಎಡತಾಕುತ್ತಿದೆ ಎಂದು ಹೇಳಲಾಗ್ತಿದೆ.
ಇದ್ರ ನಡುವೆ ಬಿಜೆಪಿ ಮಾಜಿ ಡಿಸಿಎಂ ಆರ್. ಅಶೋಕ್ ನಿವಾಸಕ್ಕೆ ಮಾದಾರ ಚೆನ್ನಯ್ಯ ಸ್ವಾಮೀಜಿ ಭೇಟಿ ನೀಡಿದ್ದು ಈ ಚರ್ಚೆಗೆ ಮತ್ತಷ್ಟು ಇಂಬು ನೀಡಿದೆ. ಬಿಜೆಪಿಯ ಈ ರಣನೀತಿ ಕಾಂಗ್ರೆಸ್ಗೆ ಅಚ್ಚರಿ ಮೂಡಿಸಿದೆ. ಎಲ್ಲೂ ಕೂಡ ದಲಿತರ ಮತಗಳು ಕೈತಪ್ಪದಂತೆ ಎಚ್ಚರಿಕೆ ವಹಿಸಲು ಕಾಂಗ್ರೆಸ್ ಕೂಡ ಎಚ್ಚರಿಕೆ ವಹಿಸಲು ತಯಾರಾಗ್ತಿದೆ.
ಮುಂಬರುವ ಚುನಾವಣೆಯಲ್ಲಿ ದಲಿತರ ಮತಗಳು ನಿರ್ಣಾಯಕವಾಗಿರುವುದರಿಂದ ಕಾಂಗ್ರೆಸ್ ಕೂಡ ರಣತಂತ್ರಕ್ಕೆ ರೆಡಿಯಾಗ್ತಿದೆ. ಇದೆಲ್ಲಾ ಚುನಾವಣಾ ರಣತಂತ್ರ ಮಾತ್ರ. ಆದರೆ, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರುಗಳು ದಲಿತರ ಮನೆಯಲ್ಲಿ ಊಟ ಮಾಡಿ, ವಾಸ್ತವ್ಯ ಹೂಡಿದ ಮಾತ್ರಕ್ಕೆ ದಲಿತರು ಉದ್ಧಾರಾ ಆಗುತ್ತಾರಾ? ರಾಜಕೀಯ ಪಕ್ಷಗಳ ಈ ತಂತ್ರ ವರ್ಕೌಟ್ ಆಗುತ್ತಾ ಎನ್ನುವ ಪ್ರಶ್ನೆಗಳಿಗೆ 2019ರ ವಿಧಾನಸಭಾ ಚುನಾವಣೆ ಉತ್ತರ ನೀಡಲಿದೆ.