ಕೋಲ್ಕತ್ತಾ: ಫೇಸ್ಬುಕ್ ನಲ್ಲಿ 17 ವರ್ಷದ ವಿದ್ಯಾರ್ಥಿಯೊಬ್ಬ ಧರ್ಮನಿಂದನೆ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ನಾರ್ತ್ 24 ಪರಗಣಾಸ್ ಜಿಲ್ಲೆಯ ಹಲವು ಭಾಗಗಳಲ್ಲಿ ಕೋಮು ಗಲಭೆ ನಡೆದಿದ್ದು, ಇಂದು ಕೂಡ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದು ವರದಿಯಾಗಿದೆ.
ಗಲಭೆ ಹಿನ್ನೆಲೆಯಲ್ಲಿ ರಾಜ್ಯದ ಮನವಿ ಮೇರೆಗೆ ಮಂಗಳವಾರದಂದು ಕೇಂದ್ರದಿಂದ 400 ಪ್ಯಾರಾಮಿಲಿಟರಿ ಬಿಎಸ್ಎಫ್ ಟ್ರೂಪ್ಗಳನ್ನು ಕಳಿಸಲಾಗಿದೆ.
ಕೆಲವು ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದ್ದು, ಸೆಕ್ಷನ್ 144 ಜಾರಿ ಮಾಡಲಾಗಿದೆ.
ಶುಕ್ರವಾರದಂದು 17 ವರ್ಷದ ವಿದ್ಯಾರ್ಥಿ ಪ್ರಾಫೆಟ್ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಈ ಗಲಭೆ ನಡೆದಿದೆ. ವಿದ್ಯಾರ್ಥಿಯ ಪೋಸ್ಟ್ ವೈರಲ್ ಆದ ಬಳಿಕ ಸೋಮವಾರದಂದು ಜನರ ಗುಂಪು ಆತನ ಮನಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದ್ರೆ ಕೋಲ್ಕತ್ತಾದಿಂದ 70 ಕಿ.ಮೀ ದೂರದಲ್ಲಿರುವ ಬದುರಿಯಾ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಗಲಾಟೆ ಹಿಂಸಾತ್ಮಕ ರೂಪ ಪಡೆದಿದೆ. ಬಷೀರ್ಹತ್ ಹಾಗೂ ಬರಾಸತ್ ನಲ್ಲಿ ಜನರು ಪ್ರತಿಭಟನೆ ಮಾಡಿದ್ದು ವಿದ್ಯಾರ್ಥಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.