ಬೆಂಗಳೂರು: ಚುನಾವಣಾ ಸಮಯದಲ್ಲಿ ಯಡಿಯೂರಪ್ಪನವರು (BS Yediyurappa) ಪ್ರತಿದಿನ ಕರೆ ಮಾಡ್ತಿದ್ರು, ಚುನಾವಣೆ ಮುಗಿದ ಮೇಲೆ ಒಂದು ಬಾರಿಯೂ ಫೋನ್ ಮಾಡಿಲ್ಲ ಎಂದು ಮಾಜಿ ಸಚಿವ ವಿ. ಸೋಮಣ್ಣ (V Somanna) ಬೇಸರ ವ್ಯಕ್ತಪಡಿಸಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಂದು ವಿ. ಸೋಮಣ್ಣ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಕೆಲ ಕಾಲ ಪಕ್ಷದ ಸೋಲಿನ ಕುರಿತು ಅವಲೋಕನ ನಡೆಸಿದ ಅವರು, ಬಳಿಕ ಸೋಮಣ್ಣ ಅವರಿಗೆ ಸೋಲಿನ ಬಗ್ಗೆ ದೃತಿಗೆಡಬೇಡಿ, ಪಕ್ಷ ನಿಮಗೆ ಸೂಕ್ತ ಸ್ಥಾನಮಾನ ನೀಡಲಿದೆ ಎಂದು ಅಭಯ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಗೂಂಡಾ ರಾಜ್ಯ ಆಗಿ ಬದಲಾವಣೆ: ಕಟೀಲ್ ಕಿಡಿ
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿ. ಸೋಮಣ್ಣ, ಯಡಿಯೂರಪ್ಪ ಅವರು ಚುನಾವಣಾ ಸಮಯದಲ್ಲಿ ಪ್ರತಿದಿನ ಕರೆ ಮಾಡ್ತಿದ್ರು. ಚುನಾವಣೆ ಮುಗಿದ ಮೇಲೆ ಈವರೆಗೂ ಕರೆ ಮಾಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕಾಶ್ಮೀರಿ ಪ್ರತ್ಯೇಕತಾವಾದಿ ಹತ್ಯೆಗೈದು ತಲೆಮರೆಸಿಕೊಂಡಿದ್ದ ಮುಜಾಹಿದ್ದೀನ್ ಉಗ್ರರು 33 ವರ್ಷಗಳ ಬಳಿಕ ಅರೆಸ್ಟ್
ಇದೇ ವೇಳೆ ನಿಮಗೆ ಪಕ್ಷ ಧೈರ್ಯತುಂಬುವ ಕೆಲಸ ಮಾಡಿದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ನನಗೆ ಏನು ಧೈರ್ಯ ತುಂಬಬೇಕ್ರಿ? 45 ವರ್ಷಗಳಿಂದ ಇದೇ ಕೆಲಸ ಮಾಡಿದ್ದೇನೆ. ನನ್ನ ಚಿನ್ನದಂತಹ ಕ್ಷೇತ್ರ ಬಿಟ್ಟಿದ್ದೇನೆ. ವರಿಷ್ಠರು ಹೇಳಿದ್ರಲ್ಲಾ ಅಂತಾ ಬೇರೆ ಕ್ಷೇತ್ರಕ್ಕೆ ಹೋದೆ. ಅಲ್ಲಿ ಸೋಲಾಯಿತು. ಅದನ್ನು ಅರಗಿಸಿಕೊಳ್ಳುವ ಶಕ್ತಿಯೂ ನನಗಿದೆ. ನಾವೆಲ್ಲರೂ ಮನುಷ್ಯರಲ್ವಾ? ನಾವೇನು ದೆವ್ವನಾ? ಪಕ್ಷ ನನಗಿಂತ ದೊಡ್ಡದು. ಪಕ್ಷ ಹೇಳಿದ್ದನ್ನು ನನ್ನಂತಹವರು ಮಾಡದೇ ಇನ್ಯಾರು ಮಾಡೋಕಾಗುತ್ತೆ ಎಂದು ಹೇಳಿದರು.