ನವದೆಹಲಿ: ದೇಶಕ್ಕೆ ವಂಶವಾದ, ಜಾತಿವಾದ, ತುಷ್ಠೀಕರಣ ಎಂಬ ಮೂವರು ರಾಕ್ಷಸರಿಂದ ಮುಕ್ತಿ ಸಿಕ್ಕಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಚುನಾವಣೆಯ ಫಲಿತಾಂಶ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿ, ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಜನತೆಗೆ ನಮ್ಮನ್ನು ಗೆಲ್ಲಿಸಿದ್ದಕ್ಕೆ ಮೊದಲಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಗುಜರಾತ್ ಮತ್ತು ಹಿಮಾಚಲದಲ್ಲಿ ಕಾಂಗ್ರೆಸ್ನ ಪ್ರಮುಖ ನಾಯಕರೆಲ್ಲ ಹೀನಾಯವಾಗಿ ಸೋಲನ್ನು ಕಂಡಿರುವ ಉದಾಹರಣೆಗಳು ನಮ್ಮ ಮುಂದಿವೆ. ಎರಡು ರಾಜ್ಯಗಳ ಜನತೆ ಪ್ರಧಾನಿ ಮೋದಿ ಅವರ ಮೇಲೆ ಭರವಸೆಯನ್ನಿಟ್ಟು ಮತ ನೀಡಿದ್ದಾರೆ. ಜನರು ಬಿಜೆಪಿಗೆ ಮತ ನೀಡುವ ಮೂಲಕ ರಾಜ್ಯದಲ್ಲಿ ಜಾತಿವಾದವನ್ನು ದೂರ ಮಾಡಿದ್ದಾರೆ ಎಂದರು.
ಚುನಾವಣಾ ಪ್ರಚಾರದ ವೇಳೆಯಲ್ಲಿ ಬೇರೆ ಪಕ್ಷದ ನಾಯಕರುಗಳು ಅತ್ಯಂತ ಕೆಳಮಟ್ಟದ ಮತ್ತು ಅಸಂಸದೀಯ ಪದಗಳನ್ನು ಬಳಸುವ ಮೂಲಕ ಪ್ರಧಾನಿಯನ್ನು ಟೀಕಿಸಿದ್ದರು. ಆದರೆ ಮೋದಿಜಿ ವಿಕಾಸವಾದದ ಮಾರ್ಗದಲ್ಲಿ ಪ್ರಚಾರವನ್ನು ಕೈಗೊಂಡಿದ್ದರು. ಹಿಮಾಚಲದಲ್ಲಿ ಕಾಂಗ್ರೆಸ್ ಆಡಳಿತದಿಂದ ಬೇಸತ್ತು ಜನ ಈ ಬಾರಿ ಬಿಜೆಪಿಗೆ ಮತವನ್ನು ನೀಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚಸಿದ ಬಳಿಕ ನಡೆದ ಚುನಾವಣೆಗಳಲ್ಲಿ ನಾವು ಗೆಲುವು ಕಂಡಿದ್ದೇವೆ. ಮುಂದೆ ಮೀಜೊರಾಂ, ಕರ್ನಾಟಕ ಸೇರಿದಂತೆ ಉಳಿದ ರಾಜ್ಯಗಳಲ್ಲಿಯೂ ಜನತೆ ಬಿಜೆಪಿಗೆ ಮತ ನೀಡುವ ಮೂಲಕ ನಮ್ಮನ್ನು ಗೆಲ್ಲಿಸುತ್ತಾರೆ ಎಂಬ ನಂಬಿಕೆಯಿದೆ ಅಂತಾ ಅಂದರು.
ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದ ಬಳಿಕ ದೇಶದ ಅಭಿವೃದ್ಧಿ ಪಥದತ್ತ ಚಲಿಸುತ್ತಿದೆ. ದೇಶಕ್ಕೆ ಅಭಿವೃದ್ಧಿ ಸೂಚಂಕ್ಯಗಳನ್ನು ನೀಡುವ ವಿಶ್ವದ ಹಲವು ಸಂಸ್ಥೆಗಳನ್ನು ಭಾರತಕ್ಕೆ ಹೆಚ್ಚಿನ ಸೂಚಂಕ್ಯಗಳನ್ನು ನೀಡಿವೆ. ಕಳೆದ ಚುನಾವಣೆಗಿಂತ ಬಿಜೆಪಿ ಕೆಲವು ಕ್ಷೇತ್ರಗಳನ್ನು ಕಳೆದುಕೊಂಡಿದ್ದು, ಇದಕೆಲ್ಲಾ ಕಾಂಗ್ರೆಸ್ ನ ಜಾತಿವಾದದ ಸುಳ್ಳು ಪ್ರಚಾರವೇ ಕಾರಣವೇ ಹೊರತು ಅದು ಹಿನ್ನಡೆಯಲ್ಲ ಎಂದರು.
ಇನ್ನೂ ಪಕ್ಷದ ಗೆಲುವಿಗಾಗಿ ಹಗಲಿರುಳು ಎನ್ನದೇ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದ ಎಲ್ಲ ಕಾರ್ಯಕರ್ತರಿಗೂ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಮುಂಬರುವ ಚುನಾವಣೆಗಳು ಸಹ ಮೋದಿಜೀ ಅವರ ನೇತೃತ್ವದಲ್ಲಿ ನಡೆಯಲಿವೆ ಹಾಗೂ ಅವುಗಳಲ್ಲಿ ಬಿಜೆಪಿ ಜಯಭೇರಿ ಗಳಿಸಿಲಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.