ಬೆಂಗಳೂರು: ಆಪರೇಷನ್ ಕಮಲದ ಭೀತಿ ಹಿನ್ನೆಲೆಯಲ್ಲಿ ಕೈ ನಾಯಕರು ಸಚಿವ ಡಿ.ಕೆ.ಶಿವಕುಮಾರ್ ಭದ್ರಕೋಟೆ ಎಂದು ಕರೆಸಿಕೊಳ್ಳುವ ಈಗಲಟನ್ ರೆಸಾರ್ಟ್ ಸೇರಿಕೊಂಡಿದ್ದಾರೆ. ಕೈ ನಾಯಕರ ಉಸ್ತುವಾರಿಯನ್ನು ಡಿಕೆ ಶಿವಕುಮಾರ್ ಅವರಿಗೆ ಹೈಕಮಾಂಡ್ ನೀಡಿದ್ದರಿಂದ ಸರ್ಕಾರ ಉಳಿಸುವ ಪ್ರಯತ್ನದಲ್ಲಿ ಟ್ರಬಲ್ ಶೂಟರ್ ಇದ್ದಾರೆ. ಇತ್ತ ಗುರುಗ್ರಾಮದ ರೆಸಾರ್ಟ್ ಸೇರಿದ್ದ ಕಮಲ ನಾಯಕರು ತಮ್ಮ ಸ್ವಕ್ಷೇತ್ರಗಳತ್ತ ತೆರಳಿದ್ದಾರೆ. ಇದೀಗ ಸರ್ಕಾರ ರಕ್ಷಣೆಗೆ ಮುಂದಾಗಿರುವ ಡಿಕೆ ಶಿವಕುಮಾರ್ ಅವರ ಮೇಲೆ ಮತ್ತೆ ಐಟಿ ದಾಳಿ ನಡೆಯುತ್ತಾ ಎಂಬ ಚರ್ಚೆಗಳು ಆರಂಭವಾಗಿವೆ.
ಈ ಹಿಂದೆ ಗುಜರಾತ್ ಕಾಂಗ್ರೆಸ್ ಶಾಸಕರನ್ನು ಡಿಕೆ ಶಿವಕುಮಾರ್ ಅವರ ಸಾರಥ್ಯದಲ್ಲಿ ಈಗಲ್ಟನ್ ರೆಸಾರ್ಟ್ ನಲ್ಲಿ ಇರಿಸಿದ್ದಾಗ, ಐಟಿ ದಾಳಿ ನಡೆದಿತ್ತು. ರೆಸಾರ್ಟ್ ಗೆ ಬಂದಿದ್ದ ಐಟಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರನ್ನು ಕರೆದುಕೊಂಡು ಹೋಗಿದ್ದರು. ಇದೊಂದು ರಾಜಕೀಯ ಷಡ್ಯಂತ್ರ ಎಂದು ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿತ್ತು. ಇದೀಗ ಕಾಂಗ್ರೆಸ್ ಶಾಸಕರ ರೆಸಾರ್ಟ್ ವಾಸ್ತವ್ಯದ ಬೆನ್ನಲ್ಲೇ ಮತ್ತೊಮ್ಮೆ ಐಟಿ ದಾಳಿ ನಡೆಯುತ್ತಾ ಎಂಬ ಸುದ್ದಿ ಹರಿದಾಡುತ್ತಿದೆ.
ಆಪರೇಷನ್ ಕಮಲಕ್ಕೆ ರಿವರ್ಸ್ ಆಪರೇಷನ್ ಮಾಡಲು ಕಾಂಗ್ರೆಸ್ ಮುಂದಾಗಿದ್ದು, ಬಿಜೆಪಿಯ 7 ಮಂದಿ ಶಾಸಕರನ್ನು ಸೆಳೆಯುವ ತಂತ್ರದಲ್ಲಿ ಇದೆಯಂತೆ. ಸಿಎಂ ಆಗಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡೆಸಿದ್ದ ಆಪರೇಷನ್ ಕಮಲ ಅವರಿಗೆ ಮುಳ್ಳಾಗಿದೆಯಂತೆ. ಮುಯ್ಯಿಗೆ ಮುಯ್ಯಿ ರಾಜಕೀಯದಲ್ಲಿ ‘104’ ಸಂಖ್ಯೆಯ ಬಿಜೆಪಿ ಎರಡಂಕಿಗೆ ಕುಸಿಯುತ್ತಾ ಎಂಬ ಹೊಸ ಚರ್ಚೆಯೊಂದು ರಾಜಕೀಯ ಅಂಗಳದಲ್ಲಿ ಶುರುವಾಗಿದೆ.
ಗುರುಗ್ರಾಮದಿಂದ ಬೆಂಗಳೂರಿಗೆ ಬಂದಿರುವ ಬಿಜೆಪಿ ಶಾಸಕರು ಸೋಮವಾರದಿಂದ ತಮ್ಮ ಕ್ಷೇತ್ರಗಳ ಬರ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಇಂದು ಮಧ್ಯಾಹ್ನದವರೆಗೂ ಕೈ ಶಾಸಕರು ರೆಸಾರ್ಟ್ ನಲ್ಲಿರಲಿದ್ದಾರೆ. ಮಧ್ಯಾಹ್ನ ಅಥವಾ ಸಾಯಂಕಾಲದ ವೇಳೆ ಕೈ ಶಾಸಕರು ಈಗಲ್ಟನ್ ರೆಸಾರ್ಟ್ ಖಾಲಿ ಮಾಡುವ ಸಾಧ್ಯತೆಗಳಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv