ವಿಜಯಪುರ: ಯುವಕ-ಯುವತಿ ಪರಸ್ಪರ ಪ್ರೀತಿಸಿ ಓಡಿ ಹೋಗಿದ್ದ ಪ್ರೇಮಿಗಳು ಈಗ ಕಲಬುರಗಿಯ ಬುದ್ಧ ವಿಹಾರದಲ್ಲಿ ಮದುವೆಯಾಗಿ ನಗರಕ್ಕೆ ಮರಳಿದ್ದಾರೆ.
ಹೌದು, ಪ್ರೇಮಿಗಳಾದ ನಿಂಗಪ್ಪ ಮತ್ತು ಮಾಶಾಬಿ ಪರಸ್ಪರ ಪ್ರೀತಿಸಿ ಓಡಿ ಹೋದ ಹಿನ್ನೆಲೆಯಲ್ಲಿ ಯುವಕನ ತಂದೆ ಮತ್ತು ತಮ್ಮನನ್ನು ಗಿಡಕ್ಕೆ ಕಟ್ಟಿ ಯುವತಿಯ ತಂದೆ ಹಾಗೂ ಅಣ್ಣಂದಿರು ಥಳಿಸಿದ್ದರು. ಹೀಗಾಗಿ ಇದರ ವರದಿಯನ್ನು ಪಬ್ಲಿಕ್ ಟಿವಿಗೆ ಜೂನ್ 28 ರಂದು ಬಹಿರಂಗ ಪಡಿಸಿತ್ತು. ಆಗ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸ್ ಇಲಾಖೆ ಹಲ್ಲೆ ಮಾಡಿದ ಯುವತಿಯ ತಂದೆ ಸೇರಿದಂತೆ ಅಣ್ಣಂದಿರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದರು.
ಓಡಿ ಹೋಗಿದ್ದ ಪ್ರೇಮಿಗಳು ನಿಂಗಪ್ಪ ಮತ್ತು ಮಾಶಾಬಿ ಕಲಬುರಗಿಯ ಬುದ್ಧವಿಹಾರದಲ್ಲಿ ಮದುವೆಯಾಗಿ ಮರಳಿದ್ದಾರೆ. ಆದರೆ ಅವರಿಗೆ ಗ್ರಾಮಕ್ಕೆ ಬಂದರೆ ಥಳಿಸುವುದಾಗಿ ಮಾಶಾಬಿ ತಂದೆ ಮತ್ತು ಕುಟುಂಬಸ್ಥರು ಬೆದರಿಕೆ ಹಾಕಿದ್ದಾರಂತೆ. ಹೀಗಾಗಿ ಭಯಗೊಂಡು ಪ್ರೇಮಿಗಳು ಸೂಕ್ತ ರಕ್ಷಣೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊರೆ ಹೋಗಿದ್ದಾರೆ.
ಮನವಿಯ ಹಿನ್ನೆಲೆಯಲ್ಲಿ ಎಸ್ಪಿ ಕುಲದೀಪಕುಮಾರ್ ಜೈನ್ ಅವರು ಪ್ರೇಮಿಗಳಿಗೆ ಸೂಕ್ತ ಭದ್ರತೆ ನೀಡುವ ಭರವಸೆಯನ್ನು ನೀಡಿದ್ದಾರೆ.