ಜೈಪುರ: ಪತ್ನಿಯೊಂದಿಗೆ ಜಗಳವಾಡಿದ ವ್ಯಕ್ತಿಯೋರ್ವ ಪೊಲೀಸ್ ಠಾಣೆಗೆ ತೆರಳಿ ಇಲಿ ಪಾಷಾಣ ಸೇವಿಸಿರುವ ಘಟನೆ ಭರತ್ಪುರದಲ್ಲಿ ನಡೆದಿದೆ.
ಯೋಗೇಶ್ ಮತ್ತು ಅವರ ಹಿರಿಯ ಸಹೋದರ ಲೋಕೇಶ್ ಆಗ್ರಾ ಮೂಲದ ಇಬ್ಬರು ಸಹೋದರಿಯರನ್ನು ವಿವಾಹವಾಗಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರ ಹೆಂಡತಿಯರು ಜಗಳವಾಡಲು ಪ್ರಾರಂಭಿಸಿದರು.
ಗುರುವಾರ ರಾತ್ರಿ ಲೋಕೇಶ್ ಪತ್ನಿಯೊಂದಿಗೆ ಜಗಳವಾಡಿದ್ದರಿಂದ ಪೊಲೀಸರಿಗೆ ಕರೆ ಮಾಡಿ ಆತನನ್ನು ಪತ್ನಿ ಅರೆಸ್ಟ್ ಮಾಡಿಸಿದ್ದರು. ತನಗೂ ಇದೇ ಪರಿಸ್ಥಿತಿ ಬರಬಹುದೆಂಬ ಭಯದಿಂದ ಕೊತ್ವಾಲಿ ಪೊಲೀಸ್ ಠಾಣೆಗೆ ತೆರಳಿದ ಯೋಗೇಶ್ ತನ್ನ ಸಹೋದರನ ಪತ್ನಿಯಂತೆ ತನ್ನ ಪತ್ನಿ ಕೂಡ ಯಾವಾಗಲೂ ಜಗಳವಾಡುತ್ತಿರುತ್ತಾಳೆ ಎಂದು ಆರೋಪಿಸಿ ಇಲಿ ಪಾಷಾಣ ಸೇವಿಸಿದ್ದಾನೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಜೆಡಿಎಸ್ಗೆ ಬಿಗ್ ಶಾಕ್ ಕೊಟ್ಟ ಗುಬ್ಬಿ ಶ್ರೀನಿವಾಸ್
ಈ ಕುರಿತಂತೆ ಮಾತನಾಡಿದ ರೈಲ್ವೆ ಹೊರಠಾಣೆ ಪ್ರಭಾರಿ ರಾಕೇಶ್ ಮಾನ್ ಅವರು, ಪೊಲೀಸ್ ಠಾಣೆಗೆ ಬಂದ ಯೋಗೇಶ್, ತನ್ನ ಪತ್ನಿ ಮತ್ತು ಆಕೆಯ ಸಹೋದರಿ ಮಾನಸಿಕ ಕಿರುಕುಳ ಮತ್ತು ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಹೇಳುತ್ತಾ ಇಲಿ ಪಾಷಾಣ ಸೇವಿಸಿ ಪ್ರಜ್ಞೆ ತಪ್ಪಿ ಬಿದ್ದರು. ಈ ವೇಳೆ ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು. ಇಬ್ಬರೂ ಸಹೋದರಿಯರು ತವರಿನಿಂದ ಬಂದಾಗಿನಿಂದಲೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಇಬ್ಬರು ಸಹೋದರರು ಹಾಗೂ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಮೊದಲ ಅಡ್ಡಮತದಾನ
ಕ್ಷುಲ್ಲಕ ವಿಷಯಗಳಿಗೆ ಸಹೋದರಿಯರಿಬ್ಬರು ಪ್ರತಿನಿತ್ಯ ಜಗಳವಾಡುತ್ತಿದ್ದರು ಮತ್ತು ಪೊಲೀಸರಿಗೆ ಕರೆ ಮಾಡಿ ಬಂಧಿಸಿಸುವಂತೆ ಬೆದರಿಕೆಯೊಡ್ಡುತ್ತಿದ್ದರು. ಅಲ್ಲದೇ ಇಬ್ಬರು ಸೊಸೆಯಂದಿರು ಪರಪುರುಷರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಪತಿಯ ಆಸ್ತಿಯನ್ನು ಕಬಳಿಸಲು ಕುಟುಂಬಸ್ಥರೊಂದಿಗೆ ಸಂಚು ರೂಪಿಸುತ್ತಿದ್ದಾರೆ ಎಂದು ಅತ್ತೆ ಆರೋಪಿಸಿದ್ದಾರೆ.