ತುಮಕೂರು: ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಇಂದು ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ನಾಳೆ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ಆ ನಂತ್ರ ಬೇರೆ ಪಕ್ಷದೊಂದಿಗೆ ಹೋಲಿಕೆ ಮಾಡಿ ಅಂತ ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.
ಜಿಲ್ಲೆಯ ಕುಣಿಗಲ್ ತಾಲೂಕಿನ ಸಂತೆಪೇಟೆಯಲ್ಲಿ ಬಿಜೆಪಿ ಪ್ರಣಾಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ರೈತರ ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಮಾಡಲು ಬಿಜೆಪಿಗೆ ಈಗ ಎಚ್ಚರವಾಗಿದೆಯಾ? ಇಷ್ಟುದಿನ ಏನು ಮಾಡುತ್ತಿದ್ದರು? ಸಾಲ ಮನ್ನಾ ಮಾಡುವ ವಿಚಾರದಲ್ಲಿ ಕುಮಾರಸ್ವಾಮಿ ಹೋರಾಟ ಮಾಡ್ತಾ ಇದ್ದರು. ಅವರ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್ ಅಣಕ ಮಾಡುತಿದ್ರು ಅಂತ ಕಿಡಿಕಾರಿದ್ರು.
ಕುಮಾರಸ್ವಾಮಿಗೆ ಜನಬೆಂಬಲ ಸಿಗುತ್ತಿರುವುದನ್ನು ನೋಡಿ ಬಿಜೆಪಿಯವರು ರಾಷ್ಟ್ರಿಕೃತ ಬ್ಯಾಂಕ್ ಸಾಲ ಮನ್ನಾ ಮಾಡಲು ಹೊರಟಿದ್ದಾರೆ. ಉತ್ತಮ ಆಡಳಿತ ನೀಡಿದ್ರೆ ಉಚಿತವಾಗಿ ಮೊಬೈಲ್ ಕೊಡುವ ಅವಶ್ಯಕತೆ ಇಲ್ಲ. ಈ ಮೂಲಕ ಮಹಿಳೆಯರಿಗೆ ತಾತ್ಕಾಲಿಕ ಸಮಾಧಾನ ಮಾಡಲು ಹೊರಟಿದ್ದಾರೆ. ನಾಳೆ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ ಆಗಲಿದೆ. ಬಡವರ ಶ್ರಮಿಕರ ರೈತರ ಪರವಾಗಿ ಪ್ರಣಾಳಿಕೆ ಹೊರಬರಲಿದೆ ಅಂತ ಅವರು ಹೇಳಿದ್ರು.