ಮಡಿಕೇರಿ: ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಮಳೆ ಸುರಿದು ಹಲವು ದುರಂತಗಳಿಗೆ ಸಾಕ್ಷಿಯಾದ ಮಡಿಕೇರಿಯಲ್ಲಿ ಸದ್ಯ ಬಿಸಿಲಿನ ವಾತಾವರಣ ಕಂಡುಬರುತ್ತಿದೆ.
ಮೇ ತಿಂಗಳ ಕೊನೆಯ ವಾರದಲ್ಲಿ ಆರಂಭವಾದ ಮಳೆ ಆಗಸ್ಟ್ 31ರ ತನಕವೂ ಮಡಿಕೇರಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸುರಿದಿದೆ. ಇದರಿಂದಾಗಿ ಪ್ರವಾಹ ಮಾತ್ರವಲ್ಲದೆ ಗುಡ್ಡ ಕುಸಿದು ಭಾರೀ ಪ್ರಮಾಣದಲ್ಲಿ ಅನಾಹುತ ಸಂಭವಿಸಿತ್ತು. ಆದರೆ ಸದ್ಯ ಶನಿವಾರ ಬೆಳಗ್ಗೆಯಿಂದ ಬಿಸಿಲು ಮೂಡಿದ್ದು, ಇನ್ನು ಮುಂದೆ ಬಿಸಿಲು ಬರುತ್ತೆ ಅಂತ ಸ್ಥಳೀಯರು ಮಾತನಾಡಿಕೊಂಡಿದ್ದಾರೆ.
ನಿರಂತರ ಮಳೆಯಿಂದಾಗಿ ಮನೆಯಲ್ಲಿ, ಕಟ್ಟಡಗಳಲ್ಲಿ ಫಂಗಸ್ ಹಿಡಿದಿದ್ದ ವಸ್ತುಗಳನ್ನು ಬಿಸಿಲಿನಲ್ಲಿ ಒಣಗಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂದಿತ್ತು. ಅಲ್ಲದೇ ಮಡಿಕೇರಿ-ಮಂಗಳೂರು, ಮಡಿಕೇರಿ-ಹಟ್ಟಿಹೊಳೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಮಣ್ಣು ತೆರವು ಕಾರ್ಯ ಚುರುಕುಗೊಂಡಿದೆ.
ಸದ್ಯ ಮಡಿಕೇರಿಯಿಂದ ಮದೆನಾಡು ತನಕ ನಡೆದುಕೊಂಡು ಹೋಗುವ ಸ್ಥಿತಿಗೆ ರಸ್ತೆ ತೆರವು ಕಾರ್ಯ ಮಾಡಿದ್ದು. ಲಘು ವಾಹನ ಸಂಚಾರಕ್ಕೆ ಇನ್ನೂ 15 ರಿಂದ 1 ತಿಂಗಳು ಬೇಕಾಗಬಹುದು ಎನ್ನಲಾಗಿದೆ. ಕಾಲೂರು, ದೇವಸ್ತೂರು, ಮಕ್ಕಂದೂರು ಮುಂತಾದ ಭಾಗಗಳಲ್ಲಿಯೂ ರಸ್ತೆಯ ಮೇಲೆ ಕುಸಿದಿರುವ ಗುಡ್ಡ, ಮಣ್ಣು ತೆರವು ಕಾರ್ಯ ಭರದಿಂದ ಸಾಗಿದೆ.