ಮಂಗಳೂರು: ರೈತರ ಸಾಲಮನ್ನಾ ನಂತರವೂ ರಾಜ್ಯ ಸರ್ಕಾರದ ಚಾಲ್ತಿ ಖಾತೆಯಲ್ಲಿ 10 ಸಾವಿರ ಕೋಟಿ ರೂಪಾಯಿ ಇದ್ದು, ಯಾವುದೇ ಕೆಲಸಗಳನ್ನು ಮಾಡುವುದಕ್ಕೆ ಸರ್ಕಾರ ಬಳಿ ಹಣಕ್ಕೆ ಕೊರತೆ ಇಲ್ಲವೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಕರ್ತರ ಸಂಘದ ಬ್ರ್ಯಾಂಡ್ ಮಂಗಳೂರು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಸಾಲಮನ್ನಾ ಮಾಡುವ ಮೂಲಕ ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ರಾಜ್ಯ ಸರ್ಕಾರದ ಖಜಾನೆಯನ್ನು ಖಾಲಿ ಮಾಡಿದ್ದಾರೆಂದು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ರಾಜ್ಯ ಸರ್ಕಾರದ ಚಾಲ್ತಿ ಖಾತೆಯಲ್ಲಿ 10 ಸಾವಿರ ಕೋಟಿ ರೂಪಾಯಿ ಇದೆ. ರಾಜ್ಯದಲ್ಲಿನ ಯಾವುದೇ ಕೆಲಸಗಳನ್ನು ಮಾಡಲು ಸರ್ಕಾರಕ್ಕೆ ಯಾವುದೇ ಹಣದ ಕೊರತೆ ಇಲ್ಲ. ಸರ್ಕಾರದ ಬಳಿ ಬೇಕಾದಷ್ಟು ಹಣ ಇದೆ ಎಂದು ಅಪಪ್ರಚಾರ ಮಾಡಿದವರಿಗೆ ಹೇಳಲು ಬಯಸುತ್ತೇನೆ ಎಂದರು.
ಚಾಲ್ತಿ ಖಾತೆಯಲ್ಲದೇ ಆರ್ಬಿಐ ಕೇಂದ್ರ ಖಜಾನೆಯಿಂದ 40 ಸಾವಿರ ಕೋಟಿ ರೂ. ಸಾಲವನ್ನು ಸಹ ಕೇಳಿದ್ದೇನೆ. ಆದರೆ ಅವರು ಮೊದಲು ಚಾಲ್ತಿ ಖಾತೆಯಲ್ಲಿರುವ ಹಣವನ್ನು ಖರ್ಚು ಮಾಡಿ, ತದನಂತರ ಸಾಲ ಕೇಳೋಕೆ ಬನ್ನಿ ಎಂದರು ಎಂದು ತಿಳಿಸಿದರು.
ಕೆಲವು ಮಾಧ್ಯಮಗಳಲ್ಲಿ ನವೆಂಬರ್ 8ಕ್ಕೆ ಸರ್ಕಾರ ಬಿದ್ದು ಹೋಗುತ್ತಂತೆ. 10ಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆಂದು ಯಾರೋ ಹೇಳುತ್ತಿದ್ದಾರೆ. ಕೆಲವು ತಿಳಿಗೇಡಿಗಳು ಮಾಡಲು ಕೆಲಸವಿಲ್ಲದೇ, ಹೀಗೆ ಸುದ್ದಿ ಹಬ್ಬಿಸುತ್ತಿದ್ದಾರೆ. ಈಗಾಗಲೇ ಹಲವು ಬಾರಿ ಗಡುವು ವಿಧಿಸುವ ಕೆಲಸ ಆಗುತ್ತಲೇ ಇದೆ. ನಮ್ಮ ಸರ್ಕಾರ ಭದ್ರವಾಗಿದೆ. ಯಾರಿಂದಲೂ ಸಮ್ಮಿಶ್ರ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಮಾಧ್ಯಮಗಳು ವಾಸ್ತವಾಂಶ ಏನು ಬೇಕಾದರೂ ತೋರಿಸಿ, ಆದರೆ ಸುಮ್ಮನೆ ವದಂತಿಗಳನ್ನು ಹಬ್ಬಿಸಿ ಗೊಂದಲ ಸೃಷ್ಟಿಮಾಡಬೇಡಿ ಎಂದು ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.
ಇದೇ ವೇಳೆ ಸುಬ್ರಹ್ಮಣ್ಯ ಸ್ವಾಮೀಜಿಯವರ ಉಪವಾಸ ಸತ್ಯಾಗ್ರಹ ಕುರಿತು ಮಾತನಾಡಿದ ಅವರು, ಈ ಮೂಲಕ ಸ್ವಾಮೀಜಿಗಳಿಗೆ ಉಪವಾಸ ಕೈ ಬಿಡುವಂತೆ ಮನವಿ ಮಾಡುತ್ತೇನೆ. ನವರಾತ್ರಿ ಸಂದರ್ಭದಲ್ಲಿ ಸ್ವಾಮೀಜಿಗಳು ಉಪವಾಸ ಮಾಡಬಾರದು. ದಸರಾ ನಂತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತೇನೆ. ಈ ಬಗ್ಗೆ ಖುದ್ದು ಸ್ವಾಮೀಜಿಯವರ ಜೊತೆ ಕುಳಿತು ಚರ್ಚೆ ಮಾಡಿ ಸಮಸ್ಯೆಯನ್ನು ಇತ್ಯರ್ಥ ಮಾಡುತ್ತೇನೆ ಎಂದರು. ಇದನ್ನೂ ಓದಿ: ಕುಕ್ಕೆ ದೇವಸ್ಥಾನ ಮಂಡಳಿ ಉಪವಾಸ ಕೈಬಿಡುವಂತೆ ಸುಬ್ರಹ್ಮಣ್ಯ ಸ್ವಾಮೀಜಿಗಳ ಮನವೊಲಿಸಲಿ: ಪೇಜಾವರ ಶ್ರೀ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv