ದಾವಣಗೆರೆ: ಮಣ್ಣು, ಅಕ್ಕಿ, ಮಕ್ಕಳಿಗೆ ಕೊಡುವ ಹಾಲು ಎಲ್ಲದ್ರಲ್ಲೂ ಲಂಚ ತಿಂದಾಗಿದೆ. ಈಗ ಶೌಚಾಲಯದ ಹೆಸರಿನಲ್ಲಿ ಜನಪ್ರತಿನಿಧಿಗಳು ಲಂಚ ತಿಂದಿದ್ದಾರೆ. ಇದಕ್ಕೆ ಉದಾಹರಣೆ ದಾವಣಗೆರೆ.
ಕಳೆದ ಆರು ತಿಂಗಳಿನಿಂದ ದಾವಣಗೆರೆ ಜಿಲ್ಲೆಯ ನಾಲ್ಕು ತಾಲೂಕುಗಳನ್ನು ಬಯಲು ಶೌಚಾಲಯ ಮುಕ್ತ ಮಾಡಲು ಸಿಇಓ ಅಶ್ವಥಿ ಅವರು ಪಣ ತೊಟ್ಟಿದ್ದರು. ಅದರಂತೆ ಪ್ರತಿಯೊಂದು ಗ್ರಾಮ ಪಂಚಾಯ್ತಿಯ ಪಿಡಿಓಗಳಿಗೆ ಅಕ್ಟೋಬರ್ 2ರ ಒಳಗೆ ಶೌಚಾಲಯ ನಿರ್ಮಿಸುವಂತೆ ಆದೇಶ ನೀಡಿದ್ದರು. ಆದರೆ ಶೌಚಾಲಯ ನಿರ್ಮಾಣಕ್ಕಾಗಿ ಜಿಲ್ಲಾ ಪಂಚಾಯ್ತಿಯಿಂದ ಬರುವ ಹಣವನ್ನು ಹೊನ್ನೂರು ಗ್ರಾಮ ಪಂಚಾಯ್ತಿ ಪಿಡಿಓ ಹಾಗೂ ಅಧ್ಯಕ್ಷ ಚಂದ್ರಶೇಖರ್ ದುರ್ಬಳಕೆ ಮಾಡಿಕೊಂಡಿದ್ದಾರೆ. ಫಲಾನುಭವಿಗಳ ಬ್ಯಾಂಕ್ ಪಾಸ್ಬುಕ್ ತಮ್ಮ ಬಳಿಯೇ ಇಟ್ಟುಕೊಂಡು ಅವರಿಗೆ ಹಣವನ್ನು ನೀಡದೆ ಜನರ ಹೆಸರಲ್ಲಿ ಲೂಟಿ ಮಾಡಿದ್ದಾರೆ ಎಂದು ಮೋಸಕ್ಕೊಳಗಾದ ಸ್ಥಳೀಯ ರಂಗನಾಥ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ವಡ್ಡಿನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಹಾಗೂ ಸಂಸದೆ ಶಾರದಮ್ಮ 20 ಇಟ್ಟಿಗೆ, ಅರ್ಧ ಚೀಲ ಸಿಮೆಂಟ್ನಲ್ಲಿ ಅರ್ಧಬಂರ್ಧ ಶೌಚಾಲಯವನ್ನು ಕಟ್ಟಿಸಿ ಫಲಾನುಭವಿಗಳ ಪಾಸ್ ಬುಕ್ ಪಡೆದು ಹಣವನ್ನು ತಿಂದು ತೇಗಿದ್ದಲ್ಲದೆ ಉಳಿದ ಅರ್ಧ ಭಾಗ ಯಾವಾಗ ಕಟ್ಟಿಸ್ತೀರಾ ಅಂತ ಕೇಳಿದ್ರೆ, ನೀವೆ ಕಟ್ಟಿಸಿಕೊಳ್ಳಿ ಅಂತಿದ್ದಾರೆ ಎಂದು ಮೋಸಕ್ಕೊಳಗಾದ ಸ್ಥಳೀಯ ಸಂದೀಪ್ ಅವರು ತಿಳಿಸಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಜಿಲ್ಲಾ ಪಂಚಾಯತ್ ಸಿಇಓ ಗಮನಕ್ಕೆ ತಂದಿದ್ದಾರೆ. ಆದರೂ ಅದರಿಂದ ನಾಕಾಣಿ ಪ್ರಯೋಜನ ಆಗಿಲ್ಲ.
ಪಾಯವೇ ಹಾಕದೇ ಕಟ್ಟಿರೋ ಶೌಚಾಲಯಗಳನ್ನು ಉಪಯೋಗಿಸೋದು ಹೇಗೆ ಅನ್ನೋದು ಜನರ ಚಿಂತೆಯಾಗಿದೆ.