ದಾವಣಗೆರೆ: ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲುತೂರಾಟ ಪ್ರಕರಣದಿಂದಾಗಿ ದಾವಣಗೆರೆ ನಗರ ಬೂದಿ ಮುಚ್ಚಿದ ಕೆಂಡದಂತಾಗಿದೆ. ದಾವಣಗೆರೆ ನಗರಾದಾದ್ಯಂತ ಭಯದ ವಾತಾವರಣಮನೆ ಮಾಡಿದ್ದು,ಕಲ್ಲು ತೂರಾಟ ನಡೆದ ಇಮಾಂನಗರದಲ್ಲಿ ರಸ್ತೆಯುದ್ದಕ್ಕು ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಹಾವೇರಿ, ಶಿವಮೊಗ್ಗ ಜಿಲ್ಲೆಗಳ ರಿಸರ್ವ್ ಪೊಲೀಸ್ ತುಕಡಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದು, ರಾತ್ರಿಯಿಡೀ ನಿದ್ರೆಗಟ್ಟು ಗಸ್ತು ನಡೆಸಿವೆ. ಮತ್ತೆ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ದಾವಣಗೆರೆ ಎಸ್ಪಿ ಉಮಾ ಅವರು, ಪರಿಸ್ಥಿತಿ ಹತೋಟಿಗೆ ತರಲು ಮುಂದಾಗಿದ್ದಾರೆ.
ಈ ಘಟನೆಯಿಂದಾಗಿ ಬೆಳ್ಳಂಬೆಳಿಗ್ಗೆ ಜನಜಂಗುಲಿಯಿಂದ ತುಂಬಿರ್ತಿದ್ದ ಇಮಾಂ ನಗರದ ಜನನಿಬಿಡ ರಸ್ತೆಗಳು ಖಾಲಿಖಾಲಿಯಾಗಿದ್ದು ಬಿಕೊ ಎನ್ನುತ್ತಿವೆ. ಇಲ್ಲಿರುವ ಮಸೀದಿ ಬಳಿ 10ಕ್ಕೂ ಹೆಚ್ಚು ಪೊಲೀಸ್ ವಾಹನಗಳನ್ನು ನಿಲ್ಲಿಸಿ ಬಿಗಿ ಭದ್ರತೆ ಒದಗಿಸಲಾಗಿದೆ. ಹಾಗೆಯೇ ಬೆಳಗಿನ ಜಾವ 5 ಗಂಟೆಗೆ ವ್ಯಾಪಾರ ವಹಿವಾಟಿಗೆ ತೆರಳುತಿದ್ದ ಜನರು ತಡವಾಗಿ ಹೊರಬರ್ತಿದ್ದು, ನಾಗರೀಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ: ಚಿಕಿತ್ಸೆ ಪಡೆಯುತ್ತಿದ್ದ 27ರ ಒಡಿಶಾ ಗಾಯಕಿ ರುಕ್ಸಾನಾ ಬಾನೊ ಆಸ್ಪತ್ರೆಯಲ್ಲೇ ಸಾವು!
ಗಣೇಶ ವಿಸರ್ಜನೆ ವೇಳೆ ಕಲ್ಲುತೂರಾಟ ನಡೆಸಿದ್ದು, ಏಕಾಏಕಿ ಮೆರವಣೆಗೆಯಲ್ಲಿ ಕಿಡಿಗೇಡಿಗಳು ಕಲ್ಲುತೂರಾಟ ಮಾಡಿದ್ದಾರೆ. ನಗರದ ಅರಳಿಮರ ಸರ್ಕಲ್ ಬಳಿ ಮೊದಲು ಕಲ್ಲು ತೂರಾಟ ಶುರುವಾಗಿದ್ದು, ಬಳಿಕ ಕೆ.ಆರ್ ರಸ್ತೆ, ಹಂಸಬಾವಿ ಸರ್ಕಲ್, ಕೆಆರ್ ಮಾರ್ಕೇಟ್ ಸೇರಿದಂತೆ ಬಂಬೂ ಬಜಾರ್ ರಸ್ತೆ, ಮಟ್ಟಿಕಲ್ಲು ಏರಿಯಾದಲ್ಲಿಯೂ ಕಲ್ಲುತೂರಾಟ ನಡೆದಿದೆ. ತಕ್ಷಣವೇ ಘಟನಾಸ್ಥಳಕ್ಕೆ ಆಗಮಿಸಿದ ಪೊಲೀಸರು ಎಷ್ಟೇ ನಿಯಂತ್ರಿಸಿದರೂ ಕಿಡಿಗೇಡಿಗಳು ಕಲ್ಲು ತೂರಾಟ ಮುಂದುವರಿಸಿದ್ದು, ಪೊಲೀಸರ ಎದುರೇ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರು ಕೂಡ ಕಲ್ಲಿನಿಂದ ರಕ್ಷಿಸಿಕೊಳ್ಳಲು ಬೋರ್ಡ್ ಹಿಡಿದುಕೊಂಡು ತಿರುಗಾಡುವಂತಾಗಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸುತ್ತಲೇ ಕಿಡಿಗೇಡಿಗಳು ಅಲ್ಲಿಂದ ಪಾರಾಗಿ, ಏರಿಯಾಗಳಿಗೆ ನುಗ್ಗಿ, ಮಟ್ಟಿಕಲ್ಲು, ಅನೆಕೊಂಡಗಳಲ್ಲಿ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪುಂಡರ ಕಲ್ಲು ತೂರಾಟಕ್ಕೆ ಮಟ್ಟಿಕಲ್ಲು ನಿವಾಸಿಗಳು ದೊಣ್ಣೆ ಹಿಡಿದು ಓಡಿಸಿಕೊಂಡು ಹೋಗಿದ್ದಾರೆ.
60 ರಿಂದ 70 ಯುವಕರ ಗುಂಪು ಮಟ್ಟಿಕಲ್ಲು, ಅನೆಕೊಂಡದ ಹಲವು ಕಡೆಗಳಲ್ಲಿ ಕಲ್ಲು ತೂರಾಟ ನಡೆಸಿದ್ದು, ಜೊತೆಗೆ ಮನೆ ಮುಂಭಾಗದಲ್ಲಿ ಇರುವ ವಾಹನಗಳಿಗೆ ಹಾನಿ ಮಾಡಿದ್ದಾರೆ. ಅಲ್ಲದೆ ಏಕಾಎಕಿ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ ಹಿನ್ನಲೆ ಭಯದ ವಾತಾವರಣ ಸೃಷ್ಟಿಯಾಗಿದೆ. ಮನೆಗಳಿಗೂ ಕೂಡ ಬೀಗ ಹಾಕಿಕೊಂಡು ಹೋಗಿದ್ದಾರೆ. ಇದರಿಂದಾಗಿ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ʻಉಪೇಂದ್ರʼ ಸಿನಿಮಾ ವೀಕ್ಷಿಸಿದ ಉಪೇಂದ್ರ!
ಸದ್ಯ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದು, ಇದುವರೆಗೂ ಎರಡು ಕಡೆಯಿಂದ 20ಕ್ಕೂ ಹೆಚ್ಚು ಜನರನ್ನು ಸೆರೆಹಿಡಿದಿದ್ದಾರೆ. ಇಡೀ ರಾತ್ರಿ ಹಳೇ ದಾವಣಗೆರೆಯನ್ನು ಪೊಲೀಸರು ಗಸ್ತು ಹೊಡೆದಿದ್ದಾರೆ. ಬೆಳ್ಳಂಬೆಳಿಗ್ಗೆ ಜನಜಂಗುಳಿಯಿಂದ ತುಂಬಿರುತ್ತಿದ್ದ ರಸ್ತೆಗಳು ಖಾಲಿಯಾಗಿದ್ದು, ಬಿಕೊ ಎನ್ನುತ್ತಿವೆ. ಹಾಲು ಖರೀದಿಸಲು ಕೂಡ ಅರಳಿಮರ ಸರ್ಕಲ್ ಜನ ಮನೆಯಿಂದ ಹೊರಬರುತ್ತಿಲ್ಲ. ಒಟ್ಟಿನಲ್ಲಿ ದಾವಣಗೆರೆಯ ಇಮಾಂನಗರ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ.