ಕೋಲ್ಕತ್ತಾ: ಇಡೀ ದೇಶದಲ್ಲಿಯೇ ಪಶ್ಚಿಮ ಬಂಗಾಳವು ಮಹಿಳೆಯರಿಗೆ ಸುರಕ್ಷಿತ ರಾಜ್ಯವಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ತಿರುಗೇಟು ನೀಡಿದರು.
ಇಂದು ಕೋಲ್ಕತ್ತಾದಲ್ಲಿ ನಡೆದ ಟಿಎಂಸಿ ಮಹಿಳಾ ವಿಂಗ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯು ಸಂದೇಶಖಾಲಿ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ಆದರೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಹಿಳೆಯರಿಗೆ ಚಿತ್ರಹಿಂಸೆ ನೀಡಿದಾಗ ಅವರು ಮೌನ ವಹಿಸುತ್ತಾರೆ ಎಂದು ಕಿಡಿಕಾರಿದರು.
ಪಶ್ಚಿಮ ಬಂಗಾಳವು ಮಹಿಳೆಯರಿಗೆ ದೇಶದಲ್ಲೇ ಅತ್ಯಂತ ಸುರಕ್ಷಿತ ರಾಜ್ಯವಾಗಿದೆ. ಇಲ್ಲಿ ಮಹಿಳೆಯರು ತಮ್ಮ ಸಮಸ್ಯೆಗಳ ಬಗ್ಗೆ ದನಿ ಎತ್ತುತ್ತಾರೆ. ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದಾಗ ಮತ್ತು ಈಶಾನ್ಯ ರಾಜ್ಯದಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಪ್ರಧಾನಿ ಮೌನವಾಗಿದ್ದರು ಎಂದು ಆರೋಪಿಸಿದರು. ಇದನ್ನೂ ಓದಿ: ಎಲ್ಲಿಂದ ಸ್ಪರ್ಧಿಸಿದ್ರೂ ನಿಮಗೆ ಸೋಲು ಖಚಿತ- ಮಾಜಿ ಜಡ್ಜ್ಗೆ ದೀದಿ ಚಾಲೆಂಜ್
ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ನಡೆಸಿದಾಗ ನೀವು ಎಲ್ಲಿದ್ದಿರಿ? ನೀವು ಮಹಿಳೆಯರ ಗೌರವದ ಬಗ್ಗೆ ಮಾತನಾಡುತ್ತೀರಿ, ಆದರೆ ನಿಮ್ಮದೇ ಪಕ್ಷದ ಸಂಸದರು ಬಾಕ್ಸರ್ಗೆ ಕಿರುಕುಳ ನೀಡಿದರು ಕೂಡ ಅವರನ್ನು ಸಂಘದ ಅಧ್ಯಕ್ಷರನ್ನಾಗಿ ಮಾಡುತ್ತೀರಾ? ನಾಚಿಕೆ ಆಗಲ್ವಾ ಎಂದು ಬಿಜೆಪಿ ವಿರುದ್ಧ ದೀದಿ ಕೆಂಡಾಮಂಡಲರಾದರು. ಇದನ್ನೂ ಓದಿ: ಮತ್ತೆ ಸಿಬಿಐ ವಶಕ್ಕೆ ಶೇಖ್ ಶಹಜಹಾನ್ – ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಮುಖಭಂಗ!
ಟಿಎಂಸಿ ತಾಯಂದಿರು ಮತ್ತು ಸಹೋದರಿಯರಿಗೆ ಚಿತ್ರಹಿಂಸೆ ನೀಡುವ ಮೂಲಕ ಘೋರ ಪಾಪ ಮಾಡಿದೆ. ಸಂದೇಶಖಾಲಿಯಲ್ಲಿ ಏನಾಯಿತು ಎಂದು ನೋಡಿದ ನಂತರ ಯಾರಿಗಾದರೂ ನಾಚಿಕೆಯಿಂದ ತಲೆ ತಗ್ಗಿಸುತ್ತದೆ. ಆದರೆ ನಿಮ್ಮ ನೋವಿನ ಬಗ್ಗೆ ಟಿಎಂಸಿ ತಲೆಕೆಡಿಸಿಕೊಂಡಿಲ್ಲ. ತಪ್ಪಿತಸ್ಥರನ್ನು ರಕ್ಷಿಸಲು ಟಿಎಂಸಿ ಸರ್ಕಾರ ತನ್ನ ಸಂಪೂರ್ಣ ಶಕ್ತಿಯನ್ನು ಬಳಸುತ್ತಿದೆ. ಆದರೆ ರಾಜ್ಯ ಸರ್ಕಾರಕ್ಕೆ ಮೊದಲು ಹೈಕೋರ್ಟಿನಿಂದ ನಂತರ ಸುಪ್ರೀಂಕೋರ್ಟ್ ನಿಂದ ಶಾಕ್ ಸಿಕ್ಕಿತು ಎಂದು ಮೋದಿ ಹೇಳಿದ್ದರು. ಇದೇ ವಿಚಾರಕ್ಕೆ ಇಂದು ದೀದಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.